ತುಮಕೂರು, ಜ.18: ಕಳಪೆ ಕಾಮಗಾರಿ ಬಗ್ಗೆ ಪ್ರಶ್ನಿಸಿದ ಯುವಕನಿಗೆ ಕಪಾಳಮೋಕ್ಷ ಮಾಡಿದ ಲೋಕೋಪಯೋಗಿ ಇಲಾಖೆ ಇಂಜಿನಿಯರ್ನನ್ನು ಗ್ರಾಮಸ್ಥರು ಹಿಗ್ಗಾಮೊಗ್ಗ ಥಳಿಸಿದ ಘಟನೆ ಶಿರಾ ತಾಲ್ಲೂಕಿನ ಸೀಗಲಹಳ್ಳಿಯಲ್ಲಿ ನಡೆದಿದೆ. ಆಂಧ್ರದ ಅಮರಾಪುರ ರಸ್ತೆಯಿಂದ ಶಿರಾ ತಾಲ್ಲೂಕಿನ ಸೀಗಲಹಳ್ಳಿಯವರೆಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ನಡೆದಿದ್ದು, 3 ಕಿ.ಮೀ. ಉದ್ದದ ಈ ರಸ್ತೆ ನಿರ್ಮಾಣಕ್ಕೆ ಒಂದು ಕೋಟಿ ರೂ. ಮಂಜೂರಾಗಿದ್ದು, ಆದರೆ, ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡುತ್ತಿದ್ದು, ಈ ಬಗ್ಗೆ ಗ್ರಾಮಸ್ಥರು ಸಂಬಂಧಿಸಿದ ಅಧಿಕಾರಿಯನ್ನು ಪ್ರಶ್ನಿಸಿದಾಗ ಅಧಿಕಾರಿಗಳು ಹಾರಿಕೆಯ ಉತ್ತರ ನೀಡಿದ್ದು, ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಈ ಸಂದರ್ಭಲ್ಲಿ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಸ್ಥಳಕ್ಕೆ ಆಗಮಿಸಿ ಮಾಧ್ಯಮಗಳಿಗೆ ವಿವಿವರಣೆ ನೀಡುತ್ತಿದ್ದಾಗ ಯುವಕನೊಬ್ಬ ಅಧಿಕಾರಿಯ ವಿರುದ್ಧ ಘೋಷಣೆ ಕೂಗಿದ್ದು, ಇದರಿಂದ ಕೋಪಗೊಂಡ ಇಂಜಿನಿಯರ್ ಯುವಕನಿಗೆ ಕಪಾಳಮೋಕ್ಷ ಮಾಡಿದ್ದಾರೆ.
ಇದನ್ನು ಕಂಡ ಗ್ರಾಮಸ್ಥರು ರೊಚ್ಚಿಗೆದ್ದು ಇಂಜಿನಿಯರ್ ಚಿಕ್ಕದಾಸಪ್ಪನನ್ನು ಹಿಗ್ಗಾಮುಗ್ಗ ಥಳಿಸಿದ್ದು, ಸೇವೆಯಿಂದ ಅಮಾನತು ಪಡಿಸುವಂತೆ ಆಗ್ರಹಿಸಿ ಗುತ್ತಿಗೆ ರದ್ದುಪಡಿಸುವಂತೆ ಒತ್ತಾಯಿಸಿದ್ದಾರೆ.