ಕರಾವಳಿ

ಕೆಥೊಲಿಕ್ ಸಭಾ ಉಡುಪಿ ಪ್ರದೇಶ್; ‘ಸಮುದಾಯೋತ್ಸವ್-2020’ ಸ್ಟಿಕ್ಕರ್ ಮತ್ತು ಪೋಸ್ಟರ್ ಅನಾವರಣ

Pinterest LinkedIn Tumblr

ಉಡುಪಿ: ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ವತಿಯಿಂದ 2020 ಜನವರಿ 19 ರಂದು ಕಲ್ಯಾಣಪುರ ಮೌಂಟ್ ರೋಸರಿ ಚರ್ಚಿನ ಆವರಣದಲ್ಲಿ ಆಯೋಜಿಸಿರುವ ಧರ್ಮಪ್ರಾಂತ್ಯ ಮಟ್ಟದ ಶ್ರೀಸಾಮಾನ್ಯರ ಸಮ್ಮೇಳನ ‘ಸಮುದಾಯೋತ್ಸವ್-2020’ ಇದರ ಸ್ಟಿಕ್ಕರ್ ಮತ್ತು ಪೋಸ್ಟರ್ ಅನಾವರಣ ಕಾರ್ಯಕ್ರಮ ಗುರುವಾರ ಸಂಘಟನೆಯ ಸಭಾಭವನದಲ್ಲಿ ಜರುಗಿತು.

ಧರ್ಮಪ್ರಾಂತ್ಯ ಮಟ್ಟದ ಶ್ರೀಸಾಮಾನ್ಯರ ಸಮ್ಮೇಳನ ‘ಸಮುದಾಯೋತ್ಸವ್-2020’ ಇದರ ಸ್ಟಿಕ್ಕರ್ ಮತ್ತು ಪೋಸ್ಟರ್ ನ್ನು ಪತ್ರಕರ್ತರಾದ ನಾಗರಾಜ ರಾವ್, ಉದ್ಯಮಿಗಳಾದ ಮೊಹಮ್ಮದ್ ಮೌಲಾ, ಗೌತಮ್ ನಾವಡ ಹಾಗೂ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಆಧ್ಯಾತ್ಮಿಕ ನಿರ್ದೇಶಕ ವಂ|ಫರ್ಡಿನಾಂಡ್ ಗೊನ್ಸಾಲ್ವಿಸ್ ಜಂಟಿಯಾಗಿ ಅನಾವರಣಗೊಳಿಸಿದರು.

ಬಳಿಕ ಮಾತನಾಡಿದ ನಾಗರಾಜ್ ರಾವ್ ಅವರು ಸೇವೆಯ ಮೂಲಕ ಕ್ರೈಸ್ತ ಸಮುದಾಯ ಸದಾ ತನ್ನ ಛಾಪನ್ನು ದೇಶದಲ್ಲಿ ಮೂಡಿಸಿದೆ. ಸಮಾಜದಲ್ಲಿ ಯಾವುದೇ ಕಾರ್ಯಕ್ರಮ ಮಾಡುವಾಗ ಪ್ರತಿಯೊಬ್ಬರ ಸಹಕಾರ ಬಯಸುವುದು ಸಾಮಾನ್ಯ. ಪ್ರತಿಯೊಬ್ಬರು ತಮ್ಮ ಸೇವೆಯನ್ನು ತಮ್ಮ ವ್ಯಾಪ್ತಿಯಲ್ಲಿ ನೀಡಿದಾಗ ಯಾವುದೇ ಕಾರ್ಯಕ್ರಮ ಕೂಡ ಯಶಸ್ವಿಯಾಗಲು ಸಾಧ್ಯ ಎಂದರು.

ಇನ್ನೋರ್ವ ಅತಿಥಿ ಗೌತಮ್ ನಾವಡ ಅವರು ಸಮಾಜದಲ್ಲಿ ಇಂತಹ ಸಮ್ಮೇಳನಗಳ ಮೂಲಕ ಸಮುದಾಯವನ್ನು ಒಗ್ಗೂಡಿಸುವ ಕೆಲಸ ನಡೆಯುತ್ತಿರಬೇಕು ಇದರಿಂದ ಸಮಾಜದ ಒಗ್ಗಟ್ಟು ಉಳಿಯಲು ಸಾಧ್ಯ ಎಂದರು.

ಉದ್ಯಮಿ ಮೊಹಮ್ಮದ್ ಮೌಲಾ ಮಾತನಾಡಿ ಪ್ರತಿಯೊಂದು ಸಮಾಜದವರು ತಮ್ಮ ಮಧ್ಯೆ ಕೇವಲ ಗೋಡೆಗಳನ್ನು ಕಟ್ಟುವ ಕೆಲಸಗಳನ್ನು ಮಾಡದೇ ಸೌಹಾರ್ದ ಸಮಾಜ ನಿರ್ಮಿಸುವತ್ತ ಪ್ರಯತ್ನಿಸಬೇಕು ಎಂದರು.

ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಆಧ್ಯಾತ್ಮಿಕ ನಿರ್ದೇಶಕ ವಂ|ಫರ್ಡಿನಾಂಡ್ ಗೊನ್ಸಾಲ್ವಿಸ್ ಮಾತನಾಡಿ ಪ್ರತಿಯೊಬ್ಬರು ಸಮಾಜದಲ್ಲಿ ಪರಸ್ಪರ ಸೇತುವೆಗಳನ್ನು ಕಟ್ಟುವ ಕೆಲಸವನ್ನು ಮಾಡುವುದರೊಂದಿಗೆ ಸಮಾಜದಲ್ಲಿ ಪ್ರತಿಯೊಬ್ಬರು ಅಭಿವೃದ್ಧಿ ಹೊಂದಬೇಕು ಎನ್ನುವ ಸಕಾರತ್ಮಕ ಧೋರಣೆಯನ್ನು ಹೊಂದಿದಾಗಿ ಸೌಹಾರ್ದಯುತ ಸಮಾಜ ನಿರ್ಮಾಣ ಸಾಧ್ಯ ಎಂದರು.

ಸಮ್ಮೇಳನಕ್ಕೆ ಸುಮಾರು 3000 ಕೆಥೊಲಿಕ್ ಬಂಧುಗಳು ಭಾಗವಹಿಸುವ ನಿರೀಕ್ಷೆಯಿದ್ದು ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವಾ, ಉದ್ಘಾಟನೆಗೆ ಆಗಮಿಸಲಿದ್ದು ಸಮಾರೋಪದಲ್ಲಿ ಬೆಂಗಳೂರು ಮಹಾ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ವಂ|ಪೀಟರ್ ಮಚಾದೊ, ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ, ಮಹರಾಷ್ಟ್ರದ ಹಿರಿಯ ಕಾಂಗ್ರೆಸ್ ನಾಯಕಿ ಜೆನೆಟ್ ಡಿಸೋಜಾ ಹಾಗೂ ಇತರ ವಿವಿಧ ನಾಯಕರು ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ 6 ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ, ಹಾಗೂ ಜೀವಮಾನ ವಿಶೇಷ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಗುವುದು.

ಕಾರ್ಯಕ್ರಮದಲ್ಲಿ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಅಧ್ಯಕ್ಷರಾದ ಆಲ್ವಿನ್ ಕ್ವಾಡ್ರಸ್, ಕಾರ್ಯದರ್ಶಿ ಸಂತೋಷ್ ಕರ್ನೆಲಿಯೋ, ಸಮ್ಮೇಳನದ ಸಂಚಾಲಕರಾದ ಎಲ್ ರೋಯ್ ಕಿರಣ್ ಕ್ರಾಸ್ತಾ, ನಿಕಟಪೂರ್ವ ಅಧ್ಯಕ್ಷರಾದ ವಲೇರಿಯನ್ ಫೆರ್ನಾಂಡಿಸ್, ಮಾಜಿ ಅಧ್ಯಕ್ಷರಾದ ಆಲ್ಫೋನ್ಸ್ ಡಿಕೋಸ್ತಾ, ವಾಲ್ಟರ್ ಸಿರಿಲ್ ಪಿಂಟೊ ಉಪಸ್ಥಿತರಿದ್ದರು. ಆಲ್ವಿನ್ ಕ್ವಾಡ್ರಸ್ ಸ್ವಾಗತಿಸಿ, ‘ಸಮುದಾಯೋತ್ಸವ್-2020’ ಸಮಿತಿಯ ಕಾರ್ಯದರ್ಶಿ ಮೇರಿ ಡಿಸೋಜಾ ವಂದಿಸಿದರು.

Comments are closed.