ಕರಾವಳಿ

ಕಾರ್ಮಿಕರ ದಾಖಲೆ ಬಳಸಿ ಕ್ರಿಮಿನಲ್‌ಗಳಿಗೆ ಸಿಮ್‌: ಉಡುಪಿ ಪೊಲೀಸರಿಗೆ ಕಾರ್ಮಿಕರಿಂದ ದೂರು

Pinterest LinkedIn Tumblr

ಉಡುಪಿ: ಉಡುಪಿಯ ಮೂವರು ಕೂಲಿ ಕಾರ್ಮಿಕರು ಸಿಮ್‌ ಕಾರ್ಡ್‌ ಪಡೆಯಲು ನೀಡಿದ ದಾಖಲೆಗಳನ್ನಿಟ್ಟುಕೊಂಡು ಬೆಂಗಳೂರಿನಲ್ಲಿ ವಿವಿಧ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳಿಗೆ ಸಿಮ್‌ ಕಾರ್ಡ್‌ ನೀಡಿರುವ ಪ್ರಕರಣದ ಬಗ್ಗೆ ಸದ್ಯ ಉಡುಪಿಯಲ್ಲಿ ದೂರು ದಾಖಲಾಗಿದೆ.

ಕೂಲಿ ಕಾರ್ಮಿಕರಾಗಿರುವ ಬಾದಾಮಿ ತಾಲೂಕು ಲಾಯದ ಗುಂಡಿಯ ಈಶ್ವರ್‌ ಆಚನೂರು (35), ಬೂದಿ ನಗಡದ ಸಂತೋಷ್‌ ನಕ್ಕರ್‌ಗುಂಡಿ (25) ಮತ್ತು ಹನುಮಂತ ಎತ್ತಿನಮನಿ (38) ಅವರು ಈ ಬಗ್ಗೆ ದೂರು ನೀಡಿದ್ದಾರೆ.

(ಸಾಂದರ್ಭಿಕ ಚಿತ್ರ)

ಉಡುಪಿಯಲ್ಲಿ ಕೂಲಿ ಕಾರ್ಮಿಕರಾಗಿದ್ದು, ಸುಮಾರು ಒಂದು ವರ್ಷದ ಹಿಂದೆ ಉಡುಪಿ ಸಿಟಿ ಬಸ್‌ ನಿಲ್ದಾಣದಲ್ಲಿ ವೊಡಾಫೋನ್‌ ಕಂಪೆನಿ ವತಿಯಿಂದ ಸಿಮ್‌ ಕಾರ್ಡ್‌ಗಳನ್ನು ಮಾರಾಟ ಮಾಡುತ್ತಿದ್ದಾಗ ನಮ್ಮ ಆಧಾರ್‌ ಕಾರ್ಡ್‌ ಮತ್ತು ಹೆಬ್ಬೆರಳಿನ ಗುರುತು ನೀಡಿ ಸಿಮ್‌ ಪಡೆದಿದ್ದೆವು. ಅದೇ ದಾಖಲೆಗಳನ್ನು ಬೆಂಗಳೂರು ನಗರದ ರಾಜರಾಜೇಶ್ವರಿ ನಗರ ಠಾಣೆಯಲ್ಲಿ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ ಕೂಡ ಸಿಮ್‌ ಕಾರ್ಡ್‌ ನೀಡಿ ಮೋಸ ಮಾಡಲಾಗಿದೆ ಎಂದು ಉಡುಪಿ ನಗರ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಕೂಲಿ ಕಾರ್ಮಿಕರ ದಾಖಲೆಗಳ ಆಧಾರದಲ್ಲಿ ಸಿಮ್‌ ಪಡೆದಿರುವ ಆರೋಪಿಗಳ ವಿರುದ್ಧ ಕೊಲೆ ಸಹಿತ ವಿವಿಧ ರೀತಿಯಾದ ಗಂಭೀರ ಪ್ರಕರಣಗಳಿವೆ. 25 ಆರ್ಮ್ಸ್‌ ಆ್ಯಕ್ಟ್‌ ಮತ್ತು 3 ಆಫ್‌ ಕೋಕಾ 2000 ಪ್ರಕರಣದಲ್ಲಿನ ಆರೋಪಿಗಳಾಗಿದ್ದಾರೆ. ಬೆಂಗಳೂರಿನ ಪೊಲೀಸರು ಸಿಮ್‌ ಕಾರ್ಡ್‌ ದಾಖಲೆಗಳ ಆಧಾರದಲ್ಲಿ ತನಿಖೆ ನಡೆಸುತ್ತಾ ಉಡುಪಿಯಲ್ಲಿದ್ದ ಕೂಲಿ ಕಾರ್ಮಿಕರನ್ನು ವಿಚಾರಿಸಿದಾಗ ಕಾರ್ಮಿಕರು ದಂಗಾಗಿದ್ದಾರೆ.

Comments are closed.