ಬಳ್ಳಾರಿ: ನಗರದ ಮೀನಾಕ್ಷಿ ವೃತ್ತದಲ್ಲಿರುವ ಕರ್ಣಾಟಕ ಬ್ಯಾಂಕ್ ಹಿರಿಯ ವ್ಯವಸ್ಥಾಪಕ ಎ.ಕೃಷ್ಣಮೂರ್ತಿ (51) ಶುಕ್ರವಾರ ಬೆಳಿಗ್ಗೆ ಬ್ಯಾಂಕಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಳಿಗ್ಗೆ 8.30ಕ್ಕೆ ಕಚೇರಿಗೆ ಬಂದಿದ್ದ ಅವರು, ಒಳಗಿರುವ ಕೊಠಡಿಯೊಂದರ ಫ್ಯಾನ್ಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೂಲತಃ ಬಳ್ಳಾರಿಯವರೇ ಆದ ಕೃಷ್ಣಮೂರ್ತಿ ಮೂರು ವರ್ಷಗಳ ಹಿಂದೆ ಹಿರಿಯ ವ್ಯವಸ್ಥಾಪಕರಾಗಿ ಇಲ್ಲಿಗೆ ವರ್ಗಾವಣೆಗೊಂಡಿದ್ದರು.
‘ಸಾಲ ಮರುಪಾವತಿ ಗುರಿ ಸಾಧಿಸದಿರುವ ಕಾರಣ ಉಂಟಾದ ಉದ್ವೇಗ ಹಾಗೂ ಖಿನ್ನತೆ ನನ್ನ ಸಾವಿಗೆ ಕಾರಣ. ನನ್ನ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸದೆ ಕುಟುಂಬ ಸದಸ್ಯರಿಗೆ ಒಪ್ಪಿಸಬೇಕು’ ಎಂದು ಅವರು ಆತ್ಮಹತ್ಯೆಗೆ ಮುನ್ನ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. ಕೃಷ್ಣಮೂರ್ತಿ ಅವರು ಗಣಿಗಾರಿಕೆಗೆ ಸಂಬಂಧಿಸಿದ ಕೆಲವು ವ್ಯಕ್ತಿಗಳಿಗೆ ತಾತ್ಕಾಲಿಕ ಓವರ್ ಡ್ರಾಫ್ಟ್ ಮಂಜೂರು ಮಾಡಿದ್ದು, ಸಮಯಕ್ಕೆ ಸರಿಯಾಗಿ ಅದು ಮರುಪಾವತಿಯಾಗದ ಕಾರಣ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.
ಅಲ್ಲದೆ, ಸಾಲ ಪಡೆದು, ಪಾವತಿ ಮಾಡದ ಕೆಲವರ ಹೆಸರನ್ನೂ ಅವರು ಪತ್ರದಲ್ಲಿ ನಮೂದಿಸಿದ್ದು, ಒತ್ತಡಕ್ಕೆ ಒಳಗಾಗಿ ಸಾವಿಗೆ ಶರಣಾಗುತ್ತಿರುವುದಾಗಿ ಹೇಳಿದ್ದಾರೆ.