ಕರ್ನಾಟಕ

ಆಸ್ಪತ್ರೆಯಲ್ಲಿ ಶೋಷಣೆ: ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ನಾರಾಯಣ ತರಾಟೆ

Pinterest LinkedIn Tumblr

sapayi

ಬೆಂಗಳೂರು: ‘ವಿಕ್ಟೋರಿಯಾ ಆಸ್ಪತ್ರೆ­ಯಲ್ಲಿ ಕಾರ್ಯ ನಿರ್ವಹಿಸುವ ಹೊರ ಗುತ್ತಿಗೆ ಸ್ವಚ್ಛತಾ ಸಿಬ್ಬಂದಿಗೆ ಕನಿಷ್ಠ ವೇತನ ಕೂಡ ನೀಡದೆ ಶೋಷಣೆ ಮಾಡ­ಲಾಗುತ್ತಿದೆ. ಈ ಸಂಬಂಧ ಆಸ್ಪತ್ರೆ ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ನಾರಾಯಣ ತಿಳಿಸಿದರು.

ಬುಧವಾರ ಬೆಳಿಗ್ಗೆ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿದ ಅವರು ಸ್ವಚ್ಛತಾ ಸಿಬ್ಬಂದಿಯ ಸಮಸ್ಯೆ ಆಲಿಸಿ ನ್ಯಾಯ ಒದಗಿಸುವ ಭರವಸೆ ನೀಡಿ­ದರು. ಬಳಿಕ ಆಸ್ಪತ್ರೆ ಅಧೀಕ್ಷಕ ಡಾ.ಟಿ. ದುರ್ಗಣ್ಣ ಅವರನ್ನು ತರಾಟೆಗೆ ತೆಗೆದುಕೊಂಡರು. ‘ಕಾರ್ಮಿಕರ ಕಾಯ್ದೆ ಪ್ರಕಾರ ದಿನಕ್ಕೆ ₨278 (ತಿಂಗಳಿಗೆ ₨8.5 ಸಾವಿರ) ವೇತನ ನೀಡಬೇಕು. ಆದರೆ, ಇಲ್ಲಿ ಕೇವಲ ₨150 (₨4.5 ಸಾವಿರ) ನೀಡು­ತ್ತಿದ್ದಾರೆ. ಇದು ಸ್ಪಷ್ಟವಾಗಿ ಕಾರ್ಮಿಕರ ಕಾಯ್ದೆ ಉಲ್ಲಂಘನೆ. ಭವಿಷ್ಯ ನಿಧಿ (ಪಿ.ಎಫ್‌) ಪಾವತಿಯಲ್ಲೂ ಮೋಸ ಮಾಡಲಾಗುತ್ತಿದೆ’ ಎಂದು ಅವರು ಹೇಳಿದರು.

‘ಗುತ್ತಿಗೆ ವಹಿಸಿಕೊಂಡಿರುವ ಸ್ವಿಸ್‌ ಶಾರ್ಪ್‌ ಏಜೆನ್ಸಿಯಿಂದ ಸ್ವಚ್ಛತಾ ಸಿಬ್ಬಂದಿಗೆ ಮೋಸವಾಗುತ್ತಿದೆ. ಕೆಲಸ ಮಾಡುವಾಗ ಧರಿಸಲು ಸುರಕ್ಷತಾ ಪರಿ­ಕರ­ಗಳನ್ನೂ ನೀಡದೆ ಶೋಷಿಸ­ಲಾಗು­ತ್ತಿದೆ. ಇದು ಆಸ್ಪತ್ರೆ ಅಧೀಕ್ಷಕರ ಗಮ­ನಕ್ಕೆ ಬಂದಿಲ್ಲ ಎಂಬುದು ಅಚ್ಚರಿ. ಈ ವಂಚನೆ­ಯಲ್ಲಿ ಆಸ್ಪತ್ರೆಯವರೂ ಶಾಮೀ­ಲಾ­ಗಿ­ರುವ ಅನುಮಾನವಿದೆ’ ಎಂದರು.

‘ಕಾರ್ಮಿಕರ ಕಾಯ್ದೆ ಪ್ರಕಾರ 2014ರ ಏಪ್ರಿಲ್‌ ನಂತರ ದಿನಕ್ಕೆ ₨278 ವೇತನ ನೀಡಬೇಕು. ಇದರ ಪ್ರಕಾರ ಸ್ವಚ್ಛತಾ ಸಿಬ್ಬಂದಿಗೆ ಈ ವರ್ಷದ ಎಂಟು ತಿಂಗಳ ಬಾಕಿ ಹಣ ಪಾವತಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಏಜೆನ್ಸಿ ಹಾಗೂ ಆಸ್ಪತ್ರೆ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸ­ಲಾಗು­ವುದು’ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳಲು ಅಧೀಕ್ಷಕ ಡಾ.ಟಿ. ದುರ್ಗಣ್ಣ ಪ್ರಯತ್ನಿಸಿದರು. ಅಲ್ಲದೇ, ಆಯೋಗದ ಸದಸ್ಯರ ಜೊತೆ ಏರುಧ್ವನಿ­ಯಲ್ಲಿ ಮಾತನಾಡಿದರು. ‘ಕಾರ್ಮಿಕರ ಕಾಯ್ದೆ ಪ್ರಕಾರವೇ ಗುತ್ತಿಗೆದಾರ­ರೊಂದಿಗೆ ಒಪ್ಪಂದ ಮಾಡಿಕೊಳ್ಳ­ಲಾಗಿದೆ. ಆದರೆ, ಅವರು ಎಷ್ಟು ಕೊಡುತ್ತಿದ್ದಾರೆ ಎಂಬುದು ಗೊತ್ತಿಲ್ಲ.  ಒಬ್ಬರೂ ಇಷ್ಟು ದಿನ ನಮಗೆ ದೂರು ನೀಡಿಲ್ಲ’ ಎಂದು ನುಡಿದರು.

‘ಈಗ ಏಕಾಏಕಿ ವೇತನ ಹೆಚ್ಚು ಮಾಡಲು ಸಾಧ್ಯವಿಲ್ಲ. ಹಳೆ ಗುತ್ತಿಗೆದಾ­ರರನ್ನು ಕಪ್ಪುಪಟ್ಟಿಗೆ ಸೇರಿಸಿ ಹೊಸ ಟೆಂಡರ್‌ ಕರೆದಿದ್ದೇವೆ. ಮುಂದೆ ನೋಡೋಣ’ ಎಂದು ಜಾರಿಕೊಳ್ಳಲು ಪ್ರಯ­ತ್ನಿ­ಸಿದರು. ಆಗ ನಾರಾಯಣ ಅವರು, ‘ಈ ರೀತಿ ಹೇಳಿಕೆ ನೀಡಿ ಜವಾ­ಬ್ದಾರಿಯಿಂದ ನುಣುಚಿಕೊಳ್ಳ­ಬೇಡಿ. ಆಸ್ಪತ್ರೆಯ ಅಧೀಕ್ಷಕರಾಗಿ ಕಾನೂನು ಬದ್ಧ ವೇತನ ಕೊಡಿಸುವುದು ನಿಮ್ಮ ಕರ್ತವ್ಯ’ ಎಂದರು.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ 120 ಸ್ವಚ್ಛತಾ ಸಿಬ್ಬಂದಿ­ಯಲ್ಲಿ ಹೆಚ್ಚಿನವರು ಮಹಿಳೆಯರು. ಕಸ ಗುಡಿಸುವುದು, ಶೌಚಾಲಯ ಸ್ವಚ್ಛಗೊ­ಳಿ­ಸು­ವುದು, ನೆಲ ತೊಳೆಯುವುದು ಇವರ ಕೆಲಸ. ಮೂರು ಪಾಳಿಯಲ್ಲಿ ಕೆಲಸ ಮಾಡುತ್ತಾರೆ.

ವೇತನಕ್ಕೆ ಕತ್ತರಿ
‘16 ವರ್ಷಗಳಿಂದ ಕೆಲಸ ಮಾಡು­ತ್ತಿದ್ದೇನೆ. ಆಸ್ಪತ್ರೆ ಸ್ವಚ್ಛತಾ ಕಾರ್ಯದಲ್ಲಿ ತೊಡಗುವ ನಾವು ಪದೇಪದೇ ಅನಾರೋಗ್ಯಕ್ಕೆ ಒಳಗಾ­ಗು­ತ್ತಿ­ರುತ್ತೇವೆ. ಆದರೆ, ಇವರು ಕೊಡುವ ಹಣ ಸಾಕಾಗುವುದಿಲ್ಲ. ಏನೇನೊ ನೆಪ ಹೇಳಿ ಮೂರು ದಿನ­ಗಳ ಕೂಲಿಗೆ ಕತ್ತರಿ ಹಾಕುತ್ತಾರೆ. ಕೈಗವಸು ಕೂಡ ನೀಡುವುದಿಲ್ಲ’ ಎಂದು ಹೇಳಿದ್ದು ಯಶೋಧಮ್ಮ.

ಪಿ.ಎಫ್‌ ಮಾಹಿತಿ ಇಲ್ಲ
‘ಪಿ.ಎಫ್‌ಗೆಂದು ವೇತನದಲ್ಲಿ ಪ್ರತಿ ತಿಂಗಳು ₨500 ಹಿಡಿಯು­ತ್ತಿದ್ದಾರೆ. ಆದರೆ, ವಾರ್ಷಿಕ ವಿವರ ನೀಡುತ್ತಿಲ್ಲ. ಪಿ.ಎಫ್‌ ಸಂಖ್ಯೆಯನ್ನೂ ನೀಡಿಲ್ಲ. ಏಜೆನ್ಸಿಯವರು ಬದಲಾ­ದಾಗ ನಾವು ಎಷ್ಟು ಹಣ ನೀಡಿರು­ತ್ತೇವೊ ಅದನ್ನೇ ವಾಪಸ್‌ ಕೊಡು­ತ್ತಾರೆ’ ಎಂದು ನಳಿನಾ ದೂರಿದರು.

ರಜೆಯಲ್ಲೂ ಕೆಲಸ
‘ನಾನು 8 ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದೇನೆ. ತಿಂಗಳಿಗೆ ₨4.5 ಸಾವಿರ ಸಂಬಳ ನೀಡು­ತ್ತಾರೆ. ವಾರದ ರಜೆ ಹಾಗೂ ಇತರ ರಜೆ ದಿನಗಳಲ್ಲಿ ಕೂಡ ಬಂದು ಅರ್ಧ ದಿನ ಕೆಲಸ ಮಾಡ­ಬೇಕು’ ಎಂದು ಮುನಿ­ಯಮ್ಮ ತಮ್ಮ ಅಳಲು ತೋಡಿಕೊಂಡರು.

Write A Comment