ಹುಬ್ಬಳ್ಳಿ: ನಗರದ ಗದಗ ರಸ್ತೆಯಲ್ಲಿರುವ ನೈರುತ್ಯ ರೈಲ್ವೆಯ ಕಾರ್ಯಾಗಾರದ ಆವರಣದಲ್ಲಿ ಸಂಗ್ರಹಿಸಿಡಲಾಗಿದ್ದ ಅನುಪಯುಕ್ತ ವಸ್ತುಗಳಿಗೆ ಬುಧವಾರ ಮಧ್ಯಾಹ್ನ ಬೆಂಕಿ ತಗುಲಿ, ದಟ್ಟ ಹೊಗೆ ಆವರಿಸಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಯಿತು.
ಬ್ಯಾಟರಿ ವಿಭಾಗ ಮತ್ತು ರೆಕ್ಸಿನ್ ಇಡಲಾಗಿದ್ದ ಗೋದಾಮು ಸಮೀಪ ಬೆಂಕಿ ಕಾಣಿಸಿಕೊಂಡಿದ್ದರಿಂದ ಕಾರ್ಯಾಗಾರದ ಸಿಬ್ಬಂದಿ ಗಾಬರಿಗೊಂಡಿದ್ದರು. ಅಗ್ನಿಶಾಮಕ ಸಿಬ್ಬಂದಿ ಐದು ತಾಸಿಗೂ ಹೆಚ್ಚು ಹೊತ್ತು ನಡೆಸಿದ ಕಾರ್ಯಾಚರಣೆಯಿಂದ ಭಾರಿ ಅನಾಹುತ ತಪ್ಪಿದೆ.
ಪೇಯಿಂಟ್, ಬೋಗಿಗಳ ಆಸನಗಳಿಗೆ ಹಾಕಿ ಉಳಿದ ರೆಕ್ಸಿನ್ ತುಂಡುಗಳು, ದುರಸ್ತಿ ಬಳಿಕ ಉಳಿದ ಲೋಹಗಳು ಮತ್ತಿತರ ತ್ಯಾಜ್ಯಗಳ ಪೈಕಿ ಕೆಲವನ್ನು ಕಾರ್ಯಾಗಾರದ ಆವರಣದ ಶೆಡ್ನಲ್ಲಿ ಪ್ರತಿದಿನ ಸುಡಲಾಗುತ್ತದೆ. ಬುಧವಾರವೂ ಕೆಲವು ವಸ್ತುಗಳನ್ನು ಸುಡಲಾಗಿತ್ತು.
ಈ ವೇಳೆ ಸುತ್ತಲಿನ ಒಣಗಿದ ಹುಲ್ಲುಗಳಿಗೆ ಬೆಂಕಿ ವ್ಯಾಪಿಸಿ, ಬಳಿಕ ರಾಶಿ ಹಾಕಲಾಗಿದ್ದ ಇತರ ತ್ಯಾಜ್ಯಕ್ಕೂ ಬೆಂಕಿ ಹೊತ್ತಿಕೊಂಡಿತು. ಕೆಲಹೊತ್ತು ಕಾರ್ಯಾಗಾರದ ಸಿಬ್ಬಂದಿ ಬೆಂಕಿ ನಂದಿಸಲು ಯತ್ನಿಸಿದರೂ ಮಧ್ಯಾಹ್ನ 12ರ ಸುಮಾರಿಗೆ ತ್ಯಾಜ್ಯವಿದ್ದ ಇಡೀ ಪ್ರದೇಶವನ್ನು ಬೆಂಕಿ ಆವರಿಸಿಕೊಂಡಿತು. ಸಮೀಪದಲ್ಲಿದ್ದ ಕೆಲವು ಮರಗಳೂ ಸುಟ್ಟು ಕರಕಲಾಗಿವೆ.
ಬೆಂಕಿ ಮತ್ತಷ್ಟು ಪ್ರದೇಶಕ್ಕೆ ವ್ಯಾಪಿಸುತ್ತಿರುವುದನ್ನು ಕಂಡು ಆತಂಕಗೊಂಡ ಕಾರ್ಯಾಗಾರದ ಸಿಬ್ಬಂದಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಐದು ವಾಹನಗಳಲ್ಲಿ ಬಂದ ಅಗ್ನಿಶಾಮಕ ಸಿಬ್ಬಂದಿ, ಹರಸಾಹಸ ನಡೆಸಿ ಬೆಂಕಿ ನಂದಿಸಿದರು. ಕಾರ್ಯಾಗಾರದ ಸಿಬ್ಬಂದಿ ಕೂಡ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.
‘ಬೋಗಿಗಳನ್ನು ದುರಸ್ತಿಗೊಳಿಸಿದ ಬಳಿಕ ಉಳಿದ ತ್ಯಾಜ್ಯಗಳನ್ನು ಹಾಕಿದ ಜಾಗದಲ್ಲಿ ಬೆಂಕಿ ಹೊತ್ತಿಕೊಂಡಿತು. ತ್ಯಾಜ್ಯಕ್ಕೆ ಬೆಂಕಿ ತಗುಲಿದ್ದರಿಂದ ರೈಲ್ವೆಗೆ ಯಾವುದೇ ನಷ್ಟವಾಗಿಲ್ಲ’ ಎಂದು ಕಾರ್ಯಾಗಾರದ ಮುಖ್ಯ ವ್ಯವಸ್ಥಾಪಕ ಕಾರ್ಯಾಗಾರ ಅಜಯಕುಮಾರ್ ತಿಳಿಸಿದರು.