ಬೆಂಗಳೂರು: ನಗರದ ಚೌಡಯ್ಯ ರಸ್ತೆಯಲ್ಲಿರುವ ರಾಷ್ಟ್ರೀಯ ಸೇನಾ ಸ್ಮಾರಕದಲ್ಲಿ ಮಂಗಳವಾರ ‘ವಿಜಯ ದಿವಸ್’ ಆಚರಿಸಲಾಯಿತು.
ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ಮತ್ತು ಕೇರಳ ಸೇನಾ ಉಪ ವಿಭಾಗದ ಜನರಲ್ ಆಫೀಸರ್ ಕಮಾಂಡಿಂಗ್ (ಜಿಓಸಿ) ಮೇಜರ್ ಜನರಲ್ ಎ.ಕೆ.ಸಿಂಗ್, ವಾಯುಪಡೆಯ ತರಬೇತಿ ಮತ್ತು ಕಮಾಂಡ್ ಮುಖ್ಯ ಕಚೇರಿಯ ಹಿರಿಯ ಅಧಿಕಾರಿ ಏರ್ ಮಾರ್ಷಲ್ ಎಸ್.ಆರ್.ಕೆ.ನಾಯರ್, ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಸೂದ್ ಸೇರಿದಂತೆ ಸೇನೆಯ ಅಧಿಕಾರಿಗಳು, ಎನ್ಸಿಸಿ ಕೆಡೆಟ್ಗಳು ಮತ್ತು ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಭಾಗವಹಿಸಿ ಸೈನಿಕ ಸ್ಮಾರಕಕ್ಕೆ ಗೌರವ ಸಲ್ಲಿಸಿದರು.
ಜೆ.ಪಿ.ನಗರ ವರದಿ: ಜೆ.ಪಿ.ನಗರದಲ್ಲಿರುವ ಧನ್ವಂತರಿ ಉದ್ಯಾನದಲ್ಲಿ ಮಂಗಳವಾರ ನಡಿಗೆದಾರರ ಕೂಟದ ಸದಸ್ಯರು ಮತ್ತು ಹಿರಿಯ ನಾಗರಿಕರು ಸೇರಿ ‘ವಿಜಯ ದಿವಸ್’ ಆಚರಿಸಿದರು.
ಕಾರ್ಯಕ್ರಮದಲ್ಲಿ ಜೆ.ಪಿ.ನಗರ ನಿವಾಸಿಗಳ ಸಂಘದ ಎ.ರಾಮ ರಾವ್ ಮಾತನಾಡಿ, ‘ಬಾಂಗ್ಲಾದೇಶ ವಿಮೋಚನೆಗಾಗಿ 1971ರಲ್ಲಿ ನಡೆದ ಯುದ್ಧದಲ್ಲಿ ಹುತಾತ್ಮರಾದ ಭಾರತೀಯ ಯೋಧರ ಸ್ಮರಣಾರ್ಥ ಈ ದಿವಸವನ್ನು ಆಚರಿಸಲಾಗುತ್ತದೆ. ಆ ಯುದ್ಧದಲ್ಲಿ ಅತ್ಯಂತ ಕಠಿಣವಾದ ಪರಿಸ್ಥಿತಿಯನ್ನು ನಾಜೂಕಿನಿಂದ ನಿಭಾಯಿಸಿದ ಲೆಫ್ಟಿನೆಂಟ್ ಜನರಲ್ ಜಗಜಿತ್ ಸಿಂಗ್ ಅರೋರಾ ಪಾಕಿಸ್ತಾನ ಸೇನೆಯನ್ನು ಶರಣಾಗುವಂತೆ ಮಾಡಿದರು’ ಎಂದು ಹೇಳಿದರು.
ಕ್ಯಾಪ್ಟನ್ ಹರೀಶ್, ವಿಂಗ್ ಕಮಾಂಡರ್ ಶ್ರೀಧರ್, ಮಾಜಿ ಮೇಯರ್ ಎಸ್.ಕೆ.ನಟರಾಜ್, ಬಸವನಗುಡಿಯ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಎಚ್.ಆರ್.ಸುರೇಶ್, ನಿರ್ದೇಶಕ ಛಾಯಾಪತಿ, ಕ್ರಿಕೆಟ್ ಸಂಖ್ಯಾಶಾಸ್ತ್ರಜ್ಞ ಎಚ್.ಆರ್.ಗೋಪಾಲ ಕೃಷ್ಣನ್, ಮಹಿಳಾ ಕ್ರಿಕೆಟ್ ಪಟು ರೂಪಲೇಖಾ ಮತ್ತಿತರರು ಉಪಸ್ಥಿತರಿದ್ದರು.