ಕರ್ನಾಟಕ

ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ

Pinterest LinkedIn Tumblr

hanging

ಚಿಕ್ಕಮಗಳೂರು, ಜ.31: ರಾತ್ರಿ ಮಗುವಿನ ಹುಟ್ಟುಹಬ್ಬ ಆಚರಿಸಿದ ಟ್ರ್ಯಾಕ್ಟರ್ ಚಾಲಕ ಪತ್ನಿ ಹಾಗೂ ಮಕ್ಕಳಿಬ್ಬರನ್ನು ಕೊಂದು ತಾನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಹೊಸಮನೆ ಬಡಾವಣೆಯ ನಿವಾಸಿ ಉಮೇಶ್ (30) ಪತ್ನಿ ಜಯಲಕ್ಷ್ಮಿ (25), ಮಕ್ಕಳಾದ ಹೇಮಾ (4), ಶಿವು (1) ಅವರನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿರುವ ಟ್ರ್ಯಾಕ್ಟರ್ ಚಾಲಕ. ಉಮೇಶ್ ಟ್ರ್ಯಾಕ್ಟರ್ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ನಿನ್ನೆ ರಾತ್ರಿ ಅಕ್ಕಪಕ್ಕದ ಮನೆಯವರನ್ನು ಕರೆದು ಮಗು ಶಿವುನ ಒಂದನೆ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದ್ದರು.

ಇಂದು ಬೆಳಿಗ್ಗೆ ಬಹಳ ಹೊತ್ತಾದರೂ ಉಮೇಶ್ ಕೆಲಸಕ್ಕೆ ಬಾರದ ಹಿನ್ನೆಲೆಯಲ್ಲಿ ಟ್ರ್ಯಾಕ್ಟರ್ ಮಾಲೀಕ ಹಲವು ಬಾರಿ ಮೊಬೈಲ್‌ಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸದ ಕಾರಣ ಮತ್ತೊಬ್ಬ ಕೆಲಸಗಾರನನ್ನು ಉಮೇಶನ ಮನೆ ಬಳಿಗೆ ಕಳುಹಿಸಿದ್ದಾರೆ. ಕೆಲಸಗಾರ ಉಮೇಶನ ಮನೆಗೆ ಬಂದಾಗ ಬಾಗಿಲು ಬಡಿದರೂ ತೆರೆಯದಿದ್ದಾಗ ಕಿಟಕಿಯಿಂದ ನೋಡಿದ್ದು, ಉಮೇಶ್ ನೇಣು ಬಿಗಿದ ಸ್ಥಿತಿಯಲ್ಲೂ, ಪತ್ನಿ ಹಾಗೂ ಮಕ್ಕಳು ನೆಲದ ಮೇಲೆ ಮಲಗಿ ಸಾವನ್ನಪ್ಪಿರುವುದು ಕಂಡಿದೆ. ಕೂಡಲೇ ನಗರ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ದಾವಿಸಿರುವ ಪೊಲೀಸರು ಪರಿಶೀಲನೆ ನಡೆಸಿ ಮರಣೋತ್ತರ ಪರೀಕ್ಷೆಗಾಗಿ ನಾಲ್ಕೂ ಶವಗಳನ್ನು ಮಲ್ಲೇಗೌಡ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಮೇಶ್ ಪತ್ನಿ ಹಾಗೂ ಮಕ್ಕಳನ್ನು ವಿಷವುಣಿಸಿ ಇಲ್ಲವೆ ಕತ್ತು ಹಿಸುಕಿ ಕೊಲೆ ಮಾಡಿ ತಾನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಪೊಲೀಸರು ತಿಳಿಸಿದ್ದಾರೆ. ಆತ್ಮಹತ್ಯೆಗೂ ಮುನ್ನ ಉಮೇಶ್ ಪತ್ರವೊಂದನ್ನು ಬರೆದಿದ್ದು, ನಮ್ಮ ಸಾವಿಗೆ ನಾವೇ ಕಾರಣ. ಮನ್ನಿಸಿ ಎಂದು ಬರೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ನಿನ್ನೆ ಉಮೇಶ್ ತನ್ನ ತಂದೆ-ತಾಯಿಗೆ ಕರೆ ಮಾಡಿ ಮಾತನಾಡಿದ್ದ ಎಂದು ತಿಳಿದುಬಂದಿದೆ. ಪತ್ನಿ ಹಾಗೂ ಮಗಳಿಗೆ ಅನಾರೋಗ್ಯವಿದ್ದು, ಈ ವಿಚಾರವಾಗಿ ದಂಪತಿ ನಡುವೆ ಆಗಾಗ ಜಗಳವಾಗುತ್ತಿತ್ತು ಎಂದು ತಿಳಿದುಬಂದಿದೆ.

Write A Comment