ಕರಾವಳಿ

ಅಭಯ್‌ಚಂದ್ರ ಜೈನ್ ಪರ ಆಖಾಡಕ್ಕಿಳಿದ ಮಿಥುನ್ ರೈ : ಕ್ಷೇತ್ರದಲ್ಲಿ ಬೃಹತ್ ರೋಡ್ ಶೋ

Pinterest LinkedIn Tumblr

ಮೂಡಬಿದಿರೆ: ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರು ಮುಲ್ಕಿ – ಮೂಡಬಿದ್ರೆ ಕ್ಷೇತ್ರದಲ್ಲಿ ಬೃಹತ್ ರೋಡ್ ಶೋ ನಡೆಸುವ ಮೂಲಕ ಮೂಡಬಿದ್ರೆ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಅಭಯ್ ಚಂದ್ರ ಜೈನ್ ಅವರ ಪರ ಪ್ರಚಾರ ಆರಂಭಿಸಿದ್ದಾರೆ.

ಮೂಡಬಿದ್ರೆ ವಿಧಾನ ಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಮಿಥುನ್ ರೈ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಕೆಲ ದಿನಗಳ ಕಾಲ ಮೌನಿಯಾಗಿದ್ದರು. ಆದರೆ ಇದೀಗ ಈ ಬಗ್ಗೆ ಯಾವೂದೇ ಮನಸ್ತಾಪ ತೋರದೆ ತಮಗೆ ಟಿಕೆಟ್ ನಿರಾಕರಿಸಿದ ಕ್ಷೇತ್ರದಲ್ಲೇ ಚುನಾವಣಾ ಪ್ರಚಾರದಲ್ಲಿ ತೊಡಗುವ ಮೂಲಕ ಚುನಾವಣಾ ಆಖಾಡದಲ್ಲಿ ಸದ್ದು ಮಾಡಿದ್ದಾರೆ.

ಮೂಲ್ಕಿ ಮೂಡಬಿದಿರೆಯಲ್ಲಿ ಕ್ಷೇತ್ರದ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಅಭಯಚಂದ್ರ ಜೈನ್ ಅವರ ಪರವಾಗಿ ಮೂರು ದಿನಗಳ ಕಾಲ ವ್ಯಾಪಕ ಪ್ರಚಾರ ಆರಂಭಿಸಿರುವ ಮಿಥುನ್ ರೈ ಅವರು, ದ.ಕ.ಜಿಲ್ಲೆಯ ಪವಿತ್ರ ಕ್ಷೇತ್ರವಾದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಕಟೀಲು ಕ್ಷೇತ್ರದಿಂದಲೇ ತಮ್ಮ ಚುನಾವಣಾ ಪ್ರಚಾರವನ್ನು ಆರಂಭಿಸಿದ್ದಾರೆ. ಬಳಿಕ ಕಿನ್ನಿಗೋಳಿ, ಮೂಲ್ಕಿ, ಬಜಪೆ, ಮೂಡಬಿದಿರೆ ಸೇರಿದಂತೆ ವಿವಿಧೆಡೆ ಬೃಹತ್ ರೋಡ್ ಶೋ ನಡೆಸುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಅಭಯ ಚಂದ್ರ ಜೈನ್ ಪರ ಅವರು ಮತಯಾಚಿಸಿದ್ದಾರೆ.

ಇದೇ ವೇಳೆ ಮಿಥುನ್ ರೈ ಅವರಿಗೆ ಟಿಕೆಟ್ ಕೈತಪ್ಪಿದಕ್ಕೆ ನೊಂದು ಪ್ರಚಾರ ಕಾರ್ಯದಿಂದ ದೂರ ಉಳಿದಿದ್ದ ಯುವ ಕಾಂಗ್ರೆಸ್ ಕಾರ್ಯಕರ್ತರು ಮಿಥುನ್ ರೈ ಅವರೊಂದಿಗೆ ಕೈಜೋಡಿಸಿದರು.. ಈ ಮೂಲಕ ಮಿಥುನ್ ರೈ ಅವರ ಆಗಮನದಿಂದ ಅಭಯಚಂದ್ರ ಜೈನ್ ಅವರ ಪ್ರಚಾರ ಕಾರ್ಯಕ್ಕೆ ಮತ್ತಷ್ಟು ವೇಗ ದೊರಕಿದೆ.

ಈಗಾಗಲೇ ಕ್ಷೇತ್ರದಾದ್ಯಂತ ಸಂಚರಿಸಿರುವ ಅಭಯಚಂದ್ರ ಜೈನ್, ತಮಗೆ ಕ್ಷೇತ್ರದಾದ್ಯಂತ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದ್ದು, ಈ ಬಾರಿಯೂ ಮೂಡಬಿದಿರೆಯಲ್ಲಿ ಕಾಂಗ್ರೆಸ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Comments are closed.