ಕರಾವಳಿ

ದ.ಕ.ಜಿಲ್ಲಾ ಪತ್ರಕರ್ತರ ಸಂಘದ ಬ್ರ್ಯಾಂಡ್ ಮಂಗಳೂರು ಯೋಜನೆಗೆ ಅ.14ರಂದು ಮುಖ್ಯ ಮಂತ್ರಿ ಚಾಲನೆ

Pinterest LinkedIn Tumblr

ಮಂಗಳೂರು ಅಕ್ಟೋಬರ್ 12 : ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ (ರಿ)ಮಂಗಳೂರು ಪ್ರೆಸ್ ಕ್ಲಬ್ (ರಿ) ಹಾಗೂ ಪತ್ರಿಕಾ ಭವನ ಟ್ರಸ್ಟ್ (ರಿ)ವತಿಯಿಂದ ಆಯೋಜಿಸಲಾಗಿರುವ ಬ್ರ್ಯಾಂಡ್ ಮಂಗಳೂರು ಹಾಗೂ ಪತ್ರಕರ್ತರ ಗ್ರಾಮ ವಾಸ್ತವ್ಯ ಯೋಜನೆ ಗಳಿಗೆ ಮುಖ್ಯ ಮಂತ್ರಿ ಎಚ್ ಡಿ ಕುಮಾರಸ್ವಾಮಿ ಅಕ್ಟೋಬರ್ 14 ರಂದು ಚಾಲನೆ ನೀಡಲಿದ್ದಾರೆ .

ನಗರದ ಟಿ ಮ್ ಎ ಪೈ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ ನಲ್ಲಿ ಸಂಜೆ 5 ಗಂಟೆಗೆ ಕಾರ್ಯಕ್ರಮ ನಡೆಯಲಿದೆ .
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ನಗರಾಭಿವೃದ್ಧಿ ವಸತಿ ಸಚಿವ ಯು ಟಿ ಖಾದರ್ ,ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಗೌರವ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ .

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ವಹಿಸಲಿದ್ದಾರೆ .

ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ,ಮಂಗಳೂರು ಮೇಯರ್ ಭಾಸ್ಕರ್, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ,ಜಿಲ್ಲೆಯ ಶಾಸಕರು , ವಿಧಾನ ಪರಿಷತ್ ಸದಸ್ಯರು ಮುಖ್ಯ ಅತಿಥಿ ಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ತಿಳಿಸಿದ್ದಾರೆ .

ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿ ಚಾಲನೆ ನೀಡಲಿರುವ ಬ್ರ್ಯಾಂಡ್ ಮಂಗಳೂರು ಮತ್ತು ಗ್ರಾಮ ವಾಸ್ತವ್ಯದ ಬಗ್ಗೆ… 
ಏನಿದು ಬ್ರ್ಯಾಂಡ್ ಮಂಗಳೂರು…

ಹಿಂದಿನಿಂದಲೂ ತನ್ನ ಭೌಗೋಳಿಕ ವಿಶಿಷ್ಟತೆ, ಕಡಲಿನ ಸಹಜ ಸೌಂದರ್ಯ, ಸೌಹಾರ್ದತೆಯ ಸಿಹಿ, ಹಲವು ಭಾಷೆ-ಸಂಸ್ಕೃತಿ ಆಚರಣೆಗಳ ಆಡಂಬೊಲ ದಕ್ಷಿಣ ಕನ್ನಡ ಜಿಲ್ಲೆ.

ಸುಶಿಕ್ಷಿತರು, ಸಂಭಾವಿತರು, ಸುಸಂಸ್ಕೃತ ಜಿಲ್ಲೆಯೆಂದು ಪರಿಗಣಿಸಿದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವತ್ತೂ ಶಾಂತಿ ಸೌಹಾರ್ದತೆಯ ನಾಡು. ವರ್ಷಂಪ್ರತಿ ನಾವೆಲ್ಲರೂ ಒಂದಾಗಿ ಬಕ್ರೀದ್, ಕನ್ಯಾ ಮರಿಯಮ್ಮ ಜನ್ಮದಿನ, ಗಣೇಶೋತ್ಸವ ಸೇರಿದಂತೆ ಪ್ರತಿಯೊಂದು ಹಬ್ಬವನ್ನು ಜಾತಿ-ಧರ್ಮ ಮೀರಿ ಸಂಭ್ರಮದಿಂದ ಆಚರಿಸುತ್ತಿದ್ದೇವೆ.

ಆದರೆ ನಮ್ಮ ಜಿಲ್ಲೆಯ ಇಮೇಜ್‌ಗೆ ಧಕ್ಕೆ ಬರುವಂತಹ ಬೆಳವಣಿಗೆಗಳು ಕೆಲ ಸಮಯದಿಂದ ನಡೆಯುತ್ತಿದೆ. ಕೆಟ್ಟ ಕೆಲಸ ಮಾಡುವ ಬೆರಳೆಣಿಕೆ ವ್ಯಕ್ತಿಗಳ ಕೃತ್ಯವನ್ನೇ ದೊಡ್ಡದು ಮಾಡಿ, ಅದುವೇ ನಿಜವಾದ ಮಂಗಳೂರು ಎಂಬಂತೆ ಬಿಂಬಿಸಲಾಗುತ್ತಿದೆ. ಅದು ಮಾಧ್ಯಮ ಇರಬಹುದು, ಸಾಮಾಜಿಕ ಜಾಲತಾಣಗಳು ಇರಬಹುದು. ಹಾಗಾಗಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಈ ವಿಚಾರ ವಿಶೇಷವಾಗಿ ಚರ್ಚೆಯಾಗಿದೆ. ಮಂಗಳೂರು ತನ್ನ ನಿಜವಾದ ಗುಣದಿಂದಲೇ ಹೆಸರಾಗಬೇಕು ಹೊರತು ಸೀಮಿತ ಕೆಟ್ಟ ವಿಚಾರದಿಂದ ಅಲ್ಲ. ಈ ಬಗ್ಗೆ ಜಾಗೃತಿ ಮೂಡಿಸಲು ಪತ್ರಕರ್ತರ ಸಂಘ ಹುಟ್ಟು ಹಾಕಿರುವ ಯೋಜನೆಯಾಗಿದೆ ಬ್ರ್ಯಾಂಡ್ ಮಂಗಳೂರು

ಈ ಪುಣ್ಯ ನೆಲಕ್ಕೆ ಕೋಮು ಜಿಲ್ಲೆ ಎಂಬ ಹಣೆ ಪಟ್ಟಿ ಬೇಕಾಗಿಲ್ಲ. ರಾಜಕೀಯ ಪಕ್ಷಗಳನ್ನು ಪ್ರತಿನಿಧಿಸುವ ಕೆಲವು ಸಂಘಟನೆಗಳು ತಮ್ಮ ಮೂಲಭೂತವಾದಕ್ಕೆ ಅಂಟಿಕೊಂಡು ಈ ದುಷ್ಕೃತ್ಯ ನಡೆಸುತ್ತಿವೆ ಎನ್ನುವುದು ಒಪ್ಪಬೇಕಾದ ಸತ್ಯ. ಇದರಿಂದ ಈ ನೆಲದ ಗುಣ ಅರಿವಿಲ್ಲದ, ಈ ಜಿಲ್ಲೆಯ ಸತ್ಯಾಸತ್ಯತೆ ಬಗ್ಗೆ ತಿಳಿಯದ ಕೆಲವು ರಾಜಕೀಯ ಮುಖಂಡರು, ಜಿಲ್ಲೆಯ ಅಭಿವೃದ್ಧಿ ಬಗ್ಗೆ ಸಹಿಸಿಕೊಳ್ಳದವರು ಈ ರೀತಿ ಜಿಲ್ಲೆಯ ಬಗ್ಗೆ ತಪ್ಪು ಭಾವನೆ ಸೃಷ್ಟಿಸಿ, ಪಸರಿಸುತ್ತಿದ್ದಾರೆ.

ಪತ್ರಕರ್ತರಿಗೂ ಜಾಗೃತಿ: ಜಿಲ್ಲೆಯಲ್ಲಿ ಯಾವುದೇ ಕೋಮು ಸೂಕ್ಷ್ಮ ದುಷ್ಕೃತ್ಯಗಳು ನಡೆದಾಗ ಮಾಧ್ಯಮ ಪ್ರತಿನಿಧಿಗಳಾಗಿ ಕೆಲವೊಂದು ಜವಾಬ್ದಾರಿಗಳನ್ನು ಮೆರೆಯುವ ನಿಟ್ಟಿನಲ್ಲಿ ಪತ್ರಕರ್ತರಲ್ಲೂ ಜಾಗೃತಿ ಮೂಡಿಸುವ ಕೆಲಸ ‘ಬ್ರ್ಯಾಂಡ್ ಮಂಗಳೂರು ‘ ಮೂಲಕ ನಡೆಯಲಿದೆ.

ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳು, ಪೊಲೀಸ್ ಆಯಕ್ತರು ಸೇರಿದಂತೆ ಹಿರಿಯ ಅಧಿಕಾರಿಗಳನ್ನು ಕರೆದು ಧಾರ್ಮಿಕ ಮುಖಂಡರ ಮುಖಾಮುಖಿಯಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಇದು ಮಾತ್ರವಲ್ಲದೆ ಕಾಲೇಜು ಮಟ್ಟದಲ್ಲೂ ಈ ಬಗ್ಗೆ ಜಾಗೃತಿ ಮೂಡಿಸಲು ನಿರ್ಧರಿಸಲಾಗಿದೆ. ಒಂದು ವರ್ಷ ಬ್ರ್ಯಾಂಡ್ ಮಂಗಳೂರು ಕಾರ್ಯಕ್ರಮದ ಯೋಜನೆ ಹಾಕಲಾಗಿದ್ದು, ಈ ಸಂದರ್ಭ ವೈವಿಧ್ಯ ರೀತಿಯಲ್ಲಿ ಜಾಗೃತಿ ಕಾರ್ಯಕ್ರಮ ನಡೆಯಲಿದೆ.

ಪತ್ರಕರ್ತರ ಗ್ರಾಮ ವಾಸ್ತವ್ಯ ;

ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘ ಈ ವರ್ಷದಿಂದ ಆಯೋಜಿಸಿದೆ. ದ.ಕ. ಜಿಲ್ಲೆಯ ಅತೀ ಹಿಂದುಳಿದ ಗ್ರಾಮವನ್ನು ಆಯ್ಕೆ ಮಾಡಿ ಒಂದು ಆ ಗ್ರಾಮಕ್ಕೆ ಜಿಲ್ಲೆಯ ಹಿರಿಯ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಲಿದ್ದೇವೆ. ಗ್ರಾಮದ ಪ್ರಮುಖ ಸ್ಥಳವೊಂದನ್ನು ನಿಗದಿಪಡಿಸಿ ಅಲ್ಲಿ ಗ್ರಾಮಸ್ಥರ ಸಭೆ ನಡೆಸಿ ಗ್ರಾಮದ ಸಮಸ್ಯೆಯನ್ನು ಆಲಿಸುವ ಮತ್ತು ಸ್ಥಳದಲ್ಲೇ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಲಿದೆ.

ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಜಂಟಿಯಾಗಿ ಪರಿಹಾರ ಕ್ರಮದ ಫಾಲೋಅಪ್ ಮಾಡಲಿದೆ. ಸಂಬಂಧಪಟ್ಟ ಗ್ರಾಮದಲ್ಲಿ ನಡೆದ ಸಭೆಯ ಬೇಡಿಕೆಗಳು ಈಡೇರುವ ತನಕ ಹೊಸ ಆಯ್ಕೆ ಗ್ರಾಮ ಮಾಡುವುದಿಲ್ಲ. ಈ ನಿಟ್ಟಿನಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಯಲಿದೆ.

Comments are closed.