ಕರಾವಳಿ

ನಾಲ್ಕೇ ವರ್ಷಕ್ಕೆ ಸೋರುತ್ತಿರುವ ಮಿನಿವಿಧಾನಸೌಧ: ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಆಗ್ರಹ

Pinterest LinkedIn Tumblr

ಕುಂದಾಪುರ: ಒಳ ಚರಂಡಿ ಯೋಜನೆಯ ಕಾಮಗಾರಿಯಿಂದಾದ ಅವ್ಯವಸ್ಥೆಗೆ ಅಸಮಧಾನ. ಇಲಾಖಾ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕರೆಂಟ್ ಸರಿಯಾಗಿ ದೊರಕುತ್ತಿಲ್ಲ ಎನ್ನುವ ದೂರು. ಹೆದ್ದಾರಿ ಇಲಾಖೆಯ ನಿರ್ಲಿಪ್ತ ಧೋರಣೆಗೆ ಆಕ್ರೋಶ. 94ಸಿ ಅರ್ಜಿ ವಿಲೆವಾರಿಗಾಗಿ ಮನವಿ ಹಾಳಾಗಿರುವ ರಸ್ತೆ ದುರಸ್ತಿಗೆ ಒತ್ತಾಯ. ಬಸ್ ನಿಲ್ದಾಣದ ಸಮಸ್ಯೆ ಪರಿಹಾರಕ್ಕೆ ಆಗ್ರಹ. ಮಿನಿ ವಿಧಾನಸೌಧದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಒತ್ತಾಯ ಸೇರಿದಂತೆ ಪುರಸಭೆಯ ಹಲವು ಸಮಸ್ಯೆಗಳ ಕುರಿತು ಮಂಗಳವಾರ ಸಂಜೆ ಪುರಸಭೆಯ ಡಾ.ವಿ.ಎಸ್.ಆಚಾರ್ಯ ಸಭಾಭವನದಲ್ಲಿ ನಡೆದ ಪುರಸಭಾ ಸದಸ್ಯರ ಹಾಗೂ ಸಾರ್ವಜನಿಕರ ಕುಂದು ಕೊರತೆಗಳ ಸಭೆಯಲ್ಲಿ ವಿಚಾರ ಪ್ರಸ್ತಾಪವಾಯಿತು.

ಪುರಸಭೆಯಲ್ಲಿ ನಡೆಯುತ್ತಿರುವ ಒಳ ಚರಂಡಿ ಯೋಜನೆಯ ಕಾಮಗಾರಿಯಿಂದಾಗಿ ಪುರಜನರಿಗೆ ಆಗುತ್ತಿರುವ ತೊಂದರೆಗಳ ಕುರಿತು ಮಾತನಾಡಿದ ನೂತನ ಪುರಸಭಾ ಸದಸ್ಯರು ಹಾಗೂ ಸಾರ್ವಜನಿಕರು ಕಾಮಗಾರಿಯಿಂದಾಗುತ್ತಿರುವ ಅತಂತ್ರಗಳನ್ನು ಸರಿಪಡಿಸುವಂತೆ ಒತ್ತಾಯಿಸಿದರು. ಕೋಡಿಯಲ್ಲಿ ಪೈಪ್ ಲೈನ್‌ಗಾಗಿ ತೋಡಿರುವ ಗುಂಡಿಗಳಿಂದಾಗಿ ಜನರಿಗೆ ತೊಂದರೆಯಾಗುತ್ತಿದೆ ಎಂದ ಹೇಳಿದ ನೂತನ ಸದಸ್ಯ ಅಶ್ಫಾಕ್ ಸಮಸ್ಯೆ ಪರಿಹಾರವಾಗದಿದ್ದರೆ ಜನ ನಮ್ಮನ್ನು ಕೇಳುತ್ತಾರೆ ಅವರಿಗೆ ಏನು ಉತ್ತರ ಕೊಡುವುದು ಎಂದರು. ಕಾಮಗಾರಿಯ ಅಸಮರ್ಪಕ ನಿರ್ವಹಣೆಯಿಂದಾಗಿ ಇಂಟರ್‌ಲಾಕ್‌ಗಳು ಕುಲಗೆಟ್ಟು ಹೋಗಿದೆ. ಕೆಲವು ರಸ್ತೆಗಳಲ್ಲಿ ಸಂಚಾರಕ್ಕೂ ತೊಡಕು ಉಂಟಾಗಿದೆ ಎಂದು ಮಾಜಿ ಸದಸ್ಯ ಕೋಡಿ ಪ್ರಭಾಕರ ದೂರಿದರು. ಸರ್ಕಾರಿ ಆಸ್ಪತ್ರೆ ವಾರ್ಡಿನಲ್ಲಿ ಒಳಚರಂಡಿ ಯೋಜನೆಯ ಯಾವುದೆ ಕಾಮಗಾರಿಗಳು ಇನ್ನೂ ಪ್ರಾರಂಭವಾಗಿಲ್ಲ ಎಂದು ಮಾಜಿ ಅಧ್ಯಕ್ಷೆ ದೇವಕಿ ಪಿ ಸಣ್ಣಯ್ಯ ಗಮನ ಸೆಳೆದರು.

ಪ್ರತಿ ಮಳೆಗಾಲದಲ್ಲಿಯೂ ಮಿನಿ ವಿಧಾನಸೌಧ ಸೋರುತ್ತಿದೆ. ಇದರಿಂದಾಗಿ ಇಲ್ಲಿರುವ ಅಮೂಲ್ಯ ದಾಖಲೆಗಳಿಗೆ ಅಪಾಯ ಉಂಟಾಗುವ ಸಾಧ್ಯತೆ ಇದೆ. ಕಳಪೆ ಕಾಮಗಾರಿ ಮಾಡಿರುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ದಸಂಸ (ಭೀಮ ಘರ್ಜನೆ) ಯ ವಿಜಯ್ ಒತ್ತಾಯಿಸಿದರು. ಈ ವಿಚಾರದ ಕುರಿತು ಸಂಬಂಧಪಟ್ಟ ಇಲಾಖೆಗೆ ಸಲಹೆ ನೀಡುವುದಾಗಿ ಉಪವಿಭಾಗಾಧಿಕಾರಿ ತಿಳಿಸಿದರು. ಸಭೆಯ ಬಹುಪಾಲು ರಾಷ್ಟ್ರೀಯ ಹೆದ್ದಾರಿಯ ಅತಂತ್ರಗಳಿಗೆ ಮೀಸಲಾಗಿತ್ತು. ಹೆದ್ದಾರಿಯಲ್ಲಿ ನಿರ್ಮಾಣವಾಗುತ್ತಿರುವ ಕೃತಕ ಸರೋವರ. ಚರಂಡಿಗಳ ಅವ್ಯವಸ್ಥೆ. ಅರ್ಧಕ್ಕೆ ನಿಂತಿರುವ ಫ್ಲೈ ಓವರ್, ಅಂಬ್ಯಾಕ್‌ಮೆಂಟ್ ಮುಂತಾದ ವಿಚಾರಗಳ ಕುರಿತು ಕೆಂಚನೂರು ಸೋಮಶೇಖರ ಶೆಟ್ಟಿ, ದೇವಕಿ ಸಣ್ಣಯ್ಯ, ಶ್ರೀಧರ ಶೇರುಗಾರ ಮುಂತಾದವರು ಪ್ರಶ್ನೆಗಳನ್ನು ಕೇಳಿದರು.

ಸಭೆಯಲ್ಲಿ ಪ್ರಸ್ತಾಪವಾದ ವಿಚಾರಗಳಿಗೆ ಸ್ಪಂದಿಸಿ ಮಾತನಾಡಿದ ಉಪವಿಭಾಗಾಧಿಕಾರಿಯವರು ಕೋಡಿಯಲ್ಲಿನ ಗುಂಡಿಗಳನ್ನು ಶೀಘ್ರ ಮುಚ್ಚಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇಂಟರ್‌ಲಾಕ್ ಹಾಗೂ ರಸ್ತೆಯ ಇತರ ಸಮಸ್ಯೆಗಳ ಕುರಿತು ಸಾರ್ವಜನಿಕರಿಂದಲೂ ದೂರು ಬರುತ್ತಿದೆ, ಹಗಲು ವೇಳೆಯಲ್ಲಿ ಸಂಚಾರಕ್ಕೆ ತೊಂದರೆಯಾಗುವುದರಿಂದ ರಾತ್ರಿ ವೇಳೆಯಲ್ಲಿ ಕಾಮಗಾರಿ ನಡೆಸುವಂತೆ ಸೂಚಿಸಲಾಗಿದೆ. ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಲು ಹೇಳಲಾಗಿದೆ. ಯೋಜನೆಯ ಕುರಿತು ಯೋಜನಾಧಿಕಾರಿಗಳ ಸಮಾಲೋಚನೆ ನಡೆಸಲಾಗುವುದು. ಪುರಸಭೆಯ ಇಂಜಿನಿಯರ್ ಈ ಕಾಮಗಾರಿಗಳ ಪರಿಶೀಲನೆ ನಡೆಸಲಿ ಎಂದು ಹೇಳಿದರು. ಯೋಜನೆಯ ಕುರಿತು ಮಾತನಾಡಿದ ಗುತ್ತಿಗೆ ಕಂಪೆನಿ ಅಧಿಕಾರಿ ಮೂಲ ಯೋಜನೆಯಲ್ಲಿ ಸರ್ಕಾರಿ ಆಸ್ಪತ್ರೆ ವಾರ್ಡ್ ಸೇರಿಲ್ಲ ಎಂದು ಸ್ವಷ್ಟ ಪಡಿಸಿದರು.

ಮೆಸ್ಕಾಂ ಕಾರ್ಯನಿರ್ವಹಣೆಯ ಕುರಿತು ಅಸಮಧಾನ ತೋಡಿಕೊಂಡ ಅಶ್ಫಾಕ್ ಕೋಡಿಯಲ್ಲಿ ವೋಲ್ಟೇಜ್ ಸಮಸ್ಯೆ ಇರುವುದನ್ನು ಹೇಳಿದರು. ಖಾರ್ವಿಕೇರಿಯಲ್ಲಿ ವಿದ್ಯುತ್ ಕಣ್ಣು ಮುಚ್ಚಾಲೆಯಾಟವನ್ನು ಮಾಡುತ್ತಿದೆ ಎಂದು ಹೇಳಿದ ಸದಸ್ಯ ಚಂದ್ರಶೇಖರ ಖಾರ್ವಿ ಬೇರೆ ಕಡೆ ವಿದ್ಯುತ್ ಇದ್ದರೂ, ನಮ್ಮಲ್ಲಿ ಮಾತ್ರ ಕರೆಂಟ್ ಇರೋದಿಲ್ಲ, ಮೆಸ್ಕಾಂ ಕಚೇರಿಗೆ ಮಾತನಾಡಿದರೆ ಸೌಜನ್ಯವಾಗಿ ಮಾತನಾಡೋದು ಇಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಮದ್ದುಗುಡ್ಡೆಯಲ್ಲಿ ಕರೆಂಟ್ ಸಮಸ್ಯೆ ಇದೆ ಎಂದು ಕುಮಾರ ಖಾರ್ವಿ ಗಮನ ಸೆಳೆದರು.

ಮೆಸ್ಕಾಂ ಸಮಸ್ಯೆಗಳಿಗೆ ಉತ್ತರಿಸಿದ ಅಧಿಕಾರಿ ರಾಘವೇಂದ್ರ ಅವರು ಕೋಡಿಯಲ್ಲಿ ಇದ್ದ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದೆ. ಹೊಸ ವಯರ್‌ಗಳನ್ನು ಹಾಕಲು ಪ್ರಾಸ್ತಾವನೆ ಕಳುಹಿಸಲಾಗಿದೆ. ವಯರ್ ಬದಲಾವಣೆಯಾದಾಗ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ. ಫೀಡರ್ ಸಮಸ್ಯೆಯಿಂದಾಗಿ ಖಾರ್ವಿಕೇರಿ ಹಾಗೂ ಮದ್ದುಗುಡ್ಡೆಯಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಸಮಜಾಯಿಕೆ ನೀಡಿದರು. ಇದಕ್ಕೆ ಪೂರಕವಾಗಿ ಮಾತನಾಡಿದ ಉಪವಿಭಾಗಾಧಿಕಾರಿಗಳು ಜನರೊಂದಿಗೆ ಸೌಜನ್ಯವಾಗಿ ಮಾತನಾಡಬೇಕು ಉದ್ಧಟತನ ಸರಿಯಲ್ಲ ಎಂದರು.

ಸಭೆಯ ಬಹುಪಾಲು ರಾಷ್ಟ್ರೀಯ ಹೆದ್ದಾರಿಯ ಅತಂತ್ರಗಳಿಗೆ ಮೀಸಲಾಗಿತ್ತು. ಹೆದ್ದಾರಿಯಲ್ಲಿ ನಿರ್ಮಾಣವಾಗುತ್ತಿರುವ ಕೃತಕ ಸರೋವರ. ಚರಂಡಿಗಳ ಅವ್ಯವಸ್ಥೆ. ಅರ್ಧಕ್ಕೆ ನಿಂತಿರುವ ಫ್ಲೈ ಓವರ್, ಅಂಬ್ಯಾಕ್‌ಮೆಂಟ್ ಮುಂತಾದ ವಿಚಾರಗಳ ಕುರಿತು ಕೆಂಚನೂರು ಸೋಮಶೇಖರ ಶೆಟ್ಟಿ, ದೇವಕಿ ಸಣ್ಣಯ್ಯ, ಶ್ರೀಧರ ಶೇರುಗಾರ ಮುಂತಾದವರು ಪ್ರಶ್ನೆಗಳನ್ನು ಕೇಳಿದರು.

ಹೆದ್ದಾರಿಯ ಇಲಾಖೆಯ ಅಧಿಕಾರಿಗಳ ಹಾಗೂ ಗುತ್ತಿಗೆ ಕಂಪೆನಿಯ ಅಧಿಕಾರಿಗಳ ನಿರ್ಲಿಪ್ತತೆಯ ಬಗ್ಗೆ ಖಾರವಾಗಿ ಮಾತನಾಡಿದ ಬಿ.ಕಿಶೋರ್‌ಕುಮಾರ, ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳಿಗಾಗಿ ಸೆಕ್ಷನ್ ೧೩೩ ಅಡಿಯಲ್ಲಿ ಪ್ರಕರಣ ದಾಖಲಾದಾಗ ಹಿಂದಿನ ಉಪವಿಭಾಗಾಧಿಕಾರಿಗಳಲ್ಲಿ ಎಪ್ರಿಲ್ ಹಾಗೂ ಮೇ ತಿಂಗಳಲ್ಲಿ ಫ್ಲೈ ಓವರ್ ಹಾಗೂ ಮೂರುಕೈ ಕಾಮಗಾರಿಯನ್ನು ಮುಗಿಸುವುದಾಗಿ ಭರವಸೆ ನೀಡಿದ್ದ ಕಂಪೆನಿ ತನ್ನ ಮಾತುಗಳನ್ನು ಉಳಿಸಿಕೊಂಡಿಲ್ಲ ಇದಕ್ಕೆ ಮುಂದಿನ ಕ್ರಮ ಏನು ? ಎಂದು ಪ್ರಶ್ನಿಸಿದರು. ಇದಕ್ಕೆ ಧ್ವನಿಗೂಡಿಸಿದ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ವಿಕಾಸ್ ಹೆಗ್ಡೆ ಅವರು ಸುಮ್ಮನೆ ಚರ್ಚೆ ಮಾಡುವುದರಿಂದ ಸಮಸ್ಯೆ ಪರಿಹಾರವಾಗೋದಿಲ್ಲ. ಕ್ರಿಮಿನಲ್ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಉಪವಿಭಾಗಾಧಿಕಾರಿಗಳು ಗುತ್ತಿಗೆ ಕಂಪೆನಿಯ ಅಧಿಕಾರಿಗಳನ್ನು ಕರೆದು ಚರ್ಚೆ ನಡೆಸುತ್ತೇನೆ. ಜಿಲ್ಲಾಧಿಕಾರಿಗಳ ಸಭೆಯಲ್ಲಿಯೂ ಸಮಸ್ಯೆಯ ಬಗ್ಗೆ ಮಾತನಾಡುತ್ತೇನೆ. ಹೆದ್ದಾರಿ ಕಾಮಗಾರಿಯಿಂದ ಉಂಟಾಗುತ್ತಿರುವ ನೀರಿನ ಹರಿಯುವಿಕೆಯ ಸಮಸ್ಯೆಗಳ ಕುರಿತು ಸ್ಥಳೀಯಾಡಳಿತದೊಂದಿಗೆ ಸಮಾಲೋಚನೆ ನಡೆಸುತ್ತೇನೆ. ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಕಾಮಗಾರಿ ವಿಳಂಭದ ಬಗ್ಗೆ ಅಗತ್ಯ ಬಿದ್ದರೆ ಕಠಿಣ ಕಾನೂನು ಕ್ರಮಕ್ಕೂ ಮುಂದಾಗುವುದಾಗಿ ಭರವಸೆ ವ್ಯಕ್ತಪಡಿಸಿದರು.

ಕೋಡಿಯಲ್ಲಿ ೯೪ಸಿ ಅಡಿಯಲ್ಲಿ ಸಲ್ಲಿಸಲಾದ ಅರ್ಜಿಗಳಿಗೆ ಸಿ‌ಆರ್‌ಝಡ್ ನೆಪಗಳನ್ನು ಹೇಳಿ ಅರ್ಜಿಯನ್ನು ತಿರಸ್ಕರಿಸಲಾಗುತ್ತಿದೆ. ಆದರೆ ವಾಸ್ತಾವವಾಗಿ ಇಲ್ಲಿ ಸಿ‌ಆರ್‌ಝಡ್ ಸಮಸ್ಯೆ ಇಲ್ಲ ಎಂದು ಬೊಟ್ಟು ಮಾಡಿದ ವಿಕಾಸ್ ಹೆಗ್ಡೆ, ಜನರಿಗೆ ಸಹಾಯವಾಗುವ ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಮನವಿ ಮಡಿದರು. ಇದಕ್ಕೆ ಪ್ರತಿ ಸ್ಪಂದಿಸಿದ ಉಪವಿಭಾಗಾಧಿಕಾರಿಗಳು, ಬಾಕಿ ಉಳಿದಿರುವ ಅರ್ಜಿ ವಿಲೆವಾರಿಗೆ ವಿಶೇಷ ಸಿಬ್ಬಂದಿಯ ನಿಯೋಜನೆ ಮಾಡಲಾಗುವುದು. ಸಿ‌ಆರ್‌ಝಡ್ ಸಮಸ್ಯೆ ಪರಿಹಾರಕ್ಕೆ ಸಂಬಂಧಪಟ್ಟ ಇಲಾಖೆಯೊಂದಿಗೆ ಮಾತುಕತೆ ನಡೆಸಲಾಗುವುದು. ತಿರಸ್ಕಾರಗೊಂಡಿರುವ ಅರ್ಜಿಗಳಿಗೆ ಸಕಾರಣಗಳನ್ನು ನೀಡಿ ತಮಗೆ ಮೇಲ್ಮನವಿ ಸಲ್ಲಿಸಿದ್ದಲ್ಲಿ ಕಾನೂನು ಚೌಕಟ್ಟಿನಲ್ಲಿ ಜನರಿಗೆ ಸಹಾಯ ಮಾಡುವುದಾಗಿ ಹೇಳಿದರು

ವಸಂತಿ ಸಾರಂಗ್, ಅಬ್ಬು ಮಹಮ್ಮದ್, ಪ್ರಭಾಕರ, ಸಂತೋಷ್ ಶೆಟ್ಟಿ, ಅಶ್ವೀನಿ ಪ್ರದೀಪ್, ಗಿರೀಶ್, ಶೇಖರ, ಕಮಲಾ, ಸಂದೀಪ ಖಾರ್ವಿ, ಪ್ರಭಾವತಿ ಶೆಟ್ಟಿ, ಕೇಶವ ಭಟ್, ರಾಜೀವ್ ಕೋಟ್ಯಾನ್, ಕಿಶನ್‌ರಾಜ್ ಶೆಟ್ಟಿ ಇದ್ದರು.

ಉಪವಿಭಾಗಾಧಿಕಾರಿ ಡಾ.ಎಸ್.ಎಸ್.ಮಧುಕೇಶ್ವರ ಅಧ್ಯಕ್ಷತೆ ವಹಿಸಿದ್ದರು. ಪುರಸಭಾ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ. ಇದ್ದರು.

Comments are closed.