ಕರಾವಳಿ

ಉಡುಪಿ ಜಿಲ್ಲೆಯಲ್ಲಿ ಪಡಿತರವಾಗಿ ಗೋದಿ, ಬೇಳೆ ವಿತರಿಸಿದ ಬಗ್ಗೆ ಡಿಸಿ ಗಮನಕ್ಕೆ: ಡಾ. ಕೃಷ್ಣಮೂರ್ತಿ

Pinterest LinkedIn Tumblr

ಉಡುಪಿ: ಸರ್ಕಾರದಿಂದ ಲಭ್ಯವಾಗಿರುವ ನಿಗಧಿತ ಪ್ರಮಾಣದ ಪಡಿತರವನ್ನು, ಪಡಿತರ ಅಂಗಡಿಗಳ ಮೂಲಕ ಪಡೆಯುವುದು ಪ್ರತಿಯೊಬ್ಬ ಪಡಿತರದಾರರನ ಹಕ್ಕು, ಆದ್ದರಿಂದ ಜಿಲ್ಲೆಯ ಎಲ್ಲಾ ಪಡಿತರ ಅಂಗಡಿಗಳ ಮುಂದೆ, ಪಡಿತರ ವಿತರಿಸುವ ಪ್ರಮಾಣ ಮತ್ತು ವಿತರಿಸುವ ಧಾನ್ಯಗಳ ವಿವರಗಳನ್ನು ತಕ್ಷಣದಿಂದಲೇ ಕಡ್ಡಾಯವಾಗಿ ಪ್ರದರ್ಶಿಸಬೇಕೆಂದು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಕೃಷ್ಣಮೂರ್ತಿ ಸೂಚಿಸಿದ್ದಾರೆ.ಅವರು ಬುಧವಾರ ಉಡುಪಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಉಡುಪಿ ಜಿಲ್ಲೆಯಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಪಡಿತರ ವಿತರಿಸುವಾಗ ಅಕ್ಕಿಯನ್ನು ಮಾತ್ರ ವಿತರಿಸಿದ್ದು, ಗೋಧಿ ಮತ್ತು ಬೇಳೆಯನ್ನು ವಿತರಿಸದೇ ಇರುವುದು ಆಯೋಗದ ಪರಿಶೀಲನೆಯಲ್ಲಿ ಕಂಡುಬಂದಿದ್ದು ಈ ಕುರಿತಂತೆ ಜಿಲ್ಲಾಧಿಕಾರಿಗಳ ಗಮನಕ್ಕೆ ಸಹ ತಂದಿದ್ದು, ಸಂಬಂದಪಟ್ಟ ಅಧಿಕಾರಿಗಳಿಗೆ ಈ ಕುರಿತಂತೆ ವರದಿ ನೀಡುವಂತೆ ಸೂಚಿಸಲಾಗಿದೆ ಎಂದ ಡಾ.ಕೃಷ್ಣಮೂರ್ತಿ, ಜಿಲ್ಲೆಯ ಪಡಿತರ ಅಂಗಡಿಗಳಲ್ಲಿ ರಾಜ್ಯ ಸರ್ಕಾರ ನಿಗಧಿಪಡಿಸದ ಸಮಯದ ಬದಲು ಇತರೇ ಸಮಯದಲ್ಲಿ ಪಡಿತರ ವಿತರಿಸುತ್ತಿರುವುದು ಮತ್ತು ಕೆಲವು ಪಡಿತರ ಅಂಗಡಿಗಳಲ್ಲಿ ಸ್ಟಾಕ್ ವ್ಯತ್ಯಾಸ ಕಂಡು ಬಂದಿದೆ, ಅಂಗನವಾಡಿಗಳಲ್ಲಿ ನೀಡುವ ಆಹಾರದ ವಿತರಣೆಯಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬಂದಿದ್ದು, ಆಯೋಗ ಸೂಚಿಸಿರುವ ಪ್ರಿಂಟೆಡ್ ರಿಜಿಸ್ಟಾರ್ ಗಳಲ್ಲಿ ವಿತರಣೆಯ ವಿವರಗಳನ್ನು ಕುರಿತು ದಾಖಲಿಸುತ್ತಿಲ್ಲ ಎಂದು ತಿಳಿಸಿದರು.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು , ಪಡಿತರ ಚೀಟಿದಾರರಿಗೆ, ಶಾಲೆಗಳಿಗೆ, ಅಂಗನವಾಡಿಗಳಿಗೆ , ಹಾಸ್ಟೆಲ್ ಗಳಿಗೆ ನೀಡುತ್ತಿರುವ ಉಚಿತ ಆಹಾರದ ಸಮರ್ಪಕ ವಿತರಣೆ ಮತ್ತು ಅಲ್ಲಿನ ಲೋಪದೋಷಗಳ ಕುರಿತು ಆಹಾರ ಆಯೋಗ ಪರಿಶೀಲನೆ ನಡೆಯುತ್ತಿದ್ದು, ಕೋವಿಡ್ 19 ಈ ಅವಧಿಯಲ್ಲಿ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ ಪಡಿತರ ವಿತರಣೆ ಪರಿಶೀಲನೆ ನಡೆಸುತ್ತಿದ್ದು, ಇದುವರೆಗೆ 11 ಜಿಲ್ಲೆಗಳಿಗೆ ಭೇಟಿ ನೀಡಿದೆ ಎಂದು ಆಯೋಗದ ಸದಸ್ಯ ಶಿವಶಂಕರ್ ತಿಳಿಸಿದರು. ಸರಕಾರದಿಂದ ಉಚಿತ ಪಡಿತರ ಪಡೆಯುವ ಫಲಾನುಭವಿಗಳು , ಸದ್ರಿ ಪಡಿತರವನ್ನು ಬೇರೆಯವರಿಗೆ ಮಾರುವುದು ಮತ್ತು ದುರುಪಯೋಗ ಪಡಿಸಿಕೊಳ್ಳುವುದು ಕಂಡು ಬಂದಲ್ಲಿ ಅಂತಹ ಪಡಿತರ ಚೀಟಿಯನ್ನು ಜಿಲ್ಲಾ ಆಹಾರ ಇಲಾಖೆಯ ಉಪ ನಿರ್ದೇಶಕರು ರದ್ದುಪಡಿಸಬಹುದು ಎಂದು ಶಿವಶಂಕರ್ ಹೇಳಿದರು.

ಉಡುಪಿ ಜಿಲ್ಲೆಯಲ್ಲಿ ಏಪ್ರಿಲ್ ತಿಂಗಳಲ್ಲಿ ಉಚಿತ ಅಕ್ಕಿಯ ಜೊತೆಗೆ 2 ಕೆಜಿ ಗೋಧಿ ಉಚಿತವಾಗಿ ನೀಡಬೇಕಿತ್ತು ಹಾಗೂ ಮೇ ತಿಂಗಳಲ್ಲಿ ಅಕ್ಕಿಯ ಜೊತೆಗೆ 2 ಕೆಜಿ ಬೇಳೆ ಉಚಿತವಾಗಿ ನೀಡಬೇಕಿದ್ದು, ಪಡಿತರದಾರರಿಗೆ ಈ ಸೌಲಭ್ಯ ನೀಡಿಲ್ಲ ಎಂದ ಅಧ್ಯಕ್ಷ ಕೃಷ್ಣಮೂರ್ತಿ, ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಶಾಸಕರ ನೇತೃತ್ವದಲ್ಲಿ ಪಡಿತರ ಚೀಟಿದಾರರ ಹಾಗೂ ನ್ಯಾಯಬೆಲೆ ಅಂಗಡಿ ಮಾಲೀಕರ ಸಭೆ ನಡೆಸುವದರ ಮೂಲಕ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾ ಆಹಾರ ಇಲಾಖೆಯ ಉಪ ನಿರ್ದೇಶಕ ಗಜೇಂದ್ರ ಉಪಸ್ಥಿತರಿದ್ದರು.

Comments are closed.