ಕುಂದಾಪುರ: ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎಂಬ ಕವಿವಾಣಿಯಂತೆ ಕನ್ನಡ ನಾಡು- ನುಡಿ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಬೇಕು. ‘ಮಾತೃ ಭಾಷೆಯನ್ನು ಅರಿತವ ಬೇರೆಲ್ಲ ಭಾಷೆಗಳನ್ನೂ ಜೀರ್ಣಿಸಬಲ್ಲ’ ಎಂಬ ತೇಜಸ್ವಿಯವರ ಮಾತಿನಂತೆ ವಿಜ್ಞಾನ – ತಂತ್ರಜ್ಞಾನ – ವೈದ್ಯಕೀಯ ಕ್ಷೇತ್ರಗಳಲ್ಲಿ ಕನ್ನಡ ಭಾಷೆಯನ್ನು ಅಳವಡಿಸಲು, ಪೂರಕ ಸಾಹಿತ್ಯ – ಸಂಪನ್ಮೂಲ ಒದಗಿಸಲು ಪ್ರಯತ್ನಶೀಲರಾಗಬೇಕಿದೆ. ಕನಸು – ಭಾವನೆ ಹಾಗೂ ಜೀವನದ ಭಾಷೆ ನಮ್ಮ ಕನ್ನಡ ಎಂದು ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ರಾಜು ಕೆ. ಹೇಳಿದರು.

ಅವರು ಸೋಮವಾರ ಕುಂದಾಪುರ ತಾಲೂಕು ಆಡಳಿತದ ವತಿಯಿಂದ ಇಲ್ಲಿನ ಗಾಂಧಿ ಮೈದಾನದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ವಚನ, ಗಾಯನದಂತೆ ಯಕ್ಷಗಾನವು ಕನ್ನಡ ನುಡಿ ಸೇವೆಗೆ ಮಹತ್ತರ ಕೊಡುಗೆ ನೀಡಿದೆ. ಇದರೊಂದಿಗೆ ತಂತ್ರಜ್ಞಾನ ಭಾಷೆಯೂ ಕನ್ನಡವಾಗಬೇಕು ಎನ್ನುವ ಆಶಯ ನಮ್ಮದು ಎಂದ ಅವರು, ಕನ್ನಡಕ್ಕೆ ಎರಡೂವರೆ ಸಾವಿರ ವರ್ಷಗಳ ಇತಿಹಾಸವಿದೆ. ಸಾಹಿತ್ಯ, ವಾಸ್ತುಶಿಲ್ಪ, ಭಾವ್ಯತೆಯ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿರುವ ಶ್ರೇಷ್ಠತೆ ನಮ್ಮದು. ಪಂಪ- ರನ್ನ, ಕುವೆಂಪು- ಕಾರಂತರು- ಬೇಂದ್ರೆವರೆಗೆ ಸಾಗಿ ಬಂದ ಸಾಹಿತ್ಯದ ತೇರು ಹೊಸ ತಲೆಮಾರಿಗೂ ತಲುಪಿರುವುದು ಸಾಂಸ್ಕೃತಿಕ ಶ್ರೀಮಂತಿಯ ಕೈಗನ್ನಡಿ ಎಂದರು.
ಕುಂದಾಪುರ ಪುರಸಭಾಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಪುರಸಭಾ ಉಪಾಧ್ಯಕ್ಷ ಸಂದೀಪ್ ಖಾರ್ವಿ, ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ, ಸದಸ್ಯರಾದ ದೇವಕಿ ಸಣ್ಣಯ್ಯ, ಪ್ರಭಾಕರ್ ವಿ., ಸಂತೊಷ್ ಶೆಟ್ಟಿ, ಕಮಲ ಮಂಜುನಾಥ್ ಪೂಜಾರಿ, ಪುಷ್ಪಾ ಶೇಟ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಜಯ ಎಸ್. ಪೂಜಾರಿ, ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ., ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಕೆ. ಪದ್ಮನಾಭ, ತಾಲೂಕು ಮಟ್ಟದ ಅಧಿಕಾರಿಗಳು, ಇಲಾಖಾ ಸಿಬಂದಿ, ಜನಪ್ರತಿನಿಧಿಗಳು, ಶಿಕ್ಷಕರು ಉಪಸ್ಥಿತರಿದ್ದರು.
ಕುಂದಾಪುರದ ನಗರ ಠಾಣಾಧಿಕಾರಿ ಸದಾಶಿವ ಗವರೋಜಿ ನೇತೃತ್ವದಲ್ಲಿ ಪೋಲೀಸ್ ಇಲಾಖೆಯಿಂದ ಧ್ವಜವಂದನೆ ನಡೆಯಿತು. ಶಿಕ್ಷಕ ಪ್ರಕಾಶ್ ಹಾಗೂ ಸಂಗಡಿಗರು ಕನ್ನಡ ಗೀತೆಗಳ ಗಾಯನ ಹಾಡಿದರು.
ಕುಂದಾಪುರ ತಹಶೀಲ್ದಾರ್ ಕಿರಣ್ ಜಿ. ಗೌರಯ್ಯ ಸ್ವಾಗತಿಸಿ, ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಕುಸುಮಾಕರ್ ಶೆಟ್ಟಿ ವಂದಿಸಿದರು. ಶಿಕ್ಷಕ ಚಂದ್ರಶೇಖರ್ ಬೀಜಾಡಿ ಕಾರ್ಯಕ್ರಮ ನಿರ್ವಹಿಸಿದರು.
Comments are closed.