ಮೈಸೂರು: ಮೈಸೂರು–ಚೆನ್ನೈ (ಬೆಂಗಳೂರು ಮೂಲಕ) ನಡುವೆ ಹೈ ಸ್ಪೀಡ್ ರೈಲು ಸಂಪರ್ಕ ಕಲ್ಪಿಸುವ ಸಂಬಂಧ ಚೀನಾದ ಎಂಜಿನಿಯರುಗಳ ತಂಡ ಗುರುವಾರ ಮೈಸೂರಿನ ನೈರುತ್ಯ ರೈಲ್ವೆ ವಿಭಾಗೀಯ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳ ಜತೆ ಸಾಧಕ–ಬಾಧಕಗಳ ಕುರಿತು ಚರ್ಚೆ ನಡೆಸಿತು.
ಚೀನಾ ರೈಲ್ವೆ ಇಯಾನ್ ಎಂಜಿನಿಯರಿಂಗ್ ಗ್ರೂಪ್ ಕಂಪೆನಿ ಲಿಮಿಟೆಡ್ನ (ಸಿಆರ್ಇಇಸಿ) ೧೬ ಜನರನ್ನು ಒಳಗೊಂಡ ತಜ್ಞರ ತಂಡ ಸಂಜೆ ಟಿಪ್ಪು ಎಕ್ಸ್ಪ್ರೆಸ್ ರೈಲಿನಲ್ಲಿ ನಗರದ ರೈಲು ನಿಲ್ದಾಣಕ್ಕೆ ಬಂದಿಳಿಯಿತು.
ಬೆಂಗಳೂರು–ಮೈಸೂರು ರೈಲು ಮಾರ್ಗದಲ್ಲಿ ಇರುವ ತಿರುವುಗಳು, ಸಿಗ್ನಲ್ ಮತ್ತು ಸೇತುವೆಗಳು ಹೈಸ್ಪೀಡ್ ರೈಲಿಗೆ ಮಾರಕವಾಗಲಿವೆಯೇ ಎಂಬುದರ ಕುರಿತು ತಜ್ಞರ ತಂಡ ನೈರುತ್ಯ ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಮಾಹಿತಿಗಳನ್ನು ಕಲೆ ಹಾಕಿತು.
ತಂಡದ ಜತೆ ಬಂದಿದ್ದ ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಡಿಆರ್ಎಂ) ಎ.ಕೆ. ಅಗರ್ವಾಲ್ ಸುದ್ದಿಗಾರರೊಂದಿಗೆ ಮಾತನಾಡಿ, ‘ಮೈಸೂರು–ಬೆಂಗಳೂರು ಮಾರ್ಗದಲ್ಲಿ ೨೫೦ ಸೇತುವೆಗಳು ಬರಲಿವೆ. ಅವುಗಳನ್ನು ಮತ್ತಷ್ಟು ಬಲಗೊಳಿಸುವ ಅಗತ್ಯ ಇದೆ. ತಿರುವುಗಳು ಕಡಿಮೆ ಇದ್ದಷ್ಟು ಹೈ ಸ್ಪೀಡ್ ರೈಲಿಗೆ ಅನುಕೂಲವಾಗಲಿದೆ ಎಂದು ತಂಡ ಹೇಳಿದೆ’ ಎಂದರು.
‘ಚೀನಾದ ಇದೇ ತಂಡ ದೇಶದಲ್ಲಿ ಸಂಚರಿಸುತ್ತಿರುವ ರೈಲುಗಳ ವೇಗ ಹೆಚ್ಚಿಸುವ ಕುರಿತು ಅಧ್ಯಯನ ನಡೆಸುತ್ತಿದೆ’ ಎಂದು ಅವರು ಹೇಳಿದರು.
‘ಹೈ ಸ್ಪೀಡ್ ರೈಲು ಕುರಿತು ಚೀನಾ ತಂಡವು ಅಧ್ಯಯನ ನಡೆಸಿ ಮೂರು ತಿಂಗಳ ಒಳಗೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ’ ಎಂದು ರೈಲ್ ವಿಕಾಸ್ ನಿಗಮ್ ಲಿಮಿಟೆಡ್ನ (ಆರ್ವಿಎನ್ಎಲ್) ಬೆಂಗಳೂರಿನ ಯೋಜನಾ ಮುಖ್ಯ ವ್ಯವಸ್ಥಾಪಕ ಅಲೋಕ್ ತಿವಾರಿ ತಿಳಿಸಿದರು. ‘ಚೀನಾ ತಂಡವು ಶುಕ್ರವಾರ ರೈಲ್ವೆ ಅಧಿ ಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಬಸವ ಎಕ್ಸ್ಪ್ರೆಸ್ನಲ್ಲಿ ಬೆಂಗಳೂರಿಗೆ ವಾಪಸಾಗುವ ಸಾಧ್ಯತೆ ಇದೆ’ ಎಂದು ನೈರುತ್ಯ ರೈಲ್ವೆ ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಜಕುಮಾರ್ ಲಾಲ್ ತಿಳಿಸಿದರು.