ಕರಾವಳಿ

ಮೇ.11: ಬಾಲ್ಯೊಟ್ಟು ಗುತ್ತು ಸಾಧಕರಿಗೆ ಸಮ್ಮಾನ – ಡಾ.ಎ.ಕೆ.ರೈ ಮತ್ತು ಭಾಸ್ಕರ ರೈ ಕುಕ್ಕುವಳ್ಳಿ ಅವರಿಗೆ ಗುತ್ತಿನ ಗೌರವ

Pinterest LinkedIn Tumblr

ಮಂಗಳೂರು : ಪುತ್ತೂರು ತಾಲ್ಲೂಕು ಇರ್ದೆ ಗ್ರಾಮದ ಪ್ರತಿಷ್ಠಿತ ಬಾಲ್ಯೊಟ್ಟು ಗುತ್ತು ಮನೆತನದ ಈರ್ವರು ಸಾಧಕರಿಗೆ ಮೇ.11, 2019 ರಂದು ಶನಿವಾರ ಹುಟ್ಟೂರ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿದೆ. ಪುತ್ತೂರಿನ ಖ್ಯಾತ ವೈದ್ಯ ಡಾ.ಎ.ಕೆ.ರೈ ಮತ್ತು ಶಿಕ್ಷಣ, ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗದ ಸಾಧಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರಿಗೆ ಬಾಲ್ಯೊಟ್ಟು ಗುತ್ತು ‘ಸಾಂಗತ್ಯ’ದಲ್ಲಿ ಗಣ್ಯರ ಸಮ್ಮುಖ ವಿಶೇಷ ಗುತ್ತಿನ ಗೌರವವನ್ನು ಪ್ರದಾನ ಮಾಡಲಾಗುವುದು.

ಡಾ.ಎ.ಕೆ.ರೈ :

ಕೀರ್ತಿಶೇಷ ಬಾಲ್ಯೊಟ್ಟು ಗುತ್ತು ಶೇಷಪ್ಪ ರೈಯವರ ಪುತ್ರ ಹೊಸಮನೆ ಡಾ.ಎ.ಕೆ.ರೈ ಕಳೆದ ನಾಲ್ಕು ದಶಕಗಳಿಂದ ಪುತ್ತೂರಿನಲ್ಲಿ ವೈದ್ಯಕೀಯ ವೃತ್ತಿನಿರತರಾಗಿದ್ದಾರೆ. ನಗರದ ಪ್ರಮುಖ ಆಸ್ಪತ್ರೆಗಳಲ್ಲಿ ನುರಿತ ವೈದ್ಯಾಧಿಕಾರಿಯಾಗಿ ನೂರಾರು ರೋಗಿಗಳ ಶುಶ್ರೂಷೆ ಹಾಗೂ ತುರ್ತು ಶಸ್ತ್ರ ಚಿಕಿತ್ಸೆಗಳನ್ನು ನಡೆಸಿದ ಕೀರ್ತಿ ಅವರದು. ವೈದ್ಯ ವೃತ್ತಿಯೊಂದಿಗೆ ವಿವಿಧ ಸಮಾಜ ಸೇವಾ ಕಾರ್ಯಗಳಲ್ಲೂ ನಿರತರಾಗಿರುವ ಡಾ.ರೈ ಪುತ್ತೂರಿನಲ್ಲಿ ಸ್ವಂತ ಚಿಕಿತ್ಸಾಲಯವನ್ನು ಹೊಂದಿದ್ದು ‘ಜನಸಾಮಾನ್ಯರ ಡಾಕ್ಟರ್’ ಎಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಭಾಸ್ಕರ ರೈ ಕುಕ್ಕುವಳ್ಳಿ:

ಬಾಲ್ಯೊಟ್ಟು ಗುತ್ತು ಯಜಮಾನ ದಿ.ಬಿ.ಕೆ.ದೇವಣ್ಣ ರೈಯವರ ಸೋದರಳಿಯ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ದಿ.ಕಲ್ಲಡ್ಕ ಕರಿಯಪ್ಪ ರೈ ಮತ್ತು ಗಿರಿಜಾ ರೈ ಕುಕ್ಕುವಳ್ಳಿ ದಂಪತಿಯ ಸುಪುತ್ರ.

ಮಂಗಳೂರಿನಲ್ಲಿ ಕಾಲೇಜು ಉಪನ್ಯಾಸಕರಾಗಿ, ಕನ್ನಡ-ತುಳು ಕವಿ ಸಾಹಿತಿಯಾಗಿ ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯರಾಗಿರುವ ಅವರು ಯಕ್ಷಗಾನ ಅರ್ಥಧಾರಿ ಮತ್ತು ಪ್ರವಚನಕಾರರಾಗಿ ಪ್ರಸಿದ್ಧರು. ಶಿಕ್ಷಣ ಸಂಪನ್ಮೂಲ ವ್ಯಕ್ತಿಯಾಗಿ, ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯರಾಗಿ, ಆಕಾಶವಾಣಿ ಮತ್ತು ದೂರದರ್ಶನ ಕಲಾವಿದರಾಗಿ ಹಲವು ಆಯಾಮಗಳಲ್ಲಿ ದುಡಿದವರು.

ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಹಾಗೂ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸಂಪರ್ಕ, ಮದಿಪು, ಸದಾಶಯ ಮೊದಲಾದ ಪತ್ರಿಕೆಗಳ ಸಂಪಾದಕರಾಗಿರುವುದರೊಂದಿಗೆ ಕೆಲವು ಕೃತಿಗಳನ್ನು ರಚಿಸಿ ಪ್ರಕಟಿಸಿದ್ದಾರೆ. ದೇಶ ವಿದೇಶಗಳಲ್ಲಿ ಸನ್ಮಾನಿತರಾಗಿರುವುದಲ್ಲದೆ ಆರ್ಯಭಟ, ಯಕ್ಷರಕ್ಷಾ, ಜಿಲ್ಲಾ ರಾಜ್ಯೋತ್ಸವ, ಬಂಟ ವಿಭೂಷಣ, ವಿದ್ಯಾರತ್ನ, ತುಳುನಾಡ ಜ್ಞಾನ ಸೂರ್ಯ,ಪೆರ್ಮೆದ ತುಳುವೆ .. ಇತ್ಯಾದಿ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ.

‘ ಸಾಂಗತ್ಯ’ ಗೃಹ ಪ್ರವೇಶದ ಸಂದರ್ಭದಲ್ಲಿ ಬಾಲ್ಯೊಟ್ಟು ಗುತ್ತು ಚಂದ್ರಶೇಖರ ರೈ ಅವರು ಸಂಯೋಜಿಸಿರುವ ಈ ಸನ್ಮಾನ ಸಮಾರಂಭ ದ ಅಂಗವಾಗಿ ‘ಮನ್ ಪಸಂದ್’ ಖ್ಯಾತಿಯ ಗಾಯಕ ನಿಶಾನ್ ರೈ ಮಠಂದಬೆಟ್ಟು, ಶ್ರೀನಿವಾಸ್ ಮತ್ತಿತರರಿಂದ ‘ಸಂಗೀತ ಸೌರಭ ‘ ಹಾಗೂ ‘ನೃತ್ಯ ವೈಭವ ‘ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

Comments are closed.