ಕರಾವಳಿ

ಕಾಲೇಜ್ ಕ್ಯಾಂಪಸ್‌ನಲ್ಲೇ ವಿದ್ಯಾರ್ಥಿಗೆ ಮನಸ್ಸೋಇಚ್ಚೆ ಚೂರಿ ಇರಿದು ಪರಾರಿಯಾದ ‘ಯಮ’!

Pinterest LinkedIn Tumblr

ಕುಂದಾಪುರ: ಕಾಲೇಜ್ ಕ್ಯಾಂಪಸ್‌ನಲ್ಲೇ ವಿದ್ಯಾರ್ಥಿಯೊಬ್ಬನಿಗೆ ಅದೇ ಕಾಲೇಜಿನ ಟಪೋರಿ ಹಳೆ ವಿದ್ಯಾರ್ಥಿಯೋರ್ವ ಮನಸೋಇಚ್ಚೆ ಚೂರಿ ಇರಿದು ಪರಾರಿಯಾದ ಘಟನೆ ಕುಂದಾಪುರ ಜ್ಯೂನಿಯರ್ ಕಾಲೇಜು ಆವರಣದಲ್ಲಿ‌ ಗುರುವಾರ ನಡೆದಿದೆ.

ಅದೇ ಕಾಲೇಜಿನ‌ ದ್ವಿತೀಯ ಆರ್ಟ್ಸ್ ವಿಭಾಗದ ವಿದ್ಯಾರ್ಥಿ ಉಪ್ಪಿನಕುದ್ರು ಮೂಲದ ಅನುಪ್ ಶೇರಿಗಾರ್(17) ಚೂರಿ ಇರಿತಕ್ಕೊಳಗಗಾಗಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿ‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಸಹಪಾಠಿಗೆ ಹೊಡೆಯಲು ಡೀಲ್ ಕೊಟ್ಟರು?
ಕಳೆದ ಕೆಲ ದಿನಗಳ ಹಿಂದೆ ಕ್ಷುಲ್ಲಕ ಕಾರಣವೊಂದಕ್ಕೆ ಅನುಪ್ ಹಾಗೂ ಅದೇ ಕಾಲೇಜಿನ ಇನ್ನೊಂದಷ್ಟು ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿತ್ತು. ಈ ಗಲಾಟೆ ದ್ವೇಷವಿಟ್ಟುಕೊಂಡಿದ್ದ ಆ ವಿದ್ಯಾರ್ಥಿಗಳ ಗುಂಪು ಅನುಪನನ್ನು‌ ಹೊಡೆಯಲು ಕಾಲೇಜಿನ ಹಳೆ ವಿದ್ಯಾರ್ಥಿ ಮಿಥುನ್ ಅಲಿಯಾಸ್ ಯಮ ಯಾನೆ ಯಮನೂರು ಎಂಬಾತನಿಗೆ ಡೀಲ್ ಕೊಟ್ಟಿದ್ದರು. ಈ ವಿಚಾರಕ್ಕೆ ಎಂಟ್ರಿಯಾದ ಮಿಥುನ್ ಇಂದು‌ಬೆಳಿಗ್ಗೆ ಕಾಲೇಜ್ ಆರಂಭದ ಸಂದರ್ಭ ಕ್ಯಾಂಪಸ್ ಗೆ ಬಂದು ಅಲ್ಲಿದ್ದ ಅನುಪನನ್ನು‌ ಕೆಳಕ್ಕೆ ಕೆಡವಿಕೊಂಡು ಚೂರಿಯಿಂದ ಕುತ್ತಿಗೆ, ಎದೆ, ಹೊಟ್ಟೆ ಸೇರಿದಂತೆ‌ ದೇಹದ ಐದು ಕಡೆಗೆ ಇರಿದು ಪರಾರಿಯಾಗಿದ್ದ.

ಕೂಡಲೇ ಅಲ್ಲಿದ್ದವರು ಅನುಪನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಆತನಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಸದ್ಯ ಅನುಪ್ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಪರಾರಿಯಾದ ಆರೋಪಿ ‌ಹುಡುಕಾಟಕ್ಕೆ ಪೊಲೀಸರು ಮುಂದಾಗಿದ್ದಾರೆ.

ಉಡುಪಿ ಜಿಲ್ಲಾ ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಕುಂದಾಪುರ ಪಿಎಸ್ಐ ಹರೀಶ್ ಆರ್. ನಾಯ್ಕ್, ಹಾಗೂ ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದು ಪ್ರಕರಣ ದಾಖಲಾಗಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.