ಮಂಡ್ಯ: ನಿರ್ಮಲ ಭಾರತ ಅಭಿಯಾನದ ಅಡಿ ಶೌಚಾಲಯ ನಿರ್ಮಾಣಕ್ಕೆ ರಾಜ್ಯ ಸರ್ಕಾರ ನೀಡಿದ್ದ ಗುರಿ ಪೂರ್ಣಗೊಳಿಸಿದ ಮೊದಲ ಜಿಲ್ಲೆ ಎಂಬ ಕೀರ್ತಿ ಮಂಡ್ಯ ಜಿಲ್ಲೆಗೆ ದೊರೆತಿದೆ. ಜತೆಗೆ, ಶೌಚಾಲಯ ನಿರ್ಮಾಣದಲ್ಲಿ ಮೊದಲ ಸ್ಥಾನದಲ್ಲಿದೆ.
ಜಿಲ್ಲೆಗೆ ಪ್ರಸಕ್ತ ಸಾಲಿನಲ್ಲಿ 31, 425 ಶೌಚಾಲಯ ನಿರ್ಮಾಣದ ಗುರಿ ನೀಡಲಾಗಿತ್ತು, ಅಕ್ಟೋಬರ್ ಅಂತ್ಯಕ್ಕೆ ಗುರಿ ಮುಟ್ಟಲಾಗಿದೆ. ಈಗ 34,932 ಶೌಚಾಲಯ ನಿರ್ಮಾಣ ಪೂರ್ಣಗೊಳಿಸಲಾಗಿದ್ದು, 40 ಸಾವಿರ ಶೌಚಾಲಯಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
2013–14ನೇ ಸಾಲಿನಲ್ಲಿ 25 ಸಾವಿರ ಗುರಿ ನಿಗದಿ ಪಡಿಸಲಾಗಿತ್ತು. 17,033 (ಶೇ 68) ಶೌಚಾಲಯ ನಿರ್ಮಾಣ ಮಾಡಲಾಗಿತ್ತು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಬಂದ ರೋಹಿಣಿ ಸಿಂಧೂರಿ ಅವರು ಶೌಚಾಲಯ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡಿದರು.
ಒಂದು ಲಕ್ಷ ಶೌಚಾಲಯ ನಿರ್ಮಾಣ ಗುರಿ ಇಟ್ಟುಕೊಂಡು ಮುನ್ನಡೆದಿದ್ದಾರೆ.
ಶೌಚಾಲಯ ನಿರ್ಮಾಣಕ್ಕೆ ಆಂದೋಲನವನ್ನೇ ಕೈಗೆತ್ತಿಕೊಂಡರು. ಮೊದಲು ಬೇಸ್ಲೈನ್ ಸಮೀಕ್ಷೆ ಯಲ್ಲಿನ ತಪ್ಪುಗಳನ್ನು ಸರಿಪಡಿಸಿ ಕೊಳ್ಳಲಾಯಿತು. ಸರ್ವೆ ಪ್ರಕಾರ ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ 3,74,445 ಕುಟುಂಬಗಳಿವೆ.
ಯಶಸ್ಸಿನ ಗುಟ್ಟು: ಜಿಲ್ಲೆಯಲ್ಲಿ ತೀರಾ ಹಿಂದುಳಿದಿದ್ದ ಶೌಚಾಲಯ ನಿರ್ಮಾಣದಲ್ಲಿ ಪ್ರಗತಿ ಸಾಧಿಸುವುದು ಸುಲಭದ ಮಾತಾಗಿರಲಿಲ್ಲ. ಗ್ರಾಮ ಪಂಚಾಯಿತಿ ಮಟ್ಟದಿಂದ ವಿವಿಧ ಹಂತಗಳಲ್ಲಿ ಆಂದೋಲನದ ಮೂಲಕ ಜಾಗೃತಿ ಮಾಡಲಾಯಿತು.
ಜಿಲ್ಲೆಯಲ್ಲಿ ವಿವಿಧ ಕಾಮಗಾರಿಗಳ ವೀಕ್ಷಣೆಗೆ ತೆರಳುತ್ತಿದ್ದ ಸಿಇಒ ರೋಹಿಣಿ ಸಿಂಧೂರಿ ಅವರು, ಅಲ್ಲಿರುವ ಸರ್ಕಾರಿ ಶಾಲೆ, ವಸತಿನಿಲಯಗಳಿಗೆ ಭೇಟಿ ನೀಡಿ ಮಕ್ಕಳಿಗೆ ಮನೆಗೊಂದು ಶೌಚಾಲಯ ನಿರ್ಮಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಶೌಚಾಲಯ ರಹಿತ ಮಕ್ಕಳ ಮನೆಗಳನ್ನು ದತ್ತು ತೆಗೆದುಕೊಂಡು ಶೌಚಾಲಯ ನಿರ್ಮಾಣಕ್ಕೆ ಪ್ರೇರೇಪಿಸುವ ಹೊಣೆಯನ್ನು ಶಿಕ್ಷಕರಿಗೆ ನೀಡಲಾಗಿತ್ತು. ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರನ್ನೂ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಮೊದಲು ಶೌಚಾಲಯ ಹೊಂದಿಲ್ಲದ ಜನಪ್ರತಿನಿಧಿಗಳಿಗೆ ಶೌಚಾಲಯ ನಿರ್ಮಿಸಿಕೊಳ್ಳಲು ಸೂಚಿಸಿ, ನಿರ್ಮಿಸಿಕೊಳ್ಳುವಂತೆ ನೋಡಿಕೊಳ್ಳಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಷ್ ಅವರಿಂದ ಧ್ವನಿ ಮುದ್ರಿತ ಸಂದೇಶವನ್ನು ಮೊಬೈಲ್ ಮೂಲಕ ಜನರಿಗೆ ತಲುಪಿಸುವ ಕೆಲಸ ಮಾಡಲಾಯಿತು.
‘ಪ್ರತಿ ಗ್ರಾಮದಲ್ಲಿಯೂ ಆಟೊಗಳ ಮೂಲಕ ಪ್ರಚಾರ ಮಾಡಲಾಯಿತು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಶೌಚಾ ಲಯ ನಿರ್ಮಾಣಕ್ಕೆ ಸಂಬಂಧಿಸಿದ ಬೀದಿ ನಾಟಕಗಳನ್ನು ಜಿಲ್ಲೆಯಲ್ಲಿ ಪ್ರದರ್ಶಿಸಲಾಯಿತು’ ಎನ್ನುತ್ತಾರೆ ರೋಹಿಣಿ ಸಿಂಧೂರಿ.
‘ಒಂದೆಡೆ ಜಾಗೃತಿ ಹಾಗೂ ಪ್ರಚಾರದ ಕಾರ್ಯ ಕೈಗೊಂಡರೆ, ಇನ್ನೊಂದೆಡೆ ವಾರಕ್ಕೊಮ್ಮೆ ಕಾರ್ಯನಿರ್ವಾಹಕ ಹಾಗೂ ಸಮನ್ವಯ ಅಧಿಕಾರಿಗಳ ಸಭೆ, ಹದಿನೈದು ದಿನಗಳಿಗೊಮ್ಮೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ವಿಡಿಯೊ ಸಂವಾದ ನಡೆಸಿದೆ.
ಈ ಎಲ್ಲ ಕ್ರಮಗಳ ಫಲಿತಾಂಶದಿಂದಲೇ ಶೌಚಾಲಯ ನಿರ್ಮಾಣದಲ್ಲಿ ಮಂಡ್ಯ ಜಿಲ್ಲೆ ಪ್ರಥಮ ಸ್ಥಾನಕ್ಕೆ ಏರಿದೆ’ ಎನ್ನುವುದು ಅವರ ಮಾತು.
‘ರಾಜ್ಯ ಸರ್ಕಾರವು 31 ಸಾವಿರ ಶೌಚಾಲಯಗಳ ಗುರಿ ನೀಡಿತ್ತು. ಆದರೆ, ನಾವು ಜಿಲ್ಲೆಯಲ್ಲಿ ಒಂದು ಲಕ್ಷ ಶೌಚಾಲಯ ನಿರ್ಮಿಸುವ ಗುರಿ ಇಟ್ಟುಕೊಂಡಿದ್ದೇವೆ. ಇದಕ್ಕೆ ಎಲ್ಲರೂ ಸಹಕಾರ ನೀಡುತ್ತಿದ್ದಾರೆ.
ಶೌಚಾಲಯ ಇಲ್ಲದ್ದರಿಂದ ಮಹಿಳೆಯರಿಗೆ ತೊಂದರೆಯಾಗುತ್ತಿತ್ತು. ಅದನ್ನು ತಪ್ಪಿಸಲು ಮುಂದಾಗಿದ್ದೇವೆ. ಜತೆಗೆ, ಆರೋಗ್ಯ ರಕ್ಷಣೆಯೂ ಇದರಲ್ಲಿ ಅಡಗಿದೆ ಎನ್ನುತ್ತಾರೆ ಅವರು.
ಯಾವುದೇ ಸಮಾರಂಭಕ್ಕೆ ಹೋಗಲಿ, ಯಾವುದೇ ಸಭೆಗೆ ಹೋಗಲಿ, ರೋಹಿಣಿ ಸಿಂಧೂರಿ ಅವರು ಭಾಷಣದಲ್ಲಿ ‘ಶೌಚಾಲಯ ನಿರ್ಮಿಸಿಕೊಳ್ಳಿ’ ಎಂಬುದನ್ನು ತಪ್ಪದೇ ಹೇಳುತ್ತಾರೆ.
ಅದಕ್ಕೆ ಜನರೂ ಕಿವಿಗೊಟ್ಟಿದ್ದಾರೆ. ಆದ್ದರಿಂದಲೇ ರಾಜ್ಯಕ್ಕೆ ಮೊದಲ ಸ್ಥಾನ ಪಡೆದುಕೊಂಡಿದೆ.