ಬೆಂಗಳೂರು: ನಗರದ ಮಾಣೆಕ್ ಷಾ ಕವಾಯತು ಮೈದಾನದಲ್ಲಿ ಸೋಮವಾರ ನಡೆಯಲಿರುವ ರಾಜ್ಯಮಟ್ಟದ ಗಣರಾಜ್ಯೋತ್ಸವ ಸಮಾರಂಭಕ್ಕೆ ಪೂರ್ವಸಿದ್ಧತೆಗಳು ಪೂರ್ಣಗೊಂಡಿದ್ದು, ಬಿಗಿ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಎಂ.ಎನ್.ರೆಡ್ಡಿ ತಿಳಿಸಿದರು.
ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೈದಾನದಲ್ಲಿನ ಘಟನೆಗಳ ಬಗ್ಗೆ ನಿಗಾ ವಹಿಸಲು 36 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ವಾಚ್ ಟವರ್ಸ್ಗಳನ್ನು ನಿರ್ಮಿಸಿ ಶಸ್ತ್ರಸಜ್ಜಿತ ಪೊಲೀಸರಿಗೆ ಬೈನಾಕ್ಯುಲರ್ಸ್ಗಳನ್ನು ನೀಡಲಾಗಿದೆ’ ಎಂದರು.
‘ಬಂದೋಬಸ್ತ್ಗೆ 9 ಡಿಸಿಪಿ, 22 ಎಸಿಪಿ, 96 ಇನ್ಸ್ಪೆಕ್ಟರ್, 256 ಪಿಎಸ್ಐ, 327 ಎಎಸ್ಐ, 850 ಹೆಡ್ ಕಾನ್ಸ್ಟೆಬಲ್, 1882 ಕಾನ್ಸ್ಟೆಬಲ್, 128 ಮಹಿಳಾ ಸಿಬ್ಬಂದಿ, 37 ಕೆಎಸ್ಆರ್ಪಿ ಹಾಗೂ ಸಿಎಆರ್ ತುಕಡಿ, 2 ಕ್ಷಿಪ್ತ ಕಾರ್ಯಾಚರಣೆ ಪಡೆಯನ್ನು ನಿಯೋಜಿಸಲಾಗಿದೆ’ ಎಂದರು.
ಬಿಬಿಎಂಪಿ ಆಯುಕ್ತ ಎಂ.ಲಕ್ಷ್ಮಿನಾರಾಯಣ ಮಾತನಾಡಿ, ಬೆಳಿಗ್ಗೆ 9 ಗಂಟೆಗೆ ರಾಜ್ಯಪಾಲ ವಜುಭಾಯಿ ವಾಲಾ ಧ್ವಜಾರೋಹಣ ನೆರವೇರಿಸುವರು. ಈ ಸಂದರ್ಭದಲ್ಲಿ ಆಕರ್ಷಕ ಪಥಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
‘ಪಥಸಂಚಲನದಲ್ಲಿ ಪೊಲೀಸ್, ಸ್ಕೌಟ್ಸ್, ಗೈಡ್ಸ್, ಎನ್ಸಿಸಿ, ಸೇವಾದಳ, ವಿವಿಧ ಶಾಲೆಗಳ ವಿದ್ಯಾರ್ಥಿಗಳೂ ಸೇರಿದಂತೆ 63 ತುಕಡಿಗಳಲ್ಲಿ 1900 ಮಂದಿ ಭಾಗವಹಿಸುವರು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ 2650 ವಿದ್ಯಾರ್ಥಿಗಳು ಭಾಗವಹಿಸುವರು’ ಎಂದರು.
‘ಬೆಂಗಳೂರು ಉತ್ತರ ವಲಯದ ವಿವಿಧ ಶಾಲೆಗಳ 750 ಮಕ್ಕಳಿಂದ ಯೋಗಾಸನ, ಚಿಕ್ಕಬಿದರಕಲ್ಲು ಸರ್ಕಾರಿ ಸಂಯುಕ್ತ ಪ್ರೌಢಶಾಲೆಯ 650 ಮಕ್ಕಳಿಂದ ಹಲಗಲಿ ಬೇಡರು, ಹೆಸರುಘಟ್ಟ ಮುಖ್ಯ ರಸ್ತೆಯ ಸೇಂಟ್ ಥೆರೆಸಾ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ತ್ರಿವೇಣಿ ವಿದ್ಯಾಸಂಸ್ಥೆಯ 600 ಮಕ್ಕಳಿಂದ ವಂದೇ ಮಾತರಂ, ಬನ್ನೇರುಘಟ್ಟ ರಸ್ತೆ ವೀವರ್ಸ್ ಕಾಲೋನಿಯ ಎನ್.ಬಿ.ಎನ್. ವಿದ್ಯಾಮಂದಿರ ಹಾಗೂ ಹೆಬ್ಬಗೋಡಿಯ ಸೇಂಟ್ ಮೇರಿಸ್ ಪ್ರೌಢಶಾಲೆಯ 650 ಮಕ್ಕಳಿಂದ ನವಭಾರತ ಎಂಬ ಸಾಂಸ್ಕತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
‘ಕಾರ್ಯಕ್ರಮ ವೀಕ್ಷಿಸಲು ಬರುವ ಅತಿಗಣ್ಯ, ಗಣ್ಯ, ಆಹ್ವಾನಿತರು ಹಾಗೂ ಸಾರ್ವಜನಿಕರಿಗೆ ಒಟ್ಟು 11 ಸಾವಿರ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಜಿ-2 ಪ್ರವೇಶದ್ವಾರದಲ್ಲಿ ಅತಿ ಗಣ್ಯವ್ಯಕ್ತಿಗಳಿಗೆ, ಜಿ-1 ಪ್ರವೇಶದ್ವಾರದಲ್ಲಿ ಗಣ್ಯ ವ್ಯಕ್ತಿಗಳು, ಸ್ವಾತಂತ್ರ್ಯ ಹೋರಾಟಗಾರರು, ರಕ್ಷಣಾ ಇಲಾಖೆಯ ಅಧಿಕಾರಿಗಳು ಹಾಗೂ ಮಾಧ್ಯಮ ಪ್ರತಿನಿಧಿ-ಗಳಿಗೆ, ಜಿ-3 ಪ್ರವೇಶದ್ವಾರದಲ್ಲಿ ಇತರ ಎಲ್ಲಾ ಇಲಾಖೆಯ ಅಧಿಕಾರಿಗಳು, ನಿವೃತ್ತ ಸೇನಾಧಿಕಾರಿಗಳು, ಬಿಎಸ್ಎಫ್ ಅಧಿಕಾರಿಗಳಿಗಾಗಿ ಹಾಗೂ ಜಿ-4 ಪ್ರವೇಶದ್ವಾರದಲ್ಲಿ ಸಾರ್ವಜನಿಕರಿಗೆ ಪ್ರವೇಶಾವಕಾಶ ಕಲ್ಪಿಸಲಾಗಿದೆ’ ಎಂದರು. ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್ ಇದ್ದರು.