ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂಲ ಕಾಂಗ್ರೆಸಿಗರನ್ನು ನಿರ್ಲಕ್ಷಿಸಿ ಹೊಸಬರಿಗೆ ಮಣೆ ಹಾಕುತ್ತಿದ್ದಾರೆ ಎಂದು ಅರೋಪಿಸಿ ಕಾಂಗ್ರೆಸ್ ನ ಮಾಜಿ ಶಾಸಕರು ಹಾಗೂ ಕೆಲವು ಹಿರಿಯ ಮುಖಂಡರು ಹೈಕಮಾಂಡ್ ಗೆ ದೂರು ಸಲ್ಲಿಸಿದ್ದು ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಮನವಿ ಮಾಡಿದ್ದಾರೆ.
ನಿಗಮ ಮಂಡಳಿ ಸೇರಿದಂತೆ ಹಲವು ವಿಚಾರಗಳಲ್ಲಿ ಸಿದ್ದರಾಮಯ್ಯ ಮೂಲ ಕಾಂಗ್ರೆಸಿಗರನ್ನು ಕಡೆಗನಿಸುತ್ತಿದ್ದು ಜೆಡಿಎಸ್ನಿಂದ ಬಂದವರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಹಾಗಾಗಿ ಕಾಂಗ್ರೆಸ್ ಅಧಃ ಪತನದತ್ತ ಸಾಗುತ್ತಿದ್ದು ಕೂಡಲೇ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ರಾಜ್ಯದಲ್ಲಿ ಕಾಂಗ್ರೆಸ್ ಉಳಿಸಲು ಮುಂದಾಗಬೇಕು ಎಂದು ಹಿರಿಯ ಮುಖಂಡ ಶಂಕರ್ಮನವಳ್ಳಿ ನೇತೃತ್ವದಲ್ಲಿ ದೂರು ನೀಡಿದ್ದಾರೆ.
ಈ ದೂರಿನ ಪ್ರತಿಯಲ್ಲಿ ಸುಮಾರು 25 ಮಂದಿ ಪ್ರಮುಖ ನಾಯಕರು ಸಹಿ ಹಾಕಿದ್ದು, ಬೆಳಗಾವಿಯ ಅಧಿವೇಶನದಲ್ಲಿ ಭಾಗವಹಿಸಿರುವ ಕೆಲವು ಅತೃಪ್ತ ಶಾಸಕರೂ ಇದಕ್ಕೆ ಕೈ ಜೋಡಿಸಿದ್ದಾರೆ ಎನ್ನಲಾಗಿದ್ದು ತೀವೃ ಕುತೂಹಲ ಕೆರಳಿಸಿದೆ.
ಈಗಾಗಲೇ ಕಾಂಗ್ರೆಸ್ ಅತೃಪ್ತರ ನಿಯೋಗ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ, ಉಪಾಧ್ಯಕ್ಷ ರಾಹುಲ್ಗಾಂಧಿ, ಸೋನಿಯಾಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹಮ್ಮದ್ ಪಟೇಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಾಯಕ ದಿಗ್ವಿಜ್ಸಿಂಗ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಜನಾರ್ದನ್ ದಿವೇದಿ ಸೇರಿದಂತೆ ಪ್ರಮುಖ ನಾಯಕರುಗಳಿಗೆ ದೂರಿನ ಪ್ರತಿ ನೀಡಿದ್ದು ಮುಂದಿನ ದಿನಗಳಲ್ಲಿ ಯಾವ ಪರಿಣಾಮ ಬೀರಲಿದೆ ಎಂದು ಕಾಯ್ದು ನೋಡಬೇಕಿದೆ.