ಕರಾವಳಿ

ಪೋಲಿಯೋ ಹನಿ ಪ್ರತಿಯೊಂದು ಮಗುವಿಗೂ ತಲುಪುವಲ್ಲಿ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಬೇಕು : ಗುರುಪ್ರಸಾದ್

Pinterest LinkedIn Tumblr

ಮಂಗಳೂರು ಜನವರಿ 16 : ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವು ಯಶಸ್ವಿಯಾಗಿ ಪೋಲಿಯೋ ಹನಿ ಪ್ರತಿಯೊಂದು ಮಗುವಿಗೂ ತಲುಪಲು ಎಲ್ಲಾ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಬೇಕು ಎಂದು ತಹಸೀಲ್ದಾರ್ ಗುರುಪ್ರಸಾದ್ ಹೇಳಿದರು.

ಇಂದು ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ, ತಹಸೀಲ್ದಾರ್‍ರವರ ಅಧ್ಯಕ್ಷತೆಯಲ್ಲಿ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ಟಿ.ಟಿಎಫ್ ಸಭೆ ನಡೆಯಿತು.

‘ಪಲ್ಸ್ ಪೋಲಿಯೋ ಮುಕ್ತ’ ಎಂದು ಘೋಷಣೆ ಮಾಡಿದ ಕಾರಣ ಈ ವರ್ಷ ಒಂದೇ ಸುತ್ತಿನಲ್ಲಿ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವು ನಡೆಯಲಿದೆ ಎಂದರು. ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಶೇಕಡಾ 100 ರಷ್ಟು ಯಶಸ್ವಿಗೊಳಿಸಬೇಕು ಎಂದರು.

ಲಸಿಕಾ ಕಾರ್ಯಕ್ರಮ ಸಂಪೂರ್ಣವಾಗಲು ಎಲ್ಲಾ ಇಲಾಖೆಯವರು ಸಹಕರಿಸಬೇಕು, ವಿಶೇಷವಾಗಿ ಮೆಸ್ಕಾಂ ಇಲಾಖೆ, ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಣ ಇಲಾಖೆಯವರು ತಂತಮ್ಮ ಹೊಣೆಗಾರಿಕೆಯನ್ನು ಮೀಸಲಿಡಬೇಕು ಎಂದು ಹೇಳಿದರು.

ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಗಳು ಗ್ರಾಮೀಣ ಪ್ರದೇಶದಲ್ಲಿ ಫೆಬ್ರವರಿ 3 ರಿಂದ 5 ರತನಕ ಹಾಗೂ ನಗರ ಪ್ರದೇಶದಲ್ಲಿ ಫೆಬ್ರವರಿ 3 ರಿಂದ 6 ರತನಕ ನಡೆಯಲಿದೆ.

ತಾಲೂಕು ಆರೋಗ್ಯ ಅಧಿಕಾರಿಯವರು ರಾಷ್ಟ್ರೀಯ ಬಾಲ್ಯ ಸ್ವಾಸ್ತ್ಯ ಕಾರ್ಯಕ್ರಮದ ಕುರಿತು ವಿವರಿಸಿ, ಹುಟ್ಟಿನಿಂದ ಬರುವ ನ್ಯೂನ್ಯತೆಗಳಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ನಡೆಸಲಾಗುವುದು ಈ ಯೋಜನೆಡಿಯಲ್ಲಿ ಈವರೆಗೆ 554 ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಈ ಶಸ್ತ್ರ ಚಿಕಿತ್ಸೆಯ ಪ್ರಯೋಜನ ಪಡೆಯಲು ಇಚ್ಛಿಸುವವರು ಅಂಗನವಾಡಿಕೇಂದ್ರವನ್ನು ಸಂಪರ್ಕಿಸಬೇಕಾಗಿ ತಿಳಿಸಿದರು.

ತಂಬಾಕು ನಿಯಂತ್ರಣ ಕಾನೂನು ಕೋಟ್ಪಾ-2003ರ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ನಿಷೇಧವಾಗಿದೆ. ಧೂಮಪಾನ ಮಾಡುವುದು ಕಂಡುಬಂದಲ್ಲಿ ಪೊಲೀಸ್ ಠಾಣೆಗೆ ದೂರು ನೀಡಿ ದಂಡ ವಿಧಿಸಲಾಗುವುದು, ಶಿಕ್ಷಣ ಸಂಸ್ಥೆಗಳಿಂದ 100 ಮೀಟರ್ ಒಳಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ನಿಷೇಧಿಸಲಾಗಿದೆ. ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಮಾಲಿಕರು 60.45 ಸೆಂ.ಮೀ ನಾಮಫಲಕವನ್ನು ಪ್ರದರ್ಶನ ಮಾಡಬೇಕು ಎಂದು ಹೇಳಿದರು. ಎಲ್ಲಾ ಇಲಾಖಾ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Comments are closed.