ಕರಾವಳಿ

ಟೀಮ್ ಬಿ – ಹ್ಯೂಮನ್ ನಿಂದ ಪುತ್ತೂರಿನಲ್ಲಿ ರಂಝಾನ್ ಕಿಟ್ ವಿತರಣೆ

Pinterest LinkedIn Tumblr

ಮಂಗಳೂರು ; ಕಳೆದ 47 ದಿನಗಳಿಂದ ಹಸಿದವರಿಗೆ ಅನ್ನ, ಮನೆ ಬಾಗಿಲಿಗೆ ದಿನಸಿ ಕಿಟ್ ಮತ್ತು ರಂಝಾನ್ ಕಿಟ್ ಗಳನ್ನು ತಲುಪಿಸುವಲ್ಲಿ ಅವಿರತಶ್ರಮ ವಹಿಸುತ್ತಿರುವುದರ ಮೂಲಕ, ನಿರಂತರ ಸಮಾಜಸೇವೆಯಲ್ಲಿ ತೊಡಗಿಸಿಕೊಂಡು ಜನ ಮನ್ನಣೆ ಗಳಿಸಿರುವ ಮಂಗಳೂರಿನ ಟೀಮ್ ಬಿ-ಹ್ಯೂಮನ್ ಸಂಸ್ಥೆಯು ಪುತ್ತೂರು ತಾಲೂಕಿನಲ್ಲಿ ರಂಝಾನ್ ಕಿಟ್ ವಿತರಣೆ ನಡೆಸಿತು.

ಪುತ್ತೂರು ತಾಲೂಕಿನ ಕೂಡುರಸ್ತೆ ಜಮಾತ್ ನ ಎಲ್ಲಾ 70 ಕುಟುಂಬ, ಕಳೆದ ವಾರ ಕಿಟ್ ತಲುಪಿಸಲು ಬಾಕಿ ಉಳಿದಿದ್ದ ಪಾಪೆತ್ತಡ್ಕ ಜಮಾತ್ ನ 30 ಕುಟುಂಬಗಳಿಗೆ ರಂಝಾನ್ ಕಿಟ್ ತಲಪಿಸಿತು.

ಇದರೊಂದಿಗೆ ಪುತ್ತೂರು ತಾಲೂಕಿನಲ್ಲಿ ಕೂಡುರಸ್ತೆ, ಪಾಪತ್ತಡ್ಕ ಮತ್ತು ತ್ಯಾಗರಾಜೇ ಜಮಾತ್ಗೆ ಒಳಪಟ್ಟ ಎಲ್ಲಾ ಮನೆಗಳಿಗೆ ಒಟ್ಟು 200 ರಂಝಾನ್ ಕಿಟ್ ವಿತರಣೆ ನಡೆಸಿದಂತಾಗಿದೆ. ಇದಲ್ಲದೆ ಪುತ್ತೂರಿನ ಗ್ರಾಮೀಣ ಪ್ರದೇಶದ ಕೆಲವು ಬಡ ಕುಟುಂಬಗಳಿಗೂ ಕಿಟ್ ವಿತರಿಸಲಾಗಿದೆ.

ದ.ಕ. ಜಿಲ್ಲೆಯಲ್ಲಿ ಲಾಕ್ ಡೌನ್ ಸಂಕಷ್ಟದಲ್ಲಿರುವ 750 ವಲಸೆ ಕಾರ್ಮಿಕರಿಗೆ ಪ್ರತಿದಿನ ಉಪಹಾರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿರುವ ಎಲ್ಲಾ ಜಾತಿ, ಧರ್ಮದ ಸಾವಿರಾರು ನಿರ್ಗತಿಕ ಕುಟುಂಬಗಳಿಗೆ ದಿನಸಿ ಕಿಟ್, ಪ್ರತಿದಿನ 450 ಉಪವಾಸಿಗರಿಗೆ ಇಫ್ತಾರ್ ಮತ್ತು ಸಹರಿ ಅನ್ನಾಹಾರ ಟೀಂ ಬಿ-ಹ್ಯೂಮೆನ್ ಸಂಸ್ಥೆಯಿಂದ ನೀಡಲಾಗುತ್ತಿದೆ.

ಏಪ್ರಿಲ್ 23ರಿಂದ ಒಟ್ಟು 35 ಸಾವಿರ ಜನರಿಗೆ ಅನ್ನಾಹಾರ ನೀಡಲಾಗಿದ್ದು, ಈ ಯೋಜನೆ ಮುಂದುವರಿಯಲಿದೆ. ಜಿಲ್ಲೆಯ ಇನ್ನೂ ಕೆಲವು ಜಮಾತ್ ಗಳು ರಂಜಾನ್ ಕಿಟ್ ಗಾಗಿ ಮನವಿ ಸಲ್ಲಿಸಿದ್ದು, ಮುಂದಿನ ಹಂತದಲ್ಲಿ ಪರಿಶೀಲನೆ ನಡೆಸಿ, ವಿತರಿಸಲು ಪ್ರಯತ್ನಿಸಲಾಗುವುದು ಎಂದು ಟೀಮ್ ಬಿ-ಹ್ಯೂಮನ್ ಸ್ಥಾಪಕಾಧ್ಯಕ್ಷ ಆಸೀಫ್ ಡೀಲ್ಸ್ ತಿಳಿಸಿದ್ದಾರೆ.

ಇಂದು ನಡೆದ ಕಿಟ್ ವಿತರಣೆಗೆ ಕೂಡುರಸ್ತೆ ಜುಮಾ ಮಸೀದಿಯ ಖತೀಬ್ ಯಾಕೂಬ್ ದಾರಿಮಿ ದುಆ ಮೂಲಕ ಚಾಲನೆ ನೀಡಿದರು. ತಂಡದಲ್ಲಿ ಟೀಮ್ ಬಿ – ಹ್ಯೂಮನ್ ಸದಸ್ಯರಾದ ಅಶ್ರಫ್ ಐನಾ ಗ್ರೂಪ್, ಅಲ್ತಾಫ್, ಶಿಯಾ ಡೀಲ್ಸ್, ಅಹ್ನಫ್ ಡೀಲ್ಸ್, ಶುಕೂರ್ ಹಾಜಿ ಕಲ್ಲೇಗ, ‘ಇ’-ಫ್ರೆಂಡ್ಸ್ ಸ್ಥಾಪಕಾಧ್ಯಕ್ಷ ಇಮ್ತಿಯಾಜ್ ಪಾರ್ಲೆ, ಸಾಮಾಜಿಕ ಕಾರ್ಯಕರ್ತ ಸಲೀಂ ಯು.ಬಿ., ಕೂಡುರಸ್ತೆ ಜುಮಾ ಮಸ್ಜಿದ್ ಅಧ್ಯಕ್ಷ ಪಿ.ಕೆ ಮುಹಮ್ಮದ್, ಶಾಫಿ ಪಾಪೆತ್ತಡ್ಕ ಮತ್ತಿತರರಿದ್ದರು.

Comments are closed.