(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಕೃಷಿ ಲಾಭದಾಯಕವಲ್ಲ ಎಂಬ ತೀರ್ಮಾನದಿಂದ ರೈತರು ಹೊರಬರಬೇಕು. ರೈತರು ಕೃಷಿಯಿಂದ ವಿಮುಖರಾಗದಿರಲು ಸರಕಾರ ಉತ್ತಮ ಯೋಜನೆಗಳನ್ನು ರೂಪಿಸಬೇಕಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಬುಧವಾರ ಕುಂದಾಪುರ ತಾಲೂಕಿನ ಕಾಳಾವರದಲ್ಲಿ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ಕೃಷಿ ಯಂತ್ರೋಪಕರಣಗಳ ಬಾಡಿಗೆ ಸೇವಾಕೇಂದ್ರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಇಡೀ ಜಗ್ಗತ್ತು ಕೊರೋನಾ ಕಾರಣದಿಂದ ಎಲ್ಲರು ಮನೆಯಲ್ಲಿದ್ದಾಗ ರೈತ ಕೃಷಿ ಕೈಂಕರ್ಯ ನಡೆಸಿದ್ದಾರೆ. ಆತ ಕೊರೋನಾಕ್ಕೆ ಹೆದರಿ ಮನೆಯಲ್ಲಿ ಕುಳಿತಿದ್ದರೇ ಹಸಿವಿನಿಂದ ಎಷ್ಟೋ ಜನರು ಸಾಯುತ್ತಿದ್ದರು. ಕೃಷಿಯಲ್ಲಿ ಬರುವ ಲಾಭಕ್ಕಿಂತ ವೈಯಕ್ತಿಕ ಖರ್ಚು ಹೆಚ್ಚಾಗಿ ಜನರು ಕೃಷಿಯ ಒಲವನ್ನು ಕಳೆದುಕೊಂಡಿದ್ದಾರೆ. ಯಂತ್ರೋಪಕರಣಗಳನ್ನು ಕೃಷಿ ಚಟುವಟಿಕೆಯಲ್ಲಿ ಬಳಸಿಕೊಳ್ಳಲು ಯೋಜನೆ ರೂಪಿಸಲಾಗಿದೆ. ರೈತರು ಹಾಗೂ ಸಣ್ಣ ರೈತರಿಗೆ ಯಂತ್ರೋಪಕರಣಗಳು ಬಾಡಿಗೆಗೆ ದೊರಕುವಂತೆ ಬೇರೆ ಬೇರೆ ಭಾಗಗಳಲ್ಲಿ ಬಾಡಿಗೆ ಕೇಂದ್ರಗಳನ್ನು ತೆರೆಯಲಾಗಿದೆ ಎಂದರು.
ಮಾಜಿ ಸಭಾಪತಿ ಪ್ರತಾಪ್ಚಂದ್ರ ಶೆಟ್ಟಿ ಗ್ರಾಹಕ ಸೇವಾ ಕೇಂದ್ರ ಉದ್ಘಾಟಿಸಿ ಮಾತನಾಡಿ, ಕೃಷಿ ಯಂತ್ರಗಳ ಬಾಡಿಗೆ ಕೇಂದ್ರದಿಂದ ಈ ಭಾಗದ ರೈತರಿಗೆ ಹೆಚ್ಚು ಅನೂಕೂಲವಾಗುತ್ತದೆ. ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಸಹಾಯವಾಗುವ ನಿಟ್ಟಿನಲ್ಲಿ ಈ ಯೋಜನೆ ಉತ್ತಮವಾಗಿ ಕಾರ್ಯ ನಿರ್ವಹಿಸಲಿದೆ ಎಂದರು.
ಈ ಸಂದರ್ಭದಲ್ಲಿ ಜನಜಾಗೃತಿ ಸಮಿತಿ ಸ್ಥಾಪಕಾಧ್ಯಕ್ಷ ಬಿ. ಅಪ್ಪಣ್ಣ ಹೆಗ್ಡೆ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಎಲ್.ಹೆಚ್. ಮಂಜುನಾಥ್, ಕಾಳಾವರ ಗ್ರಾ.ಪಂ ಅಧ್ಯಕ್ಷೆ ಆಶಾಲತಾ ಶೆಟ್ಟಿ, ಸಹಾಯಕ ಕೃಷಿ ನಿರ್ದೇಶಕರಾದ ರೂಪಾ ಜೆ ಮಾಡ, ಯೋಜನಾಧಿಕಾರಿ ವಸಂತ ಸಾಲ್ಯಾನ್, ಅಬ್ರಹಾಂ ಎಂ.ಕೆ., ಸ್ಥಳದಾನಿ ಸುಜಿತ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಕುಂದಾಪುರ ವಲಯದ ಧ.ಗ್ರಾ. ಯೋಜನೆಯ ಕೃಷಿ ಅಧಿಕಾರಿ ಚೇತನ್ ಕಾರ್ಯಕ್ರಮ ನಿರೂಪಿಸಿದರು. ಡಾ| ಎಲ್.ಹೆಚ್. ಮಂಜುನಾಥ್ ಸ್ವಾಗತಿಸಿದರು.
Comments are closed.