ಕರಾವಳಿ

ಕರ್ನಾಟಕಕ್ಕೆ ಇನ್ನೊಂದು ಹೆಸರೇ ರಾಜ್‍ಕುಮಾರ್: ಪ್ರದೀಪ್‍ಕುರ್ಡೇಕರ್

Pinterest LinkedIn Tumblr
ಉಡುಪಿ: ಕರ್ನಾಟಕಕ್ಕೆ ಇನ್ನೊಂದು ಹೆಸರೇ ರಾಜ್ ಕುಮಾರ್  ಅವರ ಪ್ರೌಢಿಮೆ , ಮೇರು ವ್ಯಕ್ತಿತ್ವ, ಅವರು ಬದುಕು ನಡೆಸಿದ  ರೀತಿ ಎಲ್ಲರಿಗೂ  ಮಾದರಿ ಎಂದು ಉಡುಪಿ ತಹಶೀಲ್ದಾರ್ ಪ್ರದೀಪ್‍ಕುರ್ಡೇಕರ್ ಹೇಳಿದರು.
ಅವರು ಬುಧವಾರ ಜಿಲ್ಲಾಡಳಿತ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ವಾರ್ತಾಇಲಾಖೆಯ ಸಭಾಂಗಣದಲ್ಲಿ ನಡೆದ ವರನಟ, ಪದ್ಮಭೂಷಣ ಡಾ.ರಾಜ್‍ಕುಮಾರ್ ಜಯಂತಿ ಆಚರಣೆಯ ಕಾರ್ಯಕ್ರಮದಲ್ಲಿ ಡಾ. ರಾಜ್‍ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಮನೆಮಂದಿ ಒಂದಾಗಿ ನೋಡಿ ಅನುಭವಿಸುವಂತಹ ಸದಭಿರುಚಿಯ, ಸಾಂಸಾರಿಕ ಚಿತ್ರಗಳಲ್ಲಿ ನಟಿಸಿದ ರಾಜ್ ಕುಮಾರ್ ಅವರ ಅಭಿನಯ ಮತ್ತು ಅವರು ನಿರ್ವಹಿಸಿದ ಪತ್ರಗಳು ಚಿರಸ್ಮರಣಿಯ, ಅವರ ನಟಿಸಿದ ಪೌರಾಣಿಕ ಮಾತ್ರಗಳು ನಿಜ ಎನ್ನುವಂತಿದ್ದವು, ಎಲ್ಲಾ ಬಗೆಯ ಪಾತ್ರದಲ್ಲೂ ನಟಿಸಿದ್ದ ಅವರು,  ನಾಡು, ನುಡಿಗಾಗಿ   ಕಾವೇರಿ, ಗೋಕಾಕ್ ಚಳವಳಿಯಲ್ಲೂ ಪಾಲ್ಗೊಂಡಿದ್ದರು ಎಂದು ನುಡಿದರು.
ಡಾ. ರಾಜ್ ಅವರ ಒಡನಾಡಿ,  ಹಿರಿಯ ಕಲಾವಿದ ದಯಾನಂದ ಶೆಟ್ಟಿ ಹೇರೂರು ಮಾತನಾಡಿ ಡಾ. ರಾಜ್‍ಕುಮಾರ್ ಅವರೊಂದಿಗೆ ಕಳೆದ ನೆನಪುಗಳನ್ನು ಹಂಚಿಕೊಂಡರು. ಉಡುಪಿಗೆ ಬೇಟಿ ನೀಡಿದಾಗ ತನ್ನನ್ನು ಹುಡುಕಿಸಿ, ಕರೆದು ಮಾತನಾಡಿದ ಬಗ್ಗೆ, ತನ್ನ ಮನೆ ನಿರ್ಮಾಣಕ್ಕೆ 10000 ರೂ ನೀಡಿದ ರಾಜ್ ರ ಕೊಡುಗೆಯನ್ನು ನೆನೆದರು.
ಸಿನಿ ಪತ್ರಕರ್ತ ಉದಯ ಕುಮಾರ್ ಪೈ ಮಾತನಾಡಿ, ಕನ್ನಡ ಚಿತ್ರ ಹೆಚ್ಚು ನಿರ್ಮಾಣವಾಗದ, ಕನ್ನಡ ಚಿತ್ರಗಳಿಗೆ ಥಿಯೇಟರ್ ಸಿಗದ ಕಾಲದಲ್ಲಿ ಹೊಟ್ಟೆಪಾಡಿಗಾಗಿ ರಂಗಭೂಮಿಯಿಂದ ಸಿನಿಮಾಕ್ಕೆ ಬಂದ ರಾಜ್‍ಕುಮಾರ್ ಕನ್ನಡ ಚಿತ್ರರಂಗಕ್ಕೆ ಹೊಸದಿಕ್ಕು ತೋರಿದ್ದಾರೆ.  ಆರ್ಥಿಕ ದಾರಿದ್ರ್ಯದ ನಡುವೆಯೂ ಸೃಜನಶೀಲತೆಯ ಕೊರತೆಯಿರದ ಹಿನ್ನೆಲೆಯಲ್ಲಿ ಅವಕಾಶ ಸಿಕ್ಕರೂ ಬೇರೆ ಭಾಷೆಯ ಸಿನಿಮಾಗೆ ಹೋಗದೆ ನಿರ್ಮಾಪಕರು ಕೊಟ್ಟಷ್ಟೇ ಸ್ವೀಕರಿಸಿದ ರಾಜ್,  ಕಷ್ಟಗಳನ್ನು ಬದಿಗೊತ್ತಿ,  ವೃತ್ತಿಪರತೆ, ಪ್ರಾಮಾಣಿಕತೆ ಮೆರೆದಿದ್ದು ತಂಡ ಸ್ಛೂರ್ತಿಯಿಂದ ಕೆಲಸ ಮಾಡಿದ್ದಾರೆ. ಎನ್‍ಟಿಆರ್, ಎಂಜಿಆರ್ ಸ್ನೇಹಿತರಾಗಿದ್ದರೂ ರಾಜಕೀಯದ ಪ್ರವೇಶದ ಬಗ್ಗೆ ಅವರಿಗೆ ಒಲವಿರಲಿಲ್ಲ ಎಂದು ಹೇಳಿದರು.
ಆಕಾಶವಾಣಿ ಕಲಾವಿದ ಗಣೇಶ್ ಗಂಗೊಳ್ಳಿ ಡಾ.ರಾಜ್‍ಕುಮಾರ್ ಚಿತ್ರದ ಹಾಡುಗಳನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರಗು ನೀಡಿದರು.
ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಶಾ ಸ್ವಾಗತಿಸಿದರು , ಪ್ರಕಾಶ್ ಸುವರ್ಣ ಕಟಪಾಡಿ ಕಾರ್ಯಕ್ರಮ ನಿರೂಪಿಸಿದರು.

Comments are closed.