ಬೆಂಗಳೂರು: ಕಲಾವಿದ ಡಾ.ಬಿ.ಕೆ.ಎಸ್. ವರ್ಮ (ಬೆಂಗಳೂರು) , ಚಂದ್ರಕಾಂತ ಕುಸನೂರ (ಬೆಳಗಾವಿ), ಲಕ್ಷ್ಮಿ ರಾಮಪ್ಪ (ಶಿವಮೊಗ್ಗ) ಅವರು ಕರ್ನಾಟಕ ಲಲಿತಕಲಾ ಅಕಾಡೆಮಿಯ 2013–14ನೇ ಸಾಲಿನ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 2014–15ನೇ ಸಾಲಿನ ಗೌರವ ಪ್ರಶಸ್ತಿ ಚಂದ್ರಶೇಖರ ಸೋಮಶೆಟ್ಟಿ (ಬೀದರ್), ಬಸವರಾಜ ಮುಳಸಾವಳಗಿ (ಮೈಸೂರು) ಮತ್ತು ಕೆ. ಗಂಗಾಧರ (ವಿಜಯಪುರ) ಅವರಿಗೆ ಸಂದಿದೆ.
ಪ್ರಶಸ್ತಿಯು ತಲಾ ₨ 10 ಸಾವಿರ ನಗದು, ಸ್ಮರಣಿಕೆ ಒಳಗೊಂಡಿದೆ. ರವೀಂದ್ರ ಕಲಾಕ್ಷೇತ್ರದಲ್ಲಿ ಮಂಗಳವಾರ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಕಾಡೆಮಿ ಅಧ್ಯಕ್ಷ ಡಾ.ಎಂ.ಎಸ್. ಮೂರ್ತಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಅಂದು ಬೆಳಿಗ್ಗೆ 11 ಗಂಟೆಗೆ ವೆಂಕಟಪ್ಪ ಕಲಾ ಗ್ಯಾಲರಿಯಲ್ಲಿ ಅಕಾಡೆಮಿಯ ವಾರ್ಷಿಕ ಚಿತ್ರಕಲಾ ಪ್ರದರ್ಶನ ಉದ್ಘಾಟನೆಯಾಗಲಿದೆ.
ನ. 27ರವರೆಗೆ ಇದು ಸಾರ್ವಜನಿಕರ ವೀಕ್ಷಣೆಗೆ ತೆರೆದಿರಲಿದೆ, 70 ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗುವುದು ಎಂದು ಮೂರ್ತಿ ತಿಳಿಸಿದರು. ಅಕಾಡೆಮಿಯ 50ನೇ ವರ್ಷದ ಆಚರಣೆಗೆ ಒಟ್ಟು ₨ 12 ಕೋಟಿ ಅನುದಾನ ಕೋರಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
10 ಕಲಾವಿದರಿಗೆ ವಾರ್ಷಿಕ ಪ್ರಶಸ್ತಿ
ಅಕಾಡೆಮಿಯ ವಾರ್ಷಿಕ ಕಲಾ ಪ್ರಶಸ್ತಿಗೆ ಎಸ್.ಎಚ್. ಮುಶಾಳ್ಕರ್, ಅಶೋಕ ಜಿ. ನೆಲ್ಲಗಿ ಮತ್ತು ಎಸ್.ಎಸ್. ಮರಗೋಳ (ಕಲಬುರ್ಗಿ), ಕೆ.ಎಸ್. ರಂಗನಾಥ್, ಜೆ. ದುಂಡರಾಜ ಮತ್ತು ಎನ್. ಕಾಂತರಾಜ್ (ಬೆಂಗಳೂರು), ಆನಂದ ಬೆದ್ರಾಳ (ದಕ್ಷಿಣ ಕನ್ನಡ), ದೇವೇಂದ್ರ ಹುಡಾ (ರಾಯಚೂರು), ಎನ್. ಪರಮೇಶ್ವರ (ಮೈಸೂರು) ಮತ್ತು ವಿಶ್ವೇಶ್ವರ ಪಟಗಾರ (ಉತ್ತರ ಕನ್ನಡ) ಆಯ್ಕೆಯಾಗಿದ್ದಾರೆ.
ವಾರ್ಷಿಕ ಪ್ರಶಸ್ತಿಯು ₨ 5 ಸಾವಿರ ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ. ಪ್ರಶಸ್ತಿಯ ಮೊತ್ತ ಹೆಚ್ಚಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಮೂರ್ತಿ ಹೇಳಿದರು.