ಬೀದರ್: ಒಂದೆಡೆ ಕುರಿಗಾಹಿಗಳಿಗಾಗಿ ಸರ್ಕಾರ ನೀಡಲಿರುವ ಕಾರ್ಯಕ್ರಮಗಳ ಬಣ್ಣನೆ. ಇನ್ನೊಂದು ಕಡೆ ‘ವೈದ್ಯರೇ ಇಲ್ಲ. ರೋಗದಿಂದ ಕುರಿಗಳು ಸಾಯುತ್ತಿವೆ, ಪರಿಹಾರ ಕೊಡಿ’ ಎನ್ನುವ ಬೇಡಿಕೆ ಇಟ್ಟ ಕುರಿಗಾಹಿಗಳು.
ಶನಿವಾರ ನಗರದಲ್ಲಿ ಏರ್ಪಡಿಸಿದ್ದ ಜಿಲ್ಲೆಯ ಕುರಿಗಾರರ ಜಾಗೃತ ಸಮಾವೇಶ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಸಚಿವೆ ಎದುರು ಸತ್ತ ಕುರಿ ಇಟ್ಟು ಹೀಗೆ ಕುರಿಗಾಹಿಗಳು ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಕುರಿಗಾಹಿಗಳಿಗಾಗಿ ಕೈಗೊಳ್ಳಲಿರುವ ವಿವಿಧ ಕಾರ್ಯಕ್ರಮಗಳ ಬಗೆಗೆ ಆಗಷ್ಟೇ ನಿಗಮದ ಅಧ್ಯಕ್ಷ ಪಂಡಿತರಾವ್ ಚಿದ್ರಿ ತಮ್ಮ ಭಾಷಣವನ್ನು ಮುಗಿಸಿದ್ದು, ಉಸ್ತುವಾರಿ ಸಚಿವೆ ಉಮಾಶ್ರೀ ಅವರು ಮಾತು ಆರಂಭಿಸಿದ್ದರು.
‘ಕುರಿ ಉದ್ಯಮದ ಎಲ್ಲ ಲಾಭವನ್ನು ಕುರಿಗಾಹಿ ಪಡೆಯಬೇಕು. ತಾಂತ್ರಿಕ ನೆರವು ಪಡೆಯಬೇಕು’ ಎಂದು ಮಾತು ಆಡುತ್ತಿರುವಾಗಲೇ ಸತ್ತ ಕುರಿ ಹೊತ್ತು ಬಂದ ಭಾಲ್ಕಿ ತಾಲ್ಲೂಕು ಬೀರಿ (ಬಿ) ಗ್ರಾಮದ ಕುರಿಗಾಹಿ ಮಲ್ಲಪ್ಪ, ‘ಕುರಿಗಳು ಸಾಯುತ್ತಿವೆ. ರಕ್ಷಿಸಿಕೊಡಿ’ ಎಂದು ಅಹವಾಲಿಟ್ಟರು. ಈತನನ್ನು ತಡೆಯಲು ಕೆಲ ಅಧಿಕಾರಿಗಳು, ಪೊಲೀಸರು ಮುಂದಾದರಾದರೂ ಆ ವೇಳೆಗಾಗಲೇ ಕುರಿಗಾಹಿ ವೇದಿಕೆ ಮೇಲೂ ಕುಳಿತಿದ್ದ ಕೆಲ ಸಭಿಕರನ್ನು ಅತ್ತ ಸರಿಸಿ ಸತ್ತ ಕುರಿಯನ್ನು ಮಲಗಿಸಿದ್ದ.
‘ಭಾಲ್ಕಿ ತಾಲ್ಲೂಕಿನ ಬೀರಿ (ಬಿ) ಗ್ರಾಮಕ್ಕೆ ವೈದ್ಯರು ಬರುತ್ತಿಲ್ಲ. ಏನಾದರೂ ಸಮಸ್ಯೆ ಇದ್ದರೆ 18 ಕಿ.ಮೀ. ದೂರದ ಭಾಲ್ಕಿಗೆ ಕುರಿಗಳನ್ನು ಒಯ್ಯಬೇಕು. ಒಂದು ವಾರದಲ್ಲಿ 13 ಕುರಿಗಳು ಸತ್ತಿವೆ. ಏನು ಮಾಡಬೇಕು?’ ಎಂಬುದು ಮಲ್ಲಪ್ಪನ ಪ್ರಶ್ನಿಸಿದ. ಆಗ ಮಧ್ಯಾಹ್ನ 3 ಗಂಟೆ ಆಗಿತ್ತು. ಸಚಿವೆ ಮಾತು ಮುಗಿಸಿ ಸಭಾಂಗಣ ದಿಂದ ನಿರ್ಗಮಿಸುವ ತರಾತುರಿ ಯಲ್ಲಿದ್ದರು.
ಇತ್ತ ಕುರಿಗಾಹಿಯು ಅಹವಾಲು ಹೇಳಿಕೊಳ್ಳುತ್ತಿದ್ದರೆ, ಅತ್ತ ಸಚಿವೆ ಭಾಷಣ ಮುಗಿಸುತ್ತಿದಂತೆಯೇ, ಈಚೆಗೆ ಕಾಯಿಲೆಯಿಂದ ಮೃತಪಟ್ಟ ಕುರಿಗಳ ಮಾಲೀಕರಿಗೆ ಸಚಿವೆಯಿಂದಲೇ ಪರಿಹಾರದ ಚೆಕ್ ವಿತರಿಸಲು ನಿಗಮದ ಅಧ್ಯಕ್ಷರು, ಅಧಿಕಾರಿಗಳು ತರಾತುರಿಯ ಸಿದ್ಧತೆ ನಡೆಸಿದ್ದರು. ಆ ನಂತರ ಸಚಿವರು ಸಭಾಂಗಣದಿಂದ ನಿರ್ಗಮಿಸಿದರು. ಇತ್ತ ವೇದಿಕೆಯಲ್ಲಿ ನಿಗಮದ ನೂತನ ಅಧ್ಯಕ್ಷರಿಗೆ ಅಭಿನಂದನೆಗಳ ಸುರಿಮಳೆ ಆರಂಭವಾಯಿತು.