ಉಡುಪಿ: ಸಚಿವ ಎಸ್. ಅಂಗಾರ ಇಂದು ಕುಂದಾಪುರದ ಆನೆಗುಡ್ಡೆ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ರು.
ಕೋಟ ಶ್ರೀನಿವಾಸ್ ಪೂಜಾರಿ ಹಾಗೂ ನಾನು ಒಂದೇ ಸರ್ಕಾರದವರು. ಅವರೂ ಸಚಿವರು ಈಗ ನಾನೂ ಸಚಿವ. ಅವರ ಉದ್ದೇಶ, ಯೋಜನೆಯಲ್ಲಿ ಯಾವುದೇ ಗೊಂದಲಗಳಿಲ್ಲ. ಹೆಚ್ಚುವರಿಯಾಗಿ ನಾವೇನು ಅಭಿವೃದ್ಧಿ ಮಾಡಬೇಕು ಅದನ್ನು ಗಮನದಟ್ಟಿಟ್ಟುಕೊಂಡು ಕೆಲಸ ಮಾಡುತ್ತೇವೆ ಎಂದರು. ಮೀನುಗಾರರ ಸಾಲ ಮನ್ನಾದ ಬಗ್ಗೆಯೂ ಮುಖ್ಯಮಂತ್ರಿಯವರ ಗಮನಕ್ಕೆ ಮತ್ತೆ ತರಲಾಗುವುದು ಎಂದು ಇದೇ ವೇಳೆ ಅವರು ಹೇಳಿದರು.
ಕಡಲ್ಕೊರೆತ ತಡೆಯಲು ಕ್ರಮ…
ಕರಾವಳಿಯಾದ್ಯಂತ ಕಡಲ್ಕೊರೆತ ಸಮಸ್ಯೆಯನ್ನು ನಿವಾರಿಸಲು ಸಂಬಂಧಪಟ್ಟ ಇಂಜಿನಿಯರ್ಗಳೊಂದಿಗೆ ಚರ್ಚಿಸಲಾಗುವುದು. ಯಾವ ರೀತಿಯ ತಾಂತ್ರಿಕತೆಯನ್ನು ಬಳಸಲಾಗುತ್ತದೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುತ್ತೇನೆ. ಮುಂದಿನ ಕಾರ್ಯ ಮಾಡುತ್ತೇವೆ ಎಂದು ಎಸ್. ಅಂಗಾರ ಹೇಳಿದರು.
ಬ್ರೋಕರ್ ಹಾವಳಿ ತಡೆಗಟ್ಟಲು ಕ್ರಮ :
ಯಾವುದೇ ಇಲಾಖೆಯಲ್ಲಿ ಬ್ರೋಕರ್ ಹಾವಳಿ ಇದ್ದರೆ ಅದನ್ನು ತಡೆಗಟ್ಟುವ ಕಾರ್ಯ ಮಾಡಲಾಗುವುದು. ನಾನೂ ಕೂಲಿ ಕಾರ್ಮಿಕ. ಕೂಲಿಯವರ ಕಷ್ಟ ಸುಖ ನನಗೆ ಅರಿವಿದೆ. ಹಾಗಾಗಿ ಈ ಬಗ್ಗೆ ತಿಳಿದುಕೊಂಡು ಮುಂದಿನ ಹೆಜ್ಜೆ ಇಡುತ್ತೇನೆ ಎಂದರು.