ಕರ್ನಾಟಕ

ಅನೈತಿಕ ಸಂಬಂಧದ ಸಂಶಯ: ಪತ್ನಿ, ಪುತ್ರನ ಹತ್ಯೆಗೈದ ಆರೋಪಿಯ ಬಂಧನ

Pinterest LinkedIn Tumblr

arrest

ಬೆಂಗಳೂರು, ಸೆ. 15: ಅನೈತಿಕ ಸಂಬಂಧದ ಸಂಶಯದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಬುದ್ಧಿಮಾಂದ್ಯ ಪುತ್ರ ಹಾಗೂ ಪತ್ನಿಯನ್ನು ಚಾಕುವಿನಿಂದ ಕತ್ತು ಕೊಯ್ದು ಭೀಕರವಾಗಿ ಹತ್ಯೆಗೈದ ದಾರುಣ ಘಟನೆ ಇಲ್ಲಿನ ರಾಜಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.

ಕೊಲೆಯಾದ ಬುದ್ಧಿಮಾಂದ್ಯ ಬಾಲಕನನ್ನು ಹರ್ಷಿತ್ (5) ಹಾಗೂ ಆತನ ತಾಯಿ ಮಂಜುಳಾ ಬಾಯಿ (25) ಎಂದು ಗುರುತಿಸಲಾಗಿದೆ. ಆರೋಪಿ ಕುಮಾರ್ ನಾಯಕ್(30)ಎಂಬವನನ್ನು ಪೊಲೀಸರು ಬಂಧಿಸಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಕುಮಾರ್ ನಾಯಕ್ ಹಾಗೂ ಮಂಜುಳಾಬಾಯಿ ದಂಪತಿಗೆ ಹರ್ಷಿತ್ ಎಂಬ ಗುಂಡು ಹಾಗೂ ಚಂದನ ಎಂಬ ಹೆಣ್ಣು ಮಗುವಿದ್ದು ದಂಪತಿ ಇಲ್ಲಿನ ರಾಜಾಜಿನಗರ, 4ನೆ ಬ್ಲಾಕ್, 10ನೆ ಮುಖ್ಯ ರಸ್ತೆಯ ಬಳಿಕ ರಾಮ ಮಂದಿರ ಸಮೀಪದಲ್ಲಿ ವಾಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕೌಟುಂಬಿಕ ವಿಷಯಕ್ಕೆ ಸಂಬಂಧಿಸಿದಂತೆ ದಂಪತಿಯ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಸೋಮವಾರ ಮಧ್ಯಾಹ್ನವೂ ದಂಪತಿಯ ಮಧ್ಯೆ ಜಗಳ ನಡೆದಿದ್ದು, ಈ ವೇಳೆ ಆರೋಪಿ ಕುಮಾರ್ ನಾಯಕ್ ಪತ್ನಿ ಕತ್ತು ಕೊಯ್ದು ಕೊಲೆ ಮಾಡಿದ್ದಾರೆ. ಅಲ್ಲದೆ, ತನ್ನ ಬುದ್ಧಿಮಾಂದ್ಯ ಪುತ್ರನನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಆರೋಪಿ ಕುಮಾರ್ ನಾಯಕ್ ತನ್ನ ಪತ್ನಿ ಮಂಜುಳಾ ಬಾಯಿ ಹಾಗೂ ಪುತ್ರನನ್ನು ಕೊಲೆ ಮಾಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಈ ಸಂಬಂಧ ರಾಜಾಜಿನಗರ ಠಾಣಾ ಪೊಲೀಸರು ಮೊಕದ್ದಮೆ ದಾಖಲು ಮಾಡಿಕೊಂಡಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ.

Write A Comment