ಕರ್ನಾಟಕ

ಬೆಂಗಳೂರಿನಲ್ಲಿ ಜನವರಿ 1ರಿಂದ ನಾಲ್ಕು ದಿನಗಳ ಕಾಲ ಗೊಂಬೆಯಾಟದ ಅಂತರರಾಷ್ಟ್ರೀಯ ಉತ್ಸವ

Pinterest LinkedIn Tumblr

gombe

ಅಳಿವಿನಂಚಿಗೆ ಸರಿಯುತ್ತಿರುವ ಜನಪದ ಕಲಾ ಪ್ರಕಾರಗಳನ್ನು ಉಳಿಸಿಕೊಳ್ಳುವ ಬಗ್ಗೆ ಜಾಗತಿಕ ಮಟ್ಟದಲ್ಲಿ ದೊಡ್ಡ ಪ್ರಯತ್ನಗಳು ನಡೆಯುತ್ತಿವೆ. ಜನಪದ ಕಲೆ, ವೈದ್ಯ ಪದ್ಧತಿ, ಪಾರಂಪರಿಕ ಜ್ಞಾನಕ್ಕೂ ಬೌದ್ಧಿಕ ಹಕ್ಕುಸ್ವಾಮ್ಯ ನೀಡುವ ಬಗ್ಗೆ ಯುನೆಸ್ಕೊ ಮಾರ್ಗಸೂಚಿ ರೂಪಿಸಿದೆ. ಜಾಗತಿಕ ಮಟ್ಟದಲ್ಲಿ ಜಾನಪದವನ್ನು ಜೀವಂತವಾಗಿರಿಸಿಕೊಳ್ಳುವ ಕೆಲಸಗಳು ಹೆಚ್ಚಾಗಿವೆ. ಆದರೆ, ನಮ್ಮಲ್ಲಿ ಈ ಕಾರ್ಯ ಕೇವಲ ಪಳೆಯುಳಿಕೆಯ ಸಂಗ್ರಹದಂತೆ ಮಾತ್ರ ನಡೆಯುತ್ತಿದೆ ಎಂಬ ಆರೋಪವೂ ಇದೆ. ಈ ಮಾತಿಗೆ ಅಪವಾದವೆಂಬಂತೆ ಜಾನಪದಕ್ಕೆ ಉಸಿರು ತುಂಬುವ ಪ್ರಯತ್ನ ನಮ್ಮಲ್ಲಿ ಅಲ್ಲಲ್ಲಿ ನಡೆಯುತ್ತಿದೆ. ಇಂಥ ಪ್ರಯತ್ನದ ಮುಂದುವರಿಕೆಯಂತೆ ‘ಧಾತು’ ಸಂಸ್ಥೆ ಹೊಸವರ್ಷದ ಆರಂಭವನ್ನು ಅಂತರರಾಷ್ಟ್ರೀಯ ಗೊಂಬೆಗಳ ಉತ್ಸವದ ಮೂಲಕ ಅರ್ಥಪೂರ್ಣಗೊಳಿಸಲು ಮುಂದಾಗಿದೆ.

ಜನವರಿ 1ರಿಂದ ನಾಲ್ಕು ದಿನಗಳ ಕಾಲ ನಗರದಲ್ಲಿ ಗೊಂಬೆಯಾಟದ ಮೊದಲನೇ ಅಂತರರಾಷ್ಟ್ರೀಯ ಉತ್ಸವ ನಡೆಯಲಿದೆ. ಸೂತ್ರದಗೊಂಬೆ, ತೊಗಲುಗೊಂಬೆ, ಸಲಾಕೆಗೊಂಬೆ, ಕೀಲುಗೊಂಬೆ, ಯಕ್ಷಗಾನ ಗೊಂಬೆಯಾಟಗಳ ಜತೆಗೆ ಆಧುನಿಕ ತಂತ್ರಜ್ಞಾನ ಬಳಸಿ ತಯಾರಿಸಿರುವ ಸ್ವಯಂಚಾಲಿತ ಯಾಂತ್ರಿಕ ಗೊಂಬೆಗಳ ಪ್ರದರ್ಶನವೂ ಈ ಉತ್ಸವದಲ್ಲಿರಲಿದೆ. ರಷ್ಯಾ, ಫ್ರಾನ್ಸ್, ಅಮೆರಿಕ, ಬೆಲ್ಜಿಯಂನ ಜನಪದ ವಿದ್ವಾಂಸರು ಹಾಗೂ ಕಲಾತಂಡಗಳು ಈ ಉತ್ಸವದಲ್ಲಿ ಭಾಗವಹಿಸಲಿವೆ. ಜತೆಗೆ ನವದೆಹಲಿ, ತ್ರಿಪುರ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಆಂಧ್ರಪ್ರದೇಶ, ಕೇರಳ ಹಾಗೂ ನಾಡಿನ ವಿವಿಧ ಭಾಗಗಳ ಗೊಂಬೆಯಾಟದ ಕಲಾತಂಡಗಳು ಉತ್ಸವದಲ್ಲಿ ಪ್ರದರ್ಶನ ನೀಡಲಿವೆ.

ನಗರದ ವಿವಿಧ ಭಾಗಗಳಲ್ಲಿ ಈ ಉತ್ಸವ ನಡೆಯುತ್ತಿರುವುದು ಮತ್ತೊಂದು ವಿಶೇಷ. ಡಿಸೆಂಬರ್ 30ರಂದು ಸಂಜೆ ಅರಮನೆ ರಸ್ತೆಯ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ಸ್‌ನಲ್ಲಿ ಸಂಜೆ 5 ಗಂಟೆಗೆ ಉತ್ಸವದ ಮೊದಲ ಗೊಂಬೆಯಾಟ ಪ್ರದರ್ಶನ ನಡೆಯಲಿದೆ. ಜನವರಿ 1ರಂದು ಬೆಳಿಗ್ಗೆ 10ಗಂಟೆಯಿಂದ ಮಹಾತ್ಮ ಗಾಂಧಿ ರಸ್ತೆ ಹಾಗೂ ಚರ್ಚ್ ಸ್ಟ್ರೀಟ್‌ನಲ್ಲಿ ಗೊಂಬೆಗಳ ಪರೇಡ್ ನಡೆಯಲಿದೆ. ನಾಲ್ಕೂ ದಿನಗಳ ಕಾಲ ‘ನಮ್ಮ ಮೆಟ್ರೊ’ ರಂಗೋಲಿ ಕಲಾಕೇಂದ್ರದಲ್ಲಿ ಗೊಂಬೆಯಾಟ ಪ್ರದರ್ಶನವಿರಲಿವೆ.

ಜಯನಗರ 8ನೇ ಹಂತದ ಜೆಎಸ್‍ಎಸ್ ಸಭಾಂಗಣದಲ್ಲಿ ಬೆಳಿಗ್ಗೆ 9ರಿಂದ ಗೊಂಬೆಯಾಟದ ಹೊಸ ಮನ್ವಂತರದ ಬಗ್ಗೆ ವಿಚಾರ ಸಂಕಿರಣ ನಡೆಯಲಿದೆ. ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ವಿಚಾರ ಸಂಕಿರಣದಲ್ಲಿ ಉದ್ಘಾಟನಾ ಭಾಷಣ ಮಾಡಲಿದ್ದಾರೆ. ಕೇಂದ್ರ ಸಚಿವ ಅನಂತಕುಮಾರ್ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ಜನವರಿ 1ರಂದು ಸಂಜೆ 5ಕ್ಕೆ ಕೆ.ಆರ್.ರಸ್ತೆಯ 22ನೇ ಅಡ್ಡರಸ್ತೆಯ ಸಮೀಪದಲ್ಲಿ ‘ಗೊಂಬೆಗಳ ಬಸ್ ನಿಲ್ದಾಣ’ವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಉದ್ಘಾಟಿಸಲಿದ್ದಾರೆ. ವಿವಿಧ ಪ್ರಕಾರಗಳ ಗೊಂಬೆಗಳನ್ನು ಈ ಬಸ್ ನಿಲ್ದಾಣದಲ್ಲಿ ಇರಿಸಿರುವುದು ಇಲ್ಲಿನ ವಿಶೇಷ. ಈ ಮೂಲಕ ಗೊಂಬೆಯಾಟದ ಬಗ್ಗೆ ಜನಸಾಮಾನ್ಯರಲ್ಲಿ ಆಸಕ್ತಿ ಮೂಡಿಸುವ ಪ್ರಯತ್ನ ಧಾತು ಸಂಸ್ಥೆಯದ್ದು. ಜತೆಗೆ ಈ ಬಸ್ ನಿಲ್ದಾಣದ ಸಮೀಪದಲ್ಲೇ ಇರುವ ಧಾತು ಸಭಾಂಗಣದಲ್ಲಿ ಗೊಂಬೆಯಾಟದ ಪ್ರದರ್ಶನವೂ ಇರಲಿದೆ.

ದೇಶ ಹಾಗೂ ವಿದೇಶದ ಸುಮಾರು 16 ಮಂದಿ ವಿಷಯತಜ್ಞರು ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಲಿದ್ದಾರೆ. ಗೊಂಬೆಯಾಟದ ಹೊಸ ಸಾಧ್ಯತೆಗಳು, ಈ ನಿಟ್ಟಿನಲ್ಲಿ ಜಾಗತಿಕಮಟ್ಟದಲ್ಲಿ ನಡೆಯುತ್ತಿರುವ ಪ್ರಯತ್ನಗಳು, ಹೊಸ ಕಲಾವಿದರನ್ನು ರೂಪಿಸುವ ಬಗೆ ಇನ್ನಿತರ ವಿಷಯಗಳ ಬಗ್ಗೆ ಸಂವಾದ ನಡೆಯಲಿದೆ. ಉತ್ಸವದಲ್ಲಿ ಸುಮಾರು 18 ಪ್ರಸಂಗಗಳು ಪ್ರದರ್ಶನಗೊಳ್ಳಲಿವೆ.

ಇದಲ್ಲದೆ ಮಕ್ಕಳೇ ಗೊಂಬೆಯಾಟ ಆಡಿಸಲು ಕೂಡಾ ಉತ್ಸವದಲ್ಲಿ ಅವಕಾಶವಿದೆ. ಈ ಮೂಲಕ ಹೊಸ ತಲೆಮಾರಿಗೆ ಗೊಂಬೆಯಾಟದ ಬಗ್ಗೆ ಆಸಕ್ತಿ ಮೂಡಿಸುವುದು ಹಾಗೂ ಪಾರಂಪರಿಕವಾದ ಗೊಂಬೆಯಾಟದ ಮಹತ್ವವನ್ನು ಮುಂದಿನ ತಲೆಮಾರಿಗೆ ತಿಳಿಸುವುದು ಉತ್ಸವದ ಉದ್ದೇಶಗಳಲ್ಲೊಂದು. ಗೊಂಬೆಯಾಟದಂಥ ಅಪರೂಪದ ಜನಪದ ಕಲಾಪ್ರಕಾರವನ್ನು ಜನಸಾಮಾನ್ಯರ ಬಳಿಗೆ ತೆಗೆದುಕೊಂಡು ಹೋಗುತ್ತಿರುವ ಈ ಉತ್ಸವಕ್ಕೆ ಯಾವುದೇ ಪ್ರವೇಶ ಶುಲ್ಕವಿಲ್ಲ.

ಗೊಂಬೆಯಾಟ ಕ್ಷೇತ್ರದಲ್ಲಿ 1996ರಿಂದ ಸಕ್ರಿಯವಾಗಿರುವ ಧಾತು ಸಂಸ್ಥೆ ಪ್ರತಿ ವರ್ಷವೂ ಗೊಂಬೆಯಾಟದ ಉತ್ಸವವನ್ನು ಆಯೋಜಿಸುತ್ತಾ ಬರುತ್ತಿದೆ. ಗೊಂಬೆಯಾಟದ ಅಂತರರಾಷ್ಟ್ರೀಯ ಉತ್ಸವವನ್ನು ಇದೇ ಮೊದಲ ಬಾರಿಗೆ ಆಯೋಜಿಸುತ್ತಿರುವ ಸಂಸ್ಥೆ ಈ ಉತ್ಸವದಿಂದ ಗೊಂಬೆಯಾಟವನ್ನು ಜೀವಂತವಾಗಿರಿಸುವ ಹಾಗೂ ಮುಂದಿನ ತಲೆಮಾರಿಗೆ ಈ ಪ್ರಕಾರದ ಬಗ್ಗೆ ಜ್ಞಾನ ಪಸರಿಸುವ ಹೆಬ್ಬಯಕೆ ಹೊಂದಿದೆ.

‘ಶ್ರೀಮಂತ ಜನಪದ ಕಲಾಪ್ರಕಾರವಾದ ಗೊಂಬೆಯಾಟಕ್ಕೆ ವಿದೇಶಗಳಲ್ಲಿ ಹೆಚ್ಚಿನ ಮನ್ನಣೆ ಇದೆ. ಭಾರತ ಮೂಲದಿಂದ ಯುರೋಪ್ ತಲುಪಿರುವ ಸೂತ್ರದಗೊಂಬೆಯಾಟ ಯುರೋಪ್‌ನ ಹಲವು ಭಾಗಗಳಲ್ಲಿ ಜನಪ್ರಿಯ ಕಲಾ ಮಾಧ್ಯಮವಾಗಿದೆ. ಆದರೆ, ನಮ್ಮಲ್ಲಿ ಗೊಂಬೆಯಾಟ ಉಳಿಸಿಕೊಳ್ಳುವ ಪ್ರಯತ್ನಗಳು ದೊಡ್ಡ ಪ್ರಮಾಣದಲ್ಲಿ ಆಗುತ್ತಿಲ್ಲ. ಈ ಕಲೆಯನ್ನು ಉಳಿಸಬೇಕೆಂಬ ಉದ್ದೇಶದಿಂದ ಗೊಂಬೆಯಾಟ ಕಲಿತೆ, ಬೆಳೆಸಬೇಕೆಂಬ ಉದ್ದೇಶದಿಂದ ಧಾತು ಸಂಸ್ಥೆ ಹುಟ್ಟಿಹಾಕಿದೆ. ಸಂಸ್ಥೆಯ ಮೂಲಕ ಹೊಸ ಪೀಳಿಗೆಗೆ ಗೊಂಬೆಯಾಟ ಕಲಿಸುವ ಕಾರ್ಯ ನಡೆಯುತ್ತಿದೆ. ಉತ್ಸವಕ್ಕೆಂದೇ ಸುಮಾರು 70 ಹೊಸ ಗೊಂಬೆಗಳನ್ನು ನಾವೇ ತಯಾರಿಸಿದ್ದೇವೆ’ ಎನ್ನುತ್ತಾರೆ ಧಾತು ಸಂಸ್ಥೆಯ ಸಂಸ್ಥಾಪಕಿ ಅನುಪಮಾ ಹೊಸ್ಕೆರೆ.

ಉತ್ಸವದ ಬಗ್ಗೆ ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌ ವಿಳಾಸ www.dhaatu.org / www.dhaatupuppetfestival.org ನೋಡಬಹುದು ಅಥವಾ ಸಂಸ್ಥೆಯ ದೂರವಾಣಿ ಸಂಖ್ಯೆ 6568 3396 ಸಂಪರ್ಕಿಸಬಹುದು.

ಕಲಾವಿದರ ಸಮಾಗಮ
‘ಗೊಂಬೆಯಾಟ ಅಪರೂಪದ ಜನಪದ ಕಲೆ. ಅದನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆಯಬೇಕು. ಇದಕ್ಕಾಗಿ ಪ್ರತಿ ತಿಂಗಳೂ ಕಾರ್ಯಕ್ರಮ ನಡೆಸುತ್ತಾ ಬಂದಿದ್ದೇವೆ. ರಾಜ್ಯದ ವಿವಿಧ ಭಾಗಗಳಲ್ಲಿ ಸಂಚರಿಸಿ ಕಲಾ ಪ್ರದರ್ಶನ ನಡೆಸುವ ಜತೆಗೆ ಗೊಂಬೆಯಾಟದ ಕಲಾವಿದರನ್ನು ಪ್ರೋತ್ಸಾಹಿಸುವ ಹಾಗೂ ಈ ಕಲೆಯನ್ನು ಉಳಿಸುವ ಉದ್ದೇಶ ಸಂಸ್ಥೆಯದ್ದು. ಈ ನಿಟ್ಟಿನಲ್ಲಿ ಈ ಅಂತರರಾಷ್ಟ್ರೀಯ ಉತ್ಸವ ಒಂದು ದೊಡ್ಡ ಹೆಜ್ಜೆ. ಉತ್ಸವದಲ್ಲಿ ಸುಮಾರು ನೂರು ಮಂದಿ ಕಲಾವಿದರ ಸಮಾಗಮವಾಗಲಿದೆ. ಈ ಮೂಲಕ ಉತ್ಸವ ಗೊಂಬೆಯಾಟದ ಕಲಾವಿದರನ್ನು ಒಗ್ಗೂಡಿಸುವ ಪ್ರಯತ್ನವೂ ಹೌದು’
– ಅನುಪಮಾ ಹೊಸ್ಕೆರೆ,
ಸಂಸ್ಥಾಪಕರು, ಧಾತು ಸಂಸ್ಥೆ

Write A Comment