ಚಾಮರಾಜನಗರ,ಜ.12: ನಿಂತಿದ್ದ ಲಾರಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗ್ರಾಮಾಂತರ ಠಾಣೆ(ಚಿಕ್ಕಹೊಳೆ ಚೆಕ್ಪೋಸ್ಟ್) ವ್ಯಾಪ್ತಿಯಲ್ಲಿ ಇಂದು ನಸುಕಿನ ಜಾವ ಸಂಭವಿಸಿದೆ.
ತೀ.ನರಸೀಪುರ ಮೂಲದ ಕಾರು ಚಾಲಕ ಶ್ರೇಯಸ್(29), ಚಿದಾನಂದ(52), ಸಿದ್ಧರಾಜು(60) ಮೃತಪಟ್ಟ ದುರ್ದೈವಿಗಳು. ಶ್ರೇಯಸ್ ಹಾಗೂ ಪೂರ್ವಿಕಾಳಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.
ಕುಟುಂಬ ಸಮೇತ ಪ್ರವಾಸಕ್ಕೆಂದು ತಮಿಳುನಾಡು, ಕನ್ಯಾಕುಮಾರಿ ಹಲವೆಡೆ ಪ್ರವಾಸ ಮುಗಿಸಿಕೊಂಡು ಇಂದು ಬೆಳಗ್ಗೆ ಸ್ವಗ್ರಾಮಕ್ಕೆ ವಾಪಸ್ ಆಗುತ್ತಿದ್ದಾಗ ಚಿಕ್ಕಹೊಳೆ ಗ್ರಾಮದ ಬಳಿ ರಸ್ತೆಬದಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ.
ಘಟನೆಯಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತಿಬ್ಬರಿಗೆ ಗಂಭೀರ ಗಾಯಗಳಾಗಿವೆ. ರಾಮಸಮುದ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಕಳೆದ ಒಂದು ವಾರದಿಂದ ತಮಿಳುನಾಡಿನ ವಿವಿಧ ಕಡೆ ಪ್ರವಾಸ ಮುಗಿಸಿಕೊಂಡು ಕೊನೆಯ ದಿನವಾದ ಇಂದು ಗ್ರಾಮಕ್ಕೆ ಬರುತ್ತಿದ್ದು, ಬೆಳಗಿನ ಜಾವವಾದ್ದರಿಂದ ಚಾಲಕ ನಿದ್ರೆ ಮಂಪರಿನಲ್ಲಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಮೃತಪಟ್ಟವರೆಲ್ಲ ವಾಲ್ಮೀಕಿ ನಿಗಮ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಎಂ.ಡಿ.ಬಸವರಾಜು ಅವರ ಸಂಬಂಧಿಗಳು ಎಂದು ಹೇಳಲಾಗಿದೆ.