ತರೀಕೆರೆ/ ಸೊರಬ: ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಮಂಗಳವಾರ ಸಂಭವಿಸಿದ ಅಪಘಾತಗಳಲ್ಲಿ ಒಟ್ಟು 7 ಜನ ಮೃತಪಟ್ಟಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಸಮೀಪದ ಕಟ್ಟೇಹೊಳೆ ಕ್ರಾಸ್ನ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಖಾಸಗಿ ಬಸ್ಸೊಂದು ಒಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅದರಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಮೃತಪಟ್ಟು, 17 ಜನ ಗಂಭೀರವಾಗಿ ಗಾಯಗೊಂಡರು.
ಶಿವಮೊಗ್ಗ ಜಿಲ್ಲೆಯ ಸೊರಬ ನಿವಾಸಿಗಳಾದ ಲಕ್ಷ್ಮಮ್ಮ (66), ದೀಪ್ತಿ (39), ವಿಷ್ಣು (18), ಹಾಲೇಶ ನಾಯ್ಕ (40) ಮೃತರು. ಮೃತ ಲಕ್ಷ್ಮಮ್ಮ , ದೀಪ್ತಿ ಮತ್ತು ವಿಷ್ಣು ಒಂದೇ ಕುಟುಂಬದ ವರು. ಇವರು ಹಾವೇರಿ ಜಿಲ್ಲೆಯ ಹಾನಗಲ್ ಶಾಸಕ ಮನೋಹರ ತಹಶೀಲ್ದಾರ್ ಅವರ ಹತ್ತಿರದ ಸಂಬಂಧಿಗಳು ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ತರೀಕೆರೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನಂತರ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ವಿವರ: ಬೆಂಗಳೂರಿನಿಂದ ಶಿವ ಮೊಗ್ಗ ಜಿಲ್ಲೆಯ ಸಾಗರಕ್ಕೆ ಹೊರಟಿದ್ದ ಗಜಾನನ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಮುಂಜಾನೆ ವೇಳೆ ಮರಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ನಾಲ್ವರ ಶವಗಳು ಪ್ರಯಾಣಿಕರ ಆಸನದ ಕೆಳಭಾಗದಲ್ಲಿ ಸಿಲುಕಿಕೊಂಡಿದ್ದವು. ಜೆಸಿಬಿ ಯಂತ್ರದಿಂದ ಮರ ಮತ್ತು ವಾಹನವನ್ನು ಬೇರ್ಪಡಿಸಿ ಶವಗಳನ್ನು ಹೊರತೆಗೆಯಲು ಪೊಲೀಸರು, ಅಗ್ನಿಶಾಮಕ ಮತ್ತು ಅರಣ್ಯ ಸಿಬ್ಬಂದಿ ಹರಸಾಹಸ ಪಡಬೇಕಾಯಿತು.
ಬಸ್– ಬೈಕ್ ಡಿಕ್ಕಿ: ಶಿವಮೊಗ್ಗ ಜಿಲ್ಲೆ ಸೊರಬ ಸಮೀಪದ ಬಿಳವಗೋಡು ಗ್ರಾಮದ ಬಳಿ ಖಾಸಗಿ ಬಸ್ ಹಾಗೂ ಬೈಕ್ ಮಧ್ಯೆ ನಡೆದ ಅಪಘಾತದಲ್ಲಿ ಬೈಕ್ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸೊರಬ ತಾಲ್ಲೂಕು ಅಕ್ಕಿಆಲೂರಿನ ಇರ್ಷಾದ್ (22), ಪಾಷಾ ಮುಕಂದರ್ ಮತ್ತು ಬಾಷಾ ಡೋಂಗ್ರೆ (38) ಮೃತರು.
ಬೈಕ್ನಲ್ಲಿದ್ದವರು ಅಕ್ಕಿಆಲೂರಿನಿಂದ ಸೊರಬ ಕಡೆ ಬರುತ್ತಿದ್ದರು. ಬಸ್ ಸೊರಬದಿಂದ ಉತ್ತರ ಕನ್ನಡದ ಮುಂಡಗೋಡಿಗೆ ಸಾಗುತ್ತಿತ್ತು.