ಕರಾವಳಿ

ಅಕ್ಷಯ ಆರ್‌.ಶೆಟ್ಟಿ ಅವರ ‘ಬದುಕು ಭಾವದ ತೆನೆ’ ಬಿಡುಗಡೆ / ಭಾವತೀವ್ರತೆ ಕವಿತೆಯ ಜೀವಾಳ: ಡಾ.ಚಿನ್ನಪ್ಪ ಗೌಡ

Pinterest LinkedIn Tumblr

ಮಂಗಳೂರು: ‘ಕನ್ನಡದಲ್ಲಿ ಅತ್ಯುತ್ತಮ ನವ್ಯ ಕವಿತೆಗಳನ್ನು ಕೊಟ್ಟಿರುವ ಹಿರಿಯ ಕವಿ ಗೋಪಾಲಕೃಷ್ಣ ಅಡಿಗ ಮತ್ತು ಇತರ ನವ್ಯ ಕವಿಗಳನ್ನು ಅನುಸರಿಸಲು ಹೋದ ಎಳೆಯ ಕವಿಗಳು ಭಾವ ತೀವ್ರತೆಗೆ ಎರವಾಗಿ ಬಹಳ ಸಪ್ಪೆ ಗದ್ಯದ ರಚನೆಯನ್ನೇ ಕಾವ್ಯದ ಒಡಲಾಗಿಸಿದಂತೆ ಕಾಣಿಸುತ್ತದೆ. ಇದು ಆತಂಕಕಾರಿ ಬೆಳವಣಿಗೆ.ನಿಜವಾದ ಭಾವ ತೀವ್ರತೆಯೇ ಕಾವ್ಯದ ಜೀವಾಳ ಎಂಬುದನ್ನು ಕವಿಗಳು ಮನಗಾಣಬೇಕು’ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಕೆ.ಚಿನ್ನಪ್ಪ ಗೌಡ ಹೇಳಿದ್ದಾರೆ.

ಉರ್ವಾಸ್ಟೋರ್ ನ ತುಳುಭವನದ ಸಿರಿ ಚಾವಡಿಯಲ್ಲಿ ಅಕ್ಷಯ ಆರ್.ಶೆಟ್ಟಿ ಅವರ ‘ಬದುಕು ಭಾವದ ತೆನೆ’ ಕವನ ಸಂಕಲನವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಸಂಕಲನದ ಹೆಸರೇ ಸೂಚಿಸುವಂತೆ ಅಕ್ಷಯ ಅವರ ಕವಿತೆಗಳೆಲ್ಲ ಭಾವಪ್ರಧಾನವಾದವುಗಳು. ಅವುಗಳಲ್ಲಿ ಹೆಣ್ಣೊಬ್ಬಳ ಗಟ್ಟಿ ಧ್ವನಿ ಇದೆ; ಸ್ತ್ರೀವಾದಿ ಚಿಂತನೆಯ ನೆಲೆ ಇದೆ. ತನ್ನ ಸಾಂಸ್ಕೃತಿಕ ಮತ್ತು ಸಾಮಾಜಿಕ ಪ್ರಜ್ಞೆಗೆ ಅನುಗುಣವಾಗಿ ಆವರಣದ ಒಳಗಿನ ಒಬ್ಬ ಕವಯಿತ್ರಿ ಆವರಣದ ಹೊರಗೆ ಇಣುಕಿ ನೋಡುವ, ಅಲ್ಲಿ ಏನಿದೆಯೆಂದು ಕುತೂಹಲದಿಂದ ಕಣ್ಣು ಹಾಯಿಸುವ ಕೆಲಸ ಪ್ರಸ್ತುತ ಕವಿತೆಗಳಲ್ಲಿ ಎದ್ದು ಕಾಣುತ್ತದೆ’ ಎಂದವರು ವಿಶ್ಲೇಷಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ದೀಪ ಪ್ರಜ್ವಲನೆ ಮಾಡಿದರು.ಅವರು ಮಾತನಾಡಿ ‘ತುಳು ಮತ್ತು ಕನ್ನಡ ಭಾಷೆಗಳಿಗೆ ಯಾವುದೇ ರೀತಿಯ ಭೇದವಿಲ್ಲ.ಅವೆರಡೂ ನಮ್ಮ ಕಣ್ಣುಗಳಿದ್ದಂತೆ; ತುಳು ನಮಗೆ ತಾಯಿ ಭಾಷೆಯಾದರೆ ಕನ್ನಡ ತುಳುವಿನ ಸಾಕು ತಾಯಿಯಂತೆ. ಕನ್ನಡದಲ್ಲಿ ಸಾಹಿತ್ಯ ಕೃಷಿ ಮಾಡಿದ ಬಹುತೇಕ ತುಳುವರು ಈ ನೆಲದ ಉತ್ಕೃಷ್ಟ ಸಂಸ್ಕೃತಿಯನ್ನು ತಮ್ಮ ಕೃತಿಗಳಲ್ಲಿ ಕಟ್ಟಿ ಕೊಟ್ಟಿದ್ದಾರೆ’ ಎಂದರು.

ಮುಖ್ಯ ಅತಿಥಿಯಾಗಿ ಕೃತಿ ಪರಿಚಯ ಮಾಡಿದ ಕವಿ-ಸಾಹಿತಿ ಡಾ. ವಸಂತ ಕುಮಾರ್ ಪೆರ್ಲ ಅವರು ‘ ಬದುಕು ಭಾವದ ತೆನೆ ಕೃತಿಯಲ್ಲಿ ಬದುಕನ್ನು ಬಹಳ ಸಕಾರಾತ್ಮಕವಾದ ಮನೋ ದೃಷ್ಟಿಯಿಂದ ಕವಿತೆಗಳ ಮೂಲಕ ಪ್ರಸ್ತುತಪಡಿಸಲಾಗಿದೆ. ಕವಿಯಾದವನು ಧನಾತ್ಮಕವಾಗಿ ಚಿಂತಿಸದೆ ಇದ್ದರೆ ಅಂತಹ ಚಿಂತನೆಯನ್ನು ಬೇರೆಯವರಿಂದ ನಿರೀಕ್ಷಿಸುವ ಹಾಗಿಲ್ಲ.ಕವಿಯಾದವನು ಋಷಿಯ ಹಂತಕ್ಕೆ ಬರಬೇಕು; ಜಾತಿ,ಮತ,ಧರ್ಮ,ಪಂಗಡ ಮೀರಿ ಬೆಳೆಯಬೇಕು’ ಎಂದು ನುಡಿದರು.

ಕವಯಿತ್ರಿ ಅಕ್ಷಯ ಆರ್.ಶೆಟ್ಟಿ ಪೆರಾರ ಮುಂಡಬೆಟ್ಟು ಸ್ವಾಗತಿಸಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಭಾಸ್ಕರ ರೈ ಕುಕ್ಕುವಳ್ಳಿ ಕಾರ್ಯಕ್ರಮ ನಿರೂಪಿಸಿದರು.

ತುಡರ್ ಪ್ರಕಾಶನದ ರವಿ ಶೆಟ್ಟಿ ಅತಿಥಿಗಳನ್ನು ಗೌರವಿಸಿದರು. ಶಿಕ್ಷಕಿ ಮಂಜುಳಾ ಶೆಟ್ಟಿ ವಂದಿಸಿದರು. ಜ್ಯೂನಿಯರ್ ರಾಜಕುಮಾರ್ ಖ್ಯಾತಿಯ ಜಗದೀಶ್ ಶಿವಪುರ ಅವರು ಸಂಕಲನದಿಂದ ಆಯ್ದ ಕವನಗಳಿಗೆ ರಾಗ ಸಂಯೋಜಿಸಿ ಹಾಡಿದರು.

Comments are closed.