ಮಂಗಳೂರು, ಮಾರ್ಚ್ 14 : ಮನಪಾ ಮಹಿಳಾ ಮಹಿಳಾ ಕಾರ್ಪೋರೇಟರ್ ಜೊತೆ ಅನುಚಿತ ವರ್ತನೆ ತೋರಿದ ಆರೋಪದಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ಧೆಯಿಂದ ಅಬ್ದುಲ್ ಸತ್ತಾರ್ ಅವರನ್ನು ವಜಾಗೊಳಿಸಿದ ಬೆನ್ನಲ್ಲೇ ಇದೇ ವಿಚಾರಕ್ಕೆ ಸಂಬಂಧಿಸಿ ಕಾರ್ಪೋರೇಟರ್ ಪ್ರತಿಭಾ ಕುಳಾಯಿಯವರಿಗೆ ಕಾಂಗ್ರೆಸ್ನ ಜಿಲ್ಲಾ ಸಮಿತಿ ಷೋಕಾಸ್ ನೋಟಿಸ್ ಜಾರಿ ಮಾಡಿದೆ.
ಸೋಮವಾರ ಬೆಳಗ್ಗೆ ಮಂಗಳೂರು ಉತ್ತರ ಶಾಸಕ ಮೊದಿನ್ ಬಾವಾ ಅವರ ಸುರತ್ಕಲ್ ಕಚೇರಿಯಲ್ಲಿ ಅಭಿವೃದ್ದಿ ಕಾರ್ಯಗಳ ಬಗ್ಗೆ ಚರ್ಚೆ ನಡೆಯುತ್ತಿತ್ತು. ಈ ಚರ್ಚೆಯಲ್ಲಿ ಕಾರ್ಪೋರೇಟರ್ ಪ್ರತಿಭಾ ಕುಳಾಯಿ ಕೂಡ ಭಾಗವಹಿಸಿದ್ದರು. ಈ ವೇಳೆ ಪ್ರತಿಭಾ ಜೊತೆ ಸತ್ತಾರ್ ಅಸಭ್ಯವಾಗಿ ವರ್ತಿಸಿದ್ದ ಎನ್ನಲಾಗಿದೆ.
ಅಬ್ದುಲ್ ಸತ್ತಾರ್
ಈ ವೇಳೆ ಕೋಪಗೊಂಡ ಪ್ರತಿಭಾ, ಸತ್ತಾರ್ಗೆ ಧರ್ಮದೇಟು ನೀಡಲು ಮುಂದಾದ ವೇಳೆ ಆತ ಸ್ಥಳದಿಂದ ಪರಾರಿಯಾಗಿದ್ದ. ಬಳಿಕ ಕಚೇರಿಯ ಮುಂದೆ ರಾಜೀ ಪಂಚಾಯಿತಿ ಮೂಲಕ ತನ್ನ ತಪ್ಪಿಗೆ ಕ್ಷಮೆ ನೀಡಬೇಕೆಂದು ಪ್ರತಿಭಾ ಬಳಿ ಕೇಳಿಕೊಂಡಿದ್ದ. ಆದರೆ ಆತನ ಅಸಭ್ಯ ವರ್ತನೆಗೆ ಮೊದಲೇ ಕೋಪಗೊಂಡಿದ್ದ ಪ್ರತಿಭಾ ಆತನಿಗೆ ಎರಡೇಟು ಬಿಗಿದಿದ್ದಾರೆ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿ ಪ್ರತಿಭಾ ಅವರು ಮಾಧ್ಯಮದ ಮುಂದೆ ಹೇಳಿಕೆ ನೀಡುವ ಮೊದಲು ಪಕ್ಷದ ವರಿಷ್ಠರನ್ನು ಸಂಪರ್ಕಿಸದಿರುವುದಕ್ಕೆ ಪ್ರತಿಭಾ ಮೇಲೆ ಶಿಸ್ತು ಕ್ರಮ ಕೈಗೊಂಡಿರುವುದಾಗಿ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ. ಹರೀಶ್ ಕುಮಾರ್ ತಿಳಿಸಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ ತಾವು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಯಾಗಿದ್ದುಕೊಂಡು ಪಕ್ಷಕ್ಕೆ ಮುಜುಗರವಾಗುವ ರೀತಿಯಲ್ಲಿ ರಾಷ್ಟ್ರೀಯ ಟಿ.ವಿ ಚಾನೆಲ್ ಗಳ ಚರ್ಚೆಯಲ್ಲಿ ಪಾಲ್ಗೊಂಡಿದ್ದಿರಿ. ಪಕ್ಷದ ಅನುಮತಿಯಿಲ್ಲದೇ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿದ ತಮ್ಮ ಮೇಲೆ ಯಾಕೆ ಶಿಸ್ತು ಕ್ರಮ ಕೈಗೊಳ್ಳಬಾರದು ಎಂಬುವು಼ದರ ಬಗ್ಗೆ ಪತ್ರ ತಲುಪಿದ ಏಳು ದಿನಗಳೊಳಗೆ ಉತ್ತರಿಸತಕ್ಕದ್ದು ಎಂದು ನೋಟಿಸ್ ನಲ್ಲಿ ಸೂಚಿಸಲಾಗಿದೆ.
Comments are closed.