ಕರಾವಳಿ

ಕಿರುಚಿತ್ರ ರಚನೆಯ ಹೊಸ ಪ್ರತಿಭೆಗಳ ಅನಾವರಣ; `ಸಂಭ್ರಮ ಅವಾರ್ಡ್ಸ್-2018′

Pinterest LinkedIn Tumblr

ಉಡುಪಿ: ಸಂಭ್ರಮ ಕಲ್ಚರಲ್ ಟ್ರಸ್ಟ್ (ರಿ) ಉಡುಪಿ ಅರ್ಪಿಸುವ ಸಂಭ್ರಮ ಕಿರುಚಿತ್ರಗಳ ಅವಾರ್ಡ್ ಕಾರ್ಯಕ್ರಮವು ಅದ್ಧೂರಿಯಾಗಿ ಮಣಿಪಾಲದ ಆರ್.ಎಸ್.ಬಿ ಸಭಾಭವನದಲ್ಲಿ ಇತ್ತೀಚೆಗೆ ನಡೆಯಿತು. ಕಿರುಚಿತ್ರಗಳನ್ನು ರಚಿಸುವ ಹೊಸ ಪ್ರತಿಭೆಗಳ ಅನಾವರಣ ಈ ಕಾರ್ಯಕ್ರಮವು ಹಲವಾರು ಚಲನಚಿತ್ರ ನಟ-ನಟಿಯರ, ದಿಗ್ಗಜರುಗಳ ಸಮಾಗಮದೊಂದಿಗೆ ವಿಶಿಷ್ಟ ರೀತಿಯಲ್ಲಿ ನಡೆಯಿತು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ಆರ್.ಎಸ್.ಬಿ ಸಂಘ ಮಣಿಪಾಲ ಇದರ ಗೌರವಾಧ್ಯಕ್ಷರಾದ ಗೋಕುಲ್‌ದಾಸ್ ನಾಯಕ್ ಇವರು ಮಾತನ್ನಾಡಿ ಕಿರುಚಿತ್ರಗಳ ತಯಾರಿಸುವ ಪ್ರತಿಭೆಗಳನ್ನು ಗುರಿತಿಸಿ ಅವರಿಗೊಂದು ಸುವರ್ಣಾವಕಾಶವನ್ನು ಮಾಡಿಕೊಟ್ಟ ನಮ್ಮದೇ ಸಂಭ್ರಮ ಕಾರ್ಯಕ್ರಮ ನೀಡಿದೆ ಈ ವಿಶಿಷ್ಟ ಕಾರ್ಯಕ್ರಮದ ಬಗ್ಗೆ ಪರಾಮರ್ಶಿಸಿ ಅದ್ಧೂರಿ ಕಾರ್ಯಕ್ರಮದ ಬಗ್ಗೆ ಹೆಮ್ಮೆಪಟ್ಟರು. ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಉಪೇಂದ್ರ ನಾಯಕ್, ಕಾರ್ಕಳ ಹಿರ್ಗಾನ ಆರ್.ಎಸ್.ಬಿ ಸಂಘದ ಅಧ್ಯಕ್ಷರಾದ ಅಶೋಕ್ ನಾಯಕ್ ಸಂಭ್ರಮ ಕಾರ್ಯಕ್ರಮದ ಆಯೋಜಕರಾದ ಸಂಭ್ರಮ ಕಲ್ಚರಲ್ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿಯಾದ ಭುವನೇಶ್ ಪ್ರಭು, ಅಧ್ಯಕ್ಷರಾದ ಸಂದೀಪ್ ಕಾಮತ್, ತಂಡದವರಾದ ಪ್ರವೀಣ್ ನಾಯಕ್, ಸುಹಾಸ್ ಶೆಣೈ, ಸುಕೇಶ್ ಕುಮಾರ್, ಖ್ಯಾತ ನಟರುಗಳಾದ ಪ್ರಕಾಶ್ ತುಮಿನಾಡ್, ದೀಪಕ್ ರೈ ಪಾಣಾಜೆ ಈ ಸಂದರ್ಭ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಹಾಜಿ. ಕೆ ಅಬೂಬಕ್ಕರ್, ನಿವೃತ್ತ ಯೋಧ ನಾರಾಯಣ ಕಾಮತ್ ಇವರನ್ನು ಸನ್ಮಾನಿಸಲಾಯಿತು.

ಚಲನಚಿತ್ರ ಕಲಾವಿದರು….
ಖ್ಯಾತ ಹಾಸ್ಯ ಕಲಾವಿದರಾದ ಅರವಿಂದ ಬೋಳಾರ್ ಅವರು ಮಾತನಾಡಿ ಕಲಾವಿದನಿಗೆ ಜನರ ಚಪ್ಪಾಳೆಗಿಂತ ದೊಡ್ಡ ಗೌರವ ಸನ್ಮಾನ ಇನ್ನೊಂದಿಲ್ಲ ಕಲಾವಿದನಾಗಿ ಜನರ ಪ್ರೀತಿಯನ್ನು ಗಳಿಸುವುದೇ ತನ್ನ ದೊಡ್ಡ ಆಸ್ತಿ ಎಂದರಲ್ಲದೇ, ತಾನು ನಟಿಸಿದ ಸಿನಿಮಾಗಳ ಡೈಲಾಗುಗಳನ್ನು ಹೇಳಿ ಚಪ್ಪಾಳೆ ಗಿಟ್ಟಿಸಿಕೊಂಡರು.

ಕೋಸ್ಟಲ್‌ವುಡ್ ಕಲಾವಿದರ ಮತ್ತು ತಂತ್ರಜ್ಞರ ಸಂಘದ ಅಧ್ಯಕ್ಷ ಪಮ್ಮಿ ಕೋಡಿಯಾಲ್‌ಬೈಲ್, ರಾಜೇಶ್ ಸ್ಕೈಲಾರ್ಕ್, ಮೋಹನ್‌ದಾಸ್ ರೈ ಭಾಗವಹಿಸಿ ಶುಭ ಹಾರೈಸಿದರು.

ಸಾಯಿ ಕೃಷ್ಣ ಕುಡ್ಲ ತನ್ನ ಕುರಿತು ತಿಳಿಸುತ್ತಾ ಕಿರುಚಿತ್ರಗಳಿಂದಾಗಿ ಬಹಳಷ್ಟು ಪ್ರತಿಭೆಗಳ ಪ್ರತಿಭೆ ಹೊರಬರುತ್ತದೆ ಎಂದರು ಈ ಸಂದರ್ಭ ಏರಾ ಉಲ್ಲೇರ್ ಗೇ ಚಿತ್ರ ನೋಡಿ ಪ್ರೋತ್ಸಾಹಿಸುವಂತೆ ಮನವಿಯನ್ನು ಮಾಡಿದರು.

ದೀಪಕ್ ರೈ ಪಾಣಾಜೆ, ಸುನಿಲ್ ನೆಲ್ಲಿಗುಡ್ಡೆ, ವಸಂತ್ ಮುನಿಯಾಲ್, ರೂಪಶ್ರೀ ವರ್ಕಾಡಿ, ಕನ್ನಡ ಹಾಗೂ ತುಳು ಚಿತ್ರದಲ್ಲಿ ನಟಿಸಿರುವ ರಾಧಿಕಾ ರಾವ್, ದಗಲ್ ಬಾಜಿಲು ವಿಘ್ನೇಶ್, ಏಸ ಚಿತ್ರದ ನಾಯಕ ರಾಹುಲ್ ಅಮೀನ್, ಹಾಸ್ಯ ನಟ ಶೋಭರಾಜ್ ಪಾವೂರು, ಒಂದು ಮೊಟ್ಟೆಯ ಕಥೆಯ ನಾಯಕಿ ಶೈಲಶ್ರೀ ಮುಲ್ಕಿ, ಪ್ರಸನ್ನ ಶೆಟ್ಟಿ ಬೈಲೂರು, ಅಶ್ವಿತಾ ನಾಯಕ್ ಇನ್ನೂ ಅನೇಕ ನಟ ನಟಿಯರು ಭಾಗವಹಿಸಿದ್ದರು ಇದೊಂದು ಸಂಪೂರ್ಣ ಸಿನೇಮಾ ಹಬ್ಬದಂತೆ ಭಾಸವಾಯಿತು.

ಕಲಾವಿದರುಗಳ ಆಗಮನ ವಿಶೇಷತೆಯ ಮೆರುಗು…
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರತಂಡದ ನಟ-ನಟಿಯರು ಮಕ್ಕಳು ಕೂಡಾ ಭಾಗವಹಿಸಿರುವುದು ಜನರಿಗೂ ಖುಷಿ ತಂದಿತು ಜೊತೆಗೆ ನಿರ್ಮಾಪಕರು ಭಾಗವಹಿಸಿದ್ದರು. ಜೊತೆಗೆ ಚಿತ್ರದಲ್ಲಿ ಉಪಯೋಗಿಸಿದ ಡೈಲಾಗುಗಳನ್ನು ಮಲಯಾಳಂ ಶಾಲೆಯ ಅಧಿಕಾರಿ ಪಾತ್ರ ಮಾಡಿದ ನಟ ಹಾಗೂ ಮಕ್ಕಳು ಹೇಳಿ ಖುಷಿಯಾದ ನಗೆ ಬೀರಿದರು.
ಜೀವನ ಯಜ್ಞ ಕನ್ನಡ ಚಿತ್ರದ ಟ್ರೇಲರ್ ಪ್ರದರ್ಶನಗೊಳಿಸಿ ತಂಡಕ್ಕೆ ಶುಭ ಹಾರೈಸಲಾಯಿತು. ಈ ಸಂದರ್ಭ ತಂಡದವರು ಈ ತಿಂಗಳ ಅಂತ್ಯದಲ್ಲಿ ಚಿತ್ರ ಬಿಡುಗಡೆಗೊಳ್ಳುವ ಮಾಹಿತಿಯನ್ನು ನೀಡಿದರು.

ಗೋಲ್‌ಮಾಲ್ ತುಳು ಚಿತ್ರದ ನಿರ್ದೇಶಕರಾದ ರಮಾನಂದ ನಾಯಕ್, ನಿರ್ಮಾಪಕರುಗಳಾದ ಮಂಜುನಾಥ್ ನಾಯಕ್ ಜೋಡುರಸ್ತೆ, ಅಕ್ಷಯ್ ಹಾಗೂ ನಟ-ನಟಿಯರು ಉಪಸ್ತಿತರಿದ್ದು ತಮ್ಮ ಚಿತ್ರದ ವಿಶೇಷತೆಯ ವಿವರ ನೀಡಿದರು ಮತ್ತು ಪ್ರಥಮ ಬಾರಿಗೆ ಬಹುಭಾಷಾ ನಟ ಸಾಯಿಕುಮಾರ್‌ರವರು ಈ ಚಿತ್ರದಲ್ಲಿ ನಟಿಸುವುದಾಗಿ ಮಾಹಿತಿ ಕೂಡಾ ನೀಡಿದರು.
ಕಂಬಳಬೆಟ್ಟು ಭಟ್ರೆನ ಮಗಲ್ ಚಿತ್ರ ತಂಡವೂ ಭಾಗವಹಿಸಿ ವಿಶಿಷ್ಟ ಹೆಸರಿನಲ್ಲಿರುವ ಚಿತ್ರದ ವಿಶೇಷತೆಯನ್ನು ಚಿತ್ರವನ್ನು ನೋಡಿ ಸವಿಯಬೇಕೆಂದು ಹೇಳಿದರು ತಂಡದವರು ಚಿತ್ರದ ಬಗ್ಗೆ ಮಾಹಿತಿಯನ್ನು ನೀಡಿದರು.

ಸಹಾಯ ಹಸ್ತ…
ಕ್ಯಾನ್ಸರ್ ಪೀಡಿತೆ ಬ್ರಹ್ಮಾವರದ ೪ ವರ್ಷದ ಮಗು ದೀಕ್ಷಾ ಯು. ಕುಂದರ್ ಇವರ ಚಿಕಿತ್ಸೆಗೆ ತಂದೆಯಾದ ಉಮೇಶ್ ಕುಂದರ್ ಇವರಿಗೆ 70000 ರೂ ನೀಡಿ ಸಹಾಯ ಹಸ್ತ ನೀಡಲಾಯಿತು.

ಮನೋರಂಜನೆಯ ಆಗರ…
ವಿವಿಧ ನೃತ್ಯಗಳ ಪ್ರದರ್ಶನ, ವಿಶ್ವಾಸ್ ಗುರುಪುರ ಹಾಗೂ ದಿವ್ಯಾ ರಾಮಚಂದ್ರರವರ ರಸಮಂಜರಿ ಕಾರ್ಯಕ್ರಮ, ಅಶೋಕ್ ಪೊಳಲಿ ಇವರ ನೃತ್ಯ ಪ್ರದರ್ಶನ ನೋಡಿ ಜನರು ಖುಷಿಯಾಗಿ ಕುಣಿದರು. ಜೊತೆಗೆ ಉದಯ ಟಿ.ವಿ.ಯ ’ಭರ್ಜರಿ ರಸಮಂಜರಿ’ ಖ್ಯಾತಿಯ ಮಿಮಿಕ್ರಿ ಗೋಪಿ ಇವರಿಂದ ನಡೆದ ಮಿಮಿಕ್ರಿ ಕಾರ್ಯಕ್ರಮಕ್ಕೆ ಜನರು ನಕ್ಕರು. ಮ್ಯಾಜಿಕ್ ಶೋ ಕೂಡಾ ಇತ್ತು.
ಹಲ್ಲಿನಿಂದ ತೆಂಗಿನ ಕಾಯಿ ಸುಲಿಯುವುದು ಈ ಬಗ್ಗೆ ಈಗಾಗಲೇ ಭಾರತೀಯ ವಿಶ್ವ ದಾಖಲೆಯನ್ನು ಮಾಡಿದ್ದ ರಾಜೇಶ್ ಪ್ರಭು ಶಿರ್ವ ಇವರ ಕಾರ್ಯಕ್ರಮದ ಜೊತೆಗೆ ಇವರಿಗೆ ಗೌರವ ಸನ್ಮಾನವೂ ಈ ಸಂದರ್ಭ ಜರುಗಿತು

ಸಮಾರೋಪ ಸಮಾರಂಭ :-
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ತುಳು ಚಿತ್ರರಂಗದ ಹಿರಿಯರೂ ಎನಿಸಿರುವ ವಿಜಯಕುಮಾರ್ ಕೋಡಿಯಾಲ್ ಬೈಲ್ ಇವರು ವಹಿಸಿದ್ದರು ತದ ನಂತರ ಮಾತನಾಡಿದ ಅವರು ಕಿರುಚಿತ್ರ ರಚಿಕರ ಬೆಳೆಸುವ ಕಾರ್ಯ ಉತ್ತಮ ಎಂದರು. ಈ ಸಂದರ್ಭ ಉದ್ಯಮಿಗಳಾದ ವಿದ್ಯಲತಾ ಯು ಶೆಟ್ಟಿ, ಜ್ಯೋತಿ ಹರೀಶ್, ಸದಾನಂದ ಪ್ರಭು, ದಿಶಾ ಕಮ್ಯೂನಿಕೇಷನ್ಸ್ ಟ್ರಸ್ಟ್ ನ ಪ್ರಕಾಶ್ ಸುವರ್ಣ ಕಟಪಾಡಿ ನಮ್ಮ ಸಿನಿಲೋಕ ಚಾನೆಲ್‌ನ ಹಾಗೂ ಎನ್ನ ಚಿತ್ರದ ನಿರ್ದೇಶಕರಾದ ವಿಶ್ವನಾಥ್ ಕೋಡಿಕ್ಕಲ್, ಉದ್ಯಮಿಗಳಾದ ಚೇತನ್ ಶೆಟ್ಟಿ ಸಂಭ್ರಮ ಕಾರ್ಯಕ್ರಮ ಆಯೋಜನೆಯ ಪ್ರಮುಖರಾದ ಭುವನೇಶ್ ಪ್ರಭು ಹಾಗೂ ಸಂದೀಪ್ ಕಾಮತ್ ಉಪಸ್ಥಿತರಿದ್ದರು. ಈ ಸಂದರ್ಭ ಹಲವಾರು ಪ್ರಶಸ್ತಿ ಪಡೆದ ಹಾಗೂ ಕನ್ನಡದ ಮೇರು ನಟ ಡಾ. ರಾಜ್ ಕುಮಾರ್ ಇವರ ಆಪ್ತರೂ ಹಾಗೂ ಇವರ ಜೊತೆ ನಟಿಸಿರುವ ಗುಬ್ಬಿ ನಾಟ ಕಂಪನಿಯಲ್ಲಿದ್ದ ದಯಾನಂದ ಶೆಟ್ಟಿ ಇವರಿಗೂ ಗೌರವದ ಸನ್ಮಾನ ನೀಡಲಾಯಿತು.

ಪ್ರಶಸ್ತಿಗಳು :-
ಪ್ರಥಮ ಪ್ರಶಸ್ತಿಯನ್ನು ಬೆಂಗಳೂರಿನ ತಂಡಕ್ಕೆ ಸಿರಿ (ಕನ್ನಡ) ಚಿತ್ರಕ್ಕೆ , ದ್ವಿತೀಯ ಸ್ಥಾನ ಉಡುಪಿ ಮೂಲದ ಮುಂಬೈನ ಅಂತಿಮ್ ಇಚ್ಚಾ (ಹಿಂದಿ) ಚಿತ್ರ ತಂಡ, ತೃತೀಯ ಬಹುಮಾನ ಅಂತರಂಗ (ಕನ್ನಡ) ಚಿತ್ರ ತಂಡ ಪಡೆದುಕೊಂಡಿತು. ಉತ್ತಮ ನಿರ್ದೇಶಕ ಗುರುಪ್ರಸಾದ್ (22 years in malpe), ಉತ್ತಮ ಕಥೆ ಚೇತನ್ ನೈಲಾಡಿ (ನಿರ್ಣಯ), ಉತ್ತಮ ಸ್ಕ್ರೀನ್ ಪ್ಲೇ ಪ್ರತಿಕ್ ಸಾಲ್ಯಾನ್ (ಫೇಸ್‌ಬುಕ್ ಗೆಳತಿ), ಉತ್ತಮ ಸಂಗೀತ ಸಂದೀಪ್ ಆರ್. ಬಳ್ಳಾಲ್ (ಒಂದು ಕ್ಷಣ), ಉತ್ತಮ ಛಾಯಗ್ರಹಣ ಸುರೇಂದ್ರ ಕುಲಾಲ್ ಪಣಿಯೂರು (ಜಾತಿ-ಪ್ರೀತಿ), ಉತ್ತಮ ಸಂಕಲನಕಾರ ನಾಗರ್ಜುನ್ ಮಂಗಲ್ಪಾಡಿ (ಆ ಒಂದು ಕರೆ), ಉತ್ತಮ ನಟ ಸುನಿಲ್ ನೆಲ್ಲಿಗುಡ್ಡೆ (ಮೌಲ್ಯ), ಉತ್ತಮ ನಟಿ ರೂಪಶ್ರೀ ವರ್ಕಾಡಿ (ಮಾ), ಉತ್ತಮ ಪೋಷಕ ನಟ ದೀಪಕ್ ರೈ ಪಾಣಾಜೆ (ತಿರುವು), ಉತ್ತಮ ಪೋಷಕ ನಟಿ ಸುಜಾತಾ ಶೆಟ್ಟಿ, ಉತ್ತಮ ಖಳ ನಾಯಕ ವಿಶು ರಾವ್ (ಈ ಏರ್), ಉತ್ತಮ ಹಾಸ್ಯ ನಟ ಪ್ರಶಾಂತ್ (ನೀರ್‌ಬೋಡಾ), ಉತ್ತಮ ಹಾಸ್ಯ ನಟಿ ಪ್ರಜ್ಞಾ (ಸ್ನೇಹಧಾರೆ), ಉತ್ತಮ ಬಾಲ ನಟ ಧನುಷ್, ಉತ್ತಮ ಬಾಲ ನಟಿ ಕಾವ್ಯಾ ಮಯ್ಯ (ವಿಮೋಚನೆ) ಇವಿಷ್ಟು ಬಹುಮಾನಗಳನ್ನು ಒಂದು ಚಿತ್ರದ ಅವಾರ್ಡ್ ಕಾರ್ಯಕ್ರಮ ದಂತೆ ನೀಡಲಾಯಿತು.

ಕಾರ್ಯಕ್ರಮದ ವಿಶಿಷ್ಟ ಮೆರುಗಾಗಿ ವಿ.ಜೆ ವಿನಿತ್ ಹಾಗೂ ವಿ.ಜೆ ಶರ್ಮಿಳಾ ಇವರು ನಿರೂಪಣೆಯನ್ನು ನಡೆಸಿಕೊಟ್ಟರು.

Comments are closed.