ಕರಾವಳಿ

ಮತದಾನ ದಿನ ಎಚ್ಚರಿಕೆ ವಹಿಸಿಸಲು ಅಧಿಕಾರಿಗಳಿಗೆ ಎಚ್ಚರಿಸಿದ ಚುನಾವಣಾ ವೀಕ್ಷಕರು

Pinterest LinkedIn Tumblr

ಉಡುಪಿ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಏಪ್ರಿಲ್ 18 ರಂದು ನಡೆಯುವ ಮತದಾನದ ದಿನ , ಸೂಕ್ಷ್ಮ ಮತ್ತು ಸಮಸ್ಯಾತ್ಮಕ ಮತಗಟ್ಟೆಗಳಿರುವ ಕಡೆಗಳಲ್ಲಿ ಎಲ್ಲಾ ಸೆಕ್ಟರ್ ಅಧಿಕಾರಿಗಳು ಮತ್ತು ನೋಡೆಲ್ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುವಂತೆ ವೀಕ್ಷಕ ಕೃಷ್ಣ ಕುನಾಲ್ ತಿಳಿಸಿದ್ದಾರೆ.

ಅವರು ಭಾನುವಾರ, ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸೆಕ್ಟರ್ ಅಧಿಕಾರಿಗಳು ಹಾಗೂ ವಿವಿಧ ನೋಡಲ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಮತದಾನದ ದಿನ ಸೂಕ್ಷ್ಮ ಮತ್ತು ಸಮಸ್ಯಾತ್ಮಕ ಮತಗಟ್ಟೆಗಳಿರುವ ಕಡೆಗಳಲ್ಲಿ ಮಧ್ಯಾಹ್ನ 3 ರ ವರೆಗೂ ಮತದಾನ ಪ್ರಮಾಣ ಕಡಿಮೆಯಿದ್ದಲ್ಲಿ, ಈ ಭಾಗದ ಮತದಾರರನ್ನು ಯಾರಾದರೂ ಮತಕೇಂದ್ರಕ್ಕೆ ಬರದಂತೆ ತಡೆಯುತ್ತಿದ್ದರಾ ಎಂಬ ಕುರಿತು ಪರಿಶೀಲಿಸಿ, ಮತಗಟ್ಟೆಯಲ್ಲಿನ ಪಕ್ಷ/ಅಭ್ಯರ್ಥಿಗಳ ಏಜೆಂಟ್ ಮೊಬೈಲ್ ಬಳಸದ ಕುರಿತು , ಪದೆ ಪದೇ ಬದಲಾಗುವುದನ್ನು ನಿಯಂತ್ರಿಸಿ, ಮತಗಟ್ಟೆಯ 200 ಮೀ ಒಳಗೆ ಅನಧಿಕೃತವಾಗಿ ಪ್ರವೇಶಿಸುವವರ ವಿರುದ್ದ ಕೂಡಲೇ ಕ್ರಮ ಕೈಗೊಳ್ಳಿ ಎಂದು ಹೇಳಿದರು.

ಮತದಾನಕ್ಕೆ 48 ಗಂಟೆಗಳ ಮುಂಚೆ ಬಹಿರಂಗ ಪ್ರಚಾರ ಅಂತ್ಯಗೊಂಡು, ಅಭ್ಯರ್ಥಿಗಳು ಮನೆ ಮನೆ ಭೇಟಿ ನೀಡಲು ಅವಕಾಶವಿದ, ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರಿಗೆ ಆಮಿಷ ಒಡ್ಡುವ ಸಾದ್ಯತೆಗಳಿದ್ದು ಈ ಕುರಿತು ಜಾಗೃತರಾಗಿರಿ, ಅಲ್ಲದೇ ವಿವಿಧ ವಾಹನಗಳಿಗೆ ನೀಡಿರುವ ಅನುಮತಿ ಸಹ ಅಂದಿಗೆ ಮುಕ್ತಾಯವಾಗಲಿದ್ದು, ತದ ನಂತರ ಅನುಮತಿ ಪಡೆಯದ ವಾಹನಗಳ ವಿರುದ್ದ ಕ್ರಮ ಕೈಗೊಳ್ಳಿ, ಎಲ್ಲಾ ಸೆಕ್ಟರ್ ಅಧಿಕಾರಿಗಳು ಯಾವುದೇ ದೂರು ಬಂದ ಕೂಡಲೇ ಸಂಬಂದಪಟ್ಟ ತಂಡಗಳೊಂದಿಗೆ ತೆರಳಿ ಕ್ರಮ ಕೈಗೊಳ್ಳಬೇಕು ಎಂದು ಕೃಷ್ಣ ಕುನಾಲ್ ತಿಳಿಸಿದರು.

ಮತಗಟ್ಟೆಯ 100 ಮೀ ಒಳಗೆ ಮೊಬೈಲ್ ಬಳಕೆ ನಿಷೇಧಿಸಲಾಗಿದ್ದು, ಚುನಾವಣಾ ಕರ್ತವ್ಯದಲ್ಲಿರುವ ಸಿಬ್ಬಂದಿಗೆ ಮಾತ್ರ ಅನುಮತಿ ಇದೆ ಆದರೆ ಮತಗಟ್ಟೆ ಒಳಗೆ ಯಾರೂ ಮೊಬೈಲ್ ಬಳಸುವಂತಿಲ್ಲ, 1400 ಕ್ಕೂ ಅಧಿಕ ಮತದಾರರು ಇರುವ ಕಡೆ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದ ವೀಕ್ಷಕರು, ಸೆಕ್ಟರ್ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುವ ಮತಗಟ್ಟ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರಬೇಕು ಎಂದು ಹೇಳಿದರು.
ಚುನಾವಣಾ ಕರ್ತವ್ಯಕ್ಕೆ ತೆರಳುವ ಮಹಿಳಾ ಮತದಾರರಿಗೆ ಉಳಿಯಲು ಪ್ರತ್ಯೇಕ ಕೊಠಡಿ ಮತ್ತು ಶೌಚಾಲಯ ಮತ್ತು ಸ್ನಾನಕ್ಕೆ ಪ್ರತ್ಯೇಕ ವ್ಯವಸ್ಥೆ ಮಡುವಂತೆ ಕುನಾಲ್ ತಿಳಿಸಿದರು.

ಎಸ್ಪಿ ನಿಷಾ ಜೇಮ್ಸ್ ಮಾತನಾಡಿ, ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿರುವ ಪೊಲೀಸ್ ಸಿಬ್ಬಂದಿಗೆ ಅಗತ್ಯ ಸಾಮಗ್ರಿಗಳ ಕಿಟ್ ಮತ್ತು ಚುನಾವಣಾ ಕರ್ತವ್ಯದಲ್ಲಿ ನಿರ್ವಹಿಸಬೇಕಾದ ಜವಬ್ದಾರಿ ಕುರಿತು ಕೈಪಿಡಿಯನ್ನು ನೀಡಲು ಕ್ರಮ ಕೈಗೊಂಡಿದೆ, ಮತಗಟ್ಟೆಯ ಸಮೀಪ ನಡೆಯುವ ನೀತಿ ಸಂಹಿತೆ ಉಲ್ಲಂಘನೆ ಕುರಿತಂತೆ ತಕ್ಷಣ ಕಂಟ್ರೋಲ್ ರೂಂ ಗೆ ಮಾಹಿತಿ ನೀಡುವಂತೆ ಸೂಚಿಸದ ಅವರು, ಮತದಾನಕ್ಕೆ 48 ಗಂಟೆಗಳ ಕ್ಷೇತ್ರದ ಮತದಾರರಲ್ಲದವರನ್ನು ಹೊರ ಕಳಿಸಿ, ಈ ಬಗ್ಗೆ ಎಲ್ಲಾ ಹೋಟೆಲ್ ಮತ್ತು ಲಾಡ್ಜ್ ಗಳಲ್ಲಿ ಪರಿಶೀಲಿಸಿ, ಮತಗಟ್ಟೆಗೆ ಬರುವ ವಾಹನದಲ್ಲಿ ಚಾಲಕ ಸೇರಿ 5 ಮಂದಿಗೆ ಮಾತ್ರ ಅವಕಾಶವಿದ್ದು, ಈ ಬಗ್ಗೆ ಪರಿಶೀಲಿಸುವಂತೆ ತಿಳಿಸಿದರು.

ಜಿಲ್ಲಾ ಚುನಾವಣಾದಿಕಾರಿ ಹಾಗೂ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಮಾತನಾಡಿ, ಮತಗಟ್ಟೆಯಿಂದ 200 ಮೀಟರ್ ಹೊರಗೆ ಮಾತ್ರ ಪಕ್ಷಗಳ ಬೂಥ್ ಹಾಕಿಕೊಳ್ಳಲು ಅವಕಾಶ ನೀಡಿ, ಮತಗಟ್ಟೆಗೆ ಪದೇ ಪದೇ ಒಂದೇ ವಾಹನದಲ್ಲಿ ಮತದಾರರು ಬರುತ್ತಿದ್ದರೆ ಈ ಬಗ್ಗೆ ಕ್ರಮ ಕೈಗೊಳ್ಳಿ, ವಾಹನಗಳ ದಾಖಲೆ ಪರಿಶೀಲಿಸಿ, ಮತದಾರರಿಗೆ ಉಚಿತ ಸೌಲಭ್ಯ ನೀಡದ ಬಗ್ಗೆ ಸಂಬಂದಪಟ್ಟ ಎಲ್ಲಾ ವಾಹನಗಳ ಸಂಘದ ಮುಖಂಡರಿಗೆ ಈಗಾಗಲೇ ಸೂಚನೆ ನೀಡಲಾಗಿದೆ, ಮಸ್ಟರಿಂಗ್ ಸಮಯದಲ್ಲಿ ಸಿಬ್ಬಂದಿಗಳು ಸರಿಯಾದ ಸಮಯಕ್ಕೆ ಹಾಜರಾಗಿ, ಮತದಾನದ ದಿನ ತಮ್ಮ ಕರ್ತರ್ವಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಿ, ಯಾವುದೇ ಗೊಂದಲಗಳಿಗೆ ಆಸ್ಪದವಾಗದಂತೆ ಸೆಕ್ಟರ್ ಅಧಿಕಾರಿಗಳು ಮೆಲ್ವಿಚಾರಣೆ ನಡೆಸಿ ಎಂದರು.

ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಕಾರ್ಕಳ ವಿಭಾಗದ ಎಎಸ್ಪಿ ಕೃಷ್ಣಕಾಂತ್, ಉಡುಪಿ ಎಎಸ್ಪಿ ಕುಮಾರ ಚಂದ್ರ ಉಪಸ್ಥಿತರಿದ್ದರು. ಜಿಲ್ಲಾ ಮಾಸ್ಟರ್ ಟ್ರೈನರ್ ಅಶೋಕ್ ಕಾಮತ್ ತರಬೇತಿ ನೀಡಿದರು.

Comments are closed.