ಅವಿವಾಹಿತ ಮುಸ್ಲಿಂ ಮಹಿಳೆಗೂ ಜೀವನಾಂಶದ ಹಕ್ಕಿದೆ. ಅಪರಾಧ ದಂಡಸಂಹಿತೆ ಸೆಕ್ಷನ್ 125ರಡಿ ಹಾಗೂ ಮಹಮ್ಮದೀಯ ಕಾನೂನಿನಲ್ಲೂ ಜೀವನಾಂಶದ ವ್ಯಾಖ್ಯಾನವಿದೆ. ಇತರೆ ಧರ್ಮದ ವಯಸ್ಕ ಅವಿವಾಹಿತ ಮಹಿಳೆಯರಂತೆ ಮುಸ್ಲಿಂ ಮಹಿಳೆಯರಿಗೂ ಇದು ಅನ್ವಯವಾಗುತ್ತದೆ ಎಂದು ರಾಜ್ಯ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಆ ಮೂಲಕ ಅವಿವಾಹಿತ ಮುಸ್ಲಿಂ ಮಹಿಳೆಯರ ಜೀವನಾಂಶದ ಬಗ್ಗೆ ಇದ್ದ ಗೊಂದಲಗಳಿಗೆ ನ್ಯಾ. ಕೆ.ಎನ್. ಫಣೀಂದ್ರ ಅವರು ತೆರೆ ಎಳೆದಿದ್ದಾರೆ.
”ವಯಸ್ಕ ಅವಿವಾಹಿತ ಮುಸ್ಲಿಂ ಮಹಿಳೆಯರ ಜೀವನಾಂಶದ ಬಗ್ಗೆ ಕಾನೂನಿನಲ್ಲಿ ನಿಖರತೆ ಇಲ್ಲ. ಆಕೆಗೂ ಜೀವನಾಂಶದ ಹಕ್ಕಿದೆ ಎಂದು ನೂರ್ಖಾಟೂನ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದ್ದರೂ ಅದು ನೇರವಾಗಿ ಮುಸ್ಲಿಂ ಮಹಿಳೆಯ ಜೀವನಾಂಶಕ್ಕೆ ಸಂಬಂಧಿಸಿದ ಪ್ರಕರಣವಲ್ಲ. ಕೇರಳ ಹೈಕೋರ್ಟ್ ಕೂಡ ಅವಿವಾಹಿತ ಮುಸ್ಲಿಂ ಮಹಿಳೆಗೆ ಜೀವನಾಂಶ ನೀಡುವಂತಿಲ್ಲ ಎಂದು ತೀರ್ಪು ನೀಡಿದೆ. ಆದರೆ ಬದಲಾದ ಕಾಲ ಘಟ್ಟದಲ್ಲಿ ಆದಕ್ಕೆ ಹೊಸ ವ್ಯಾಖ್ಯಾನ ನೀಡಬೇಕಾಗಿದೆ,” ಎಂದು ನ್ಯಾಯಪೀಠ ಹೇಳಿದೆ.
ನ್ಯಾಯಾದಾನದಲ್ಲಿ ಸುಧಾರಣೆ ಹಾಗೂ ಆತ್ಮಾವಲೋಕನ ನಿರಂತರವಾಗಿರಬೇಕು ಎಂದಿರುವ ನ್ಯಾಯಪೀಠ ‘ಜಾತಿ, ಧರ್ಮ ಮೀರಿ ಜನರಿಗೆ ಸೂಕ್ತ ನ್ಯಾಯ ದೊರಕಿಸಿಕೊಡಲು ಭಿನ್ನ ದೃಷ್ಟಿಕೋನಗಳಿಂದ ಕಾನೂನನ್ನು ಅವಲೋಕಿಸಬೇಕು. ಅಸಹಾಯಕ ಅವಿವಾಹಿತ ಮಹಿಳೆಯನ್ನು ಸಲಹಲು ತಂದೆ ನಿರಾಕರಿಸಿದರೆ ಅಂಥವರನ್ನು ಸಿಆರ್ಪಿಸಿ ಸೆಕ್ಷನ್ 125(ಸಿ)ರಡಿ ಮಾನಸಿಕ ಜರ್ಜರಿತಕ್ಕೆ (ಮೆಂಟಲ್ ಇಂಜುರಿ) ಒಳಗಾದವರು ಎಂದು ಪರಿಗಣಿಸಬಹುದು’ ಎಂದು ಅಭಿಪ್ರಾಯಪಟ್ಟಿದೆ.
‘ಹಿಂದೂ ದತ್ತಕ ಹಾಗೂ ಜೀವನಾಂಶ ಕಾಯಿದೆಯಲ್ಲಿ ಅವಿವಾಹಿತ ಹೆಣ್ಣುಮಕ್ಕಳಿಗೂ ಜೀವನಾಂಶಕ್ಕೆ ಅವಕಾಶಗಳಿವೆ. ಅದೇ ರೀತಿ ಮಹಮ್ಮದೀಯ ಕಾನೂನಿನಲ್ಲೂ ಅವಕಾಶವಿದೆ. ಈ ಎಲ್ಲ ಕಾನೂನಾತ್ಮಕ ಅಂಶಗಳನ್ನು ಅವಲೋಕಿಸಿದರೆ ಜೀವನಾಂಶ ಪಡೆಯುವ ಹಕ್ಕು ಹಿಂದೂ, ಮುಸ್ಲಿಂ, ಕ್ರೈಸ್ತ, ಪಾರ್ಸಿ ಹೀಗೆ ಎಲ್ಲ ಅವಿವಾಹಿತ ಮಹಿಳೆಯರಿಗೂ ಅನ್ವಯಿಸುತ್ತದೆ ಎಂಬುದು ದೃಢವಾಗುತ್ತದೆ. ಈ ಪ್ರಕರಣದಲ್ಲೂ, ಆಕೆ ಮದುವೆ ಆಗುವವರೆಗೆ ತಂದೆ ಜೀವನಾಂಶ ನೀಡಬೇಕು’ ಎಂದು ನ್ಯಾಯಪೀಠ ಹೇಳಿದೆ.
ಆದರೆ ಈ ಹಕ್ಕು ಅವಿವಾಹಿತ ಪುರುಷನಿಗೆ ಇರುವುದಿಲ್ಲ. ಆತ ಮಾನಸಿಕ ಅಥವ ದೈಹಿಕ ನ್ಯೂನತೆಯಿಂದ ಬಳಲುತ್ತಿದ್ದರೆ ಅಂತಹ ಸಂದರ್ಭಗಳಲ್ಲಿ ಜೀವನಾಂಶ ಕೇಳಬಹುದು ಎಂದೂ ನ್ಯಾಯಪೀಠ ತೀರ್ಪಿನಲ್ಲಿ ತಿಳಿಸಿದೆ.
ಮೆಂಟಲಿ ಇಂಜುರಿಗೆ ಹೊಸ ವ್ಯಾಖ್ಯಾನ
‘ಇಂಜುರಿ ಎಂದರೆ ಯಾವುದೇ ವ್ಯಕ್ತಿಯ ದೇಹ, ಮನಸ್ಸು ಘನತೆಗೆ ತೊಂದರೆ ಮಾಡಿದರೆ ಅದು ಇಂಜುರಿ ಎಂದು ಕಾನೂನಿನಲ್ಲಿ ವ್ಯಾಖ್ಯಾನಿಸಲಾಗಿದೆ. ಜೀವನಾಂಶ ಕೇಳುವ ಹಕ್ಕನ್ನು ಯಾರಾದರೂ ಕಸಿದುಕೊಂಡರೆ ಅದೂ ಮಾನಸಿಕ ಜರ್ಜರಿತ ಆಗಲಿದೆ. ಅದೇ ಉದ್ದೇಶದಿಂದಲೇ ಶಾಸಕಾಂಗ ಸಿಆರ್ಪಿಸಿ ಸೆಕ್ಷನ್ 125(ಸಿ)ಯಲ್ಲಿ ಇಂಜುರಿ ಪದವನ್ನು ಸೇರಿಸಿದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಮಹಿಳೆ ಅಬಲೆಯಲ್ಲ
ನ್ಯಾಯಮೂರ್ತಿಗಳು ತಮ್ಮ 59 ಪುಟಗಳ ತೀರ್ಪಿನಲ್ಲಿ ಮನುಸ್ಮೃತಿಯನ್ನು ಉಲ್ಲೇಖಿಸಿ ”ಹೆಣ್ಣುಮಗು ಯೌವನಾವಸ್ಥೆಗೆ ಬರುವವರೆಗೂ ಆಕೆಯನ್ನು ನೋಡಿಕೊಳ್ಳುವುದು ತಂದೆಯ ಜವಾಬ್ದಾರಿ. ವಿವಾಹದ ನಂತರ ಗಂಡ ಆಕೆಯನ್ನು ಕಾಪಾಡಬೇಕು. ಮುಪ್ಪಿನಲ್ಲಿ ಮಗ ಆರೈಕೆ ಮಾಡಬೇಕು. ಯಾವುದೇ ಹಂತದಲ್ಲೂ ಮಹಿಳೆಯನ್ನು ಒಂಟಿಯನ್ನಾಗಿ, ಅಬಲೆಯನ್ನಾಗಿ ಮಾಡಬಾರದು,” ಎಂದಿದ್ದಾರೆ.
ಏನಿದು ಪ್ರಕರಣ?
ತುಮಕೂರಿನ 28 ವರ್ಷದ ಅವಿವಾಹಿತ ಮಹಿಳೆ ಮೆಹರುನ್ನೀಸಾ, ತನಗೆ ಆದಾಯ ಇಲ್ಲದಿರುವುದರಿಂದ ಜೀವನ ನಿರ್ವಹಣೆಗೆ ಆರ್ಥಿಕ ನೆರವು ಕೋರಿ ಜೆಎಂಎಫ್ಸಿ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯ ಮಾಸಿಕ 800 ರೂ. ಜೀವನಾಂಶ ನೀಡುವಂತೆ ಆಕೆಯ ತಂದೆಯಾದ ಪೊಲೀಸ್ ಪೇದೆ ಸೈಯದ್ ಹಬೀಬುಲ್ಲಾಗೆ ಆದೇಶ ನೀಡಿತ್ತು. ಆ ತೀರ್ಪನ್ನು ಜಿಲ್ಲಾ ತ್ವರಿತಗತಿ ನ್ಯಾಯಾಲಯ ರದ್ದುಗೊಳಿಸಿತ್ತು. ಅದನ್ನು ಪ್ರಶ್ನಿಸಿ ಮೆಹರುನ್ನೀಸಾ ಹೈಕೋರ್ಟ್ ಮೆಟ್ಟಿಲೇರಿದ್ದರು.
”ನಾನು ಪ್ರಾಪ್ತ ವಯಸ್ಕಳಾದರೂ ಅಸಹಾಯಕ ಹೆಣ್ಣುಮಗಳು. ಯಾವುದೇ ಉದ್ಯೋಗವಿಲ್ಲ, ಜೀವನೋಪಾಯಕ್ಕೆ ದಾರಿ ಇಲ್ಲ. ತಂದೆ ಸರಕಾರಿ ಉದ್ಯೋಗದಲ್ಲಿರುವುದರಿಂದ ಕೈ ತುಂಬಾ ದುಡಿಯುತ್ತಿದ್ದಾರೆ. ಆದ್ದರಿಂದ ನನಗೆ ಅವರಿಂದ ಜೀವನಾಂಶ ಕೊಡಿಸಬೇಕು,” ಎಂಬುದು ಮೆಹರುನ್ನೀಸಾ ವಾದ.
ಆದರೆ ಹಬೀಬುಲ್ಲಾ ”1993ರಲ್ಲೇ ಮೆಹರುನ್ನೀಸಾ ತಾಯಿಗೆ ತಲಾಕ್(ವಿಚ್ಛೇದನ) ನೀಡಿದ್ದೇನೆ. ಮಗಳೂ ಕೂಡ ಆಕೆಯ ಜೊತೆಯಲ್ಲೇ ಇದ್ದಾಳೆ. ಪತ್ನಿ ಜಮಾತ್ ಮುಂದೆ ತಾನೇ ಮಗಳನ್ನು ಆರೈಕೆ ಮಾಡುತ್ತೇನೆ ಎಂದು ಹೇಳಿದ್ದಳು. ಜೀವನಾಂಶ ನೀಡಲು ಆಕೆಯೇನೂ ಚಿಕ್ಕಮಗುವಲ್ಲ. ಪ್ರಾಪ್ತ ವಯಸ್ಕ ಮಗಳಿಗೆ ಜೀವನಾಂಶ ನೀಡುವ ಅಗತ್ಯವಿಲ್ಲ ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿದೆ. ಹಾಗಾಗಿ ಜೀವನಾಂಶ ಕೊಡುವುದಿಲ್ಲ,” ಎಂಬ ವಾದವನ್ನು ನ್ಯಾಯಾಲಯದ ಮುಂದಿಟ್ಟಿದ್ದರು.