ಬೆಂಗಳೂರು: ದರೋಡೆ ಮತ್ತು ಸರಗಳವು ಪ್ರಕರಣದ ಆರೋಪಿಗಳನ್ನು ಬಂಧಿಸಿರುವ ಎಚ್ಎಎಲ್ ಪೊಲೀಸರು ಚಿನ್ನಾಭರಣ ಸೇರಿದಂತೆ ಸುಮಾರು ₨ 13 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮೈಸೂರು ರಸ್ತೆ ಬಳಿಯ ಪಾದರಾಯನಪುರದ ಯೂನಿಸ್, ಅಫ್ರೋಜ್ ಮತ್ತು ಇಮ್ತಿಯಾಜ್ ಬಂಧಿತರು.
ಆರೋಪಿಗಳು ಆಟೊ ಹಾಗೂ ಬೈಕ್ ಕಳವು ಮಾಡುತ್ತಿದ್ದರು. ನಂತರ ಆ ವಾಹನಗಳಲ್ಲಿ ನಗರದ ವಿವಿಧೆಡೆ ಸಂಚರಿಸಿ ಸಾರ್ವಜನಿಕರನ್ನು ಮಾರಕಾಸ್ತ್ರಗಳಿಂದ ಬೆದರಿಸಿ ಚಿನ್ನಾಭರಣ, ಹಣ ದೋಚುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರು ಡಿಸೆಂಬರ್ನಲ್ಲಿ ಒಂದೇ ದಿನ ಕೆಲವೇ ತಾಸುಗಳ ಅಂತರದಲ್ಲಿ ಮಾರತ್ಹಳ್ಳಿ, ಬೊಮ್ಮನಹಳ್ಳಿ ಮತ್ತು ಚಾಮರಾಜಪೇಟೆಯಲ್ಲಿ ದರೋಡೆ ಮಾಡಿದ್ದರು. ಘಟನಾ ದಿನ ಆ ಪ್ರದೇಶಗಳ ವ್ಯಾಪ್ತಿಯ ಮೊಬೈಲ್ ಗೋಪುರಗಳ ಮೂಲಕ ಬಂದು ಹೋಗಿರುವ ಕರೆಗಳ ಮಾಹಿತಿ ಕಲೆ ಹಾಕಿದಾಗ ಆರೋಪಿಗಳ ಮೊಬೈಲ್ ಸಂಖ್ಯೆಗಳ ಬಗ್ಗೆ ಸುಳಿವು ಸಿಕ್ಕಿತು. ಆ ಸುಳಿವು ಆಧರಿಸಿ ಅವರನ್ನು ಪತ್ತೆಹಚ್ಚಿ ಬಂಧಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಂಧಿತರು ಚಾಮರಾಜಪೇಟೆ, ಮಡಿವಾಳ, ಎಲೆಕ್ಟ್ರಾನಿಕ್ಸಿಟಿ, ಎಚ್ಎಎಲ್, ಮೈಕೊಲೇಔಟ್, ಕಲಾಸಿಪಾಳ್ಯ, ಜಗಜೀವನರಾಂನಗರ, ಸೆಂಟ್ರಲ್ ಠಾಣೆ ವ್ಯಾಪ್ತಿಯಲ್ಲಿ ಅಪರಾಧ ಕೃತ್ಯಗಳನ್ನು ಎಸಗಿದ್ದರು. ಅವರನ್ನು ಈ ಹಿಂದೆಯೇ ಬಂಧಿಸಲಾಗಿತ್ತು. ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಅವರು ಅಪರಾಧ ಚಟುವಟಿಕೆಗಳನ್ನು ಮುಂದುವರಿಸಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಆರೋಪಿಗಳ ಬಂಧನದಿಂದ 11 ಪ್ರಕರಣಗಳು ಪತ್ತೆಯಾಗಿವೆ. ಅವರಿಂದ 415 ಗ್ರಾಂ ಚಿನ್ನಾಭರಣ, ಬೈಕ್ ಮತ್ತು ಕಾರು ಜಪ್ತಿ ಮಾಡಲಾಗಿದೆ.