ಕರಾವಳಿ

ಮೇಯರ್ ಸ್ಥಾನ ಮುಸ್ಲಿಮರಿಗೆ ನೀಡಲು ಅಲ್ಪಸಂಖ್ಯಾತ ಕಾಂಗ್ರೆಸ್ ನಾಯಕರ ಆಗ್ರಹ : ಸಾಮೂಹಿಕ ರಾಜೀನಾಮೆಯ ಎಚ್ಚರಿಕೆ

Pinterest LinkedIn Tumblr

ಮಂಗಳೂರು, ಮಾರ್ಚ್ 3 : ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ರಾಜಕೀಯವಾಗಿ ಸಕ್ರೀಯಗೊಂಡಿರುವ ಅಲ್ಪಸಂಖ್ಯಾತ ನಾಯಕರು ಮನಪಾ ಮೇಯರ್ ವಿಚಾರದಲ್ಲಿ ಜಿಲ್ಲೆಯ ಕಾಂಗ್ರೆಸ್ ಮುಖಂಡರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಸ್ಥಾನ ಮುಸ್ಲಿಮರಿಗೆ ನೀಡಬೇಕು ಎಂದು ಒತ್ತಾಯಿಸುವ ಸಲುವಾಗಿ ನಗರದ ಜಮೀಯ್ಯತುಲ್ ಫಲಾಹ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಪಕ್ಷದ ಮುಸ್ಲಿಮ್ ಮುಖಂಡರು ಹಾಗು ಕಾರ್ಯಕರ್ತರ ಸಭೆಯಲ್ಲಿ “ನಮಗೆ ಮೇಯರ್ ಸ್ಥಾನ ಕೊಡುವುದಿದ್ದರೆ ಕೊಡಲಿ, ಉಪ ಮೇಯರ್ ಸ್ಥಾನ ಕೊಟ್ಟು ಸಮಾಧಾನಪಡಿಸುವುದು ಬೇಡ. ಒಂದು ವೇಳೆ ನಮ್ಮ ಬೇಡಿಕೆಗೆ ಪಕ್ಷದ ಹಿರಿಯ ನಾಯಕರು ಸ್ಪಂದಿಸದಿದ್ದರೆ ಪಕ್ಷದ ಹುದ್ದೆಗಳಿಗೆ ಸಾಮೂಹಿಕ ರಾಜೀನಾಮೆ ನೀಡೋಣ.” ಎಂಬ ಒಕ್ಕೊರಳ ಆಗ್ರಹ ಕೇಳಿ ಬಂದಿದೆ.

ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಹಾಜಿ ಕಣಚೂರು ಮೋನು ಅಧ್ಯಕ್ಷತೆ ಹಾಗೂ ಕರಾವಳಿ ವಲಯ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಯು.ಬಿ.ಸಲೀಂ ಅವರ ಮುತುವರ್ಜಿಯಿಂದ ನಡೆದ ಈ ಸಭೆಯಲ್ಲಿ ಸುಮಾರು 200ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಿಂದ ಮುಸ್ಲಿಮರಿಗೆ ಎಸಗುವ ಅನ್ಯಾಯದ ಬಗ್ಗೆ ಈ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಯಿತು. ಯಾವುದೇ ಹೋರಾಟಕ್ಕೂ ನಾವು ಸಿದ್ಧರಾಗಬೇಕು ಎಂದು ಭಾಗವಹಿಸಿದ್ದ ನಾಯಕರು ಪಣತೊಟ್ಟರು. ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಮರು ಎಷ್ಟು ಅನಿವಾರ್ಯ ಎಂಬುದನ್ನು ಹೋರಾಟದ ಮೂಲಕವೇ ತೋರಿಸಿ ಕೊಡಬೇಕು ಎಂದು ಸಂದೇಶ ಸಾರಿದರಲ್ಲದೆ, ಯಾವ ಕಾರಣಕ್ಕೂ ಈ ಹೋರಾಟದಿಂದ ಹಿಂದಕ್ಕೆ ಸರಿಯಬಾರದು ಎಂದು ಎಲ್ಲರೂ ನಿರ್ಧರಿಸಿದರು.

ನಾವು ಕೇವಲ ಪಕ್ಷದ ಬ್ಯಾನರ್ ಕಟ್ಟಲು, ಕರಪತ್ರ ಹಂಚಲು ಇರುವವರಲ್ಲ. ಪಕ್ಷದ ಬೆಳವಣಿಗೆಗೆ ನಾವು ಶಕ್ತಿ ಮೀರಿ ದುಡಿಯುವವರು. ಹಾಗಾಗಿ ನಮಗೆ ಭಿಕ್ಷೆ ಬೇಡ . ಸ್ಥಾನಮಾನ ಕೇಳುವುದು ನಮ್ಮ ಹಕ್ಕು. ನಮ್ಮ ಹಕ್ಕನ್ನು ನಾವು ಪಡೆದೇ ತೀರಬೇಕು. ಇದಕ್ಕೆ ಹೋರಾಟವೊಂದೇ ದಾರಿ. ನಮ್ಮ ಒಗ್ಗಟ್ಟನ್ನು ಪಕ್ಷದ ಹಿರಿಯ ನಾಯಕರಿಗೆ ತೋರಿಸಿಕೊಟ್ಟು ಮುಸ್ಲಿಮರು ಕಾಂಗ್ರೆಸ್ಗೆ ಎಷ್ಟು ಅನಿವಾರ್ಯ ಎಂಬುದನ್ನು ಸಾಬೀತುಪಡಿಸಬೇಕು ಎಂದು ಭಾಗವಹಿಸಿದ್ದ ಮುಖಂಡರು ಹೇಳಿದರು.

ಪಾಲಿಕೆ ವ್ಯಾಪ್ತಿಯ ಮುಸ್ಲಿಮ್ ಜನಸಂಖ್ಯೆಗೆ ಹೋಲಿಸಿದರೆ ಕನಿಷ್ಟ 15 ಮುಸ್ಲಿಮರು ಕಾರ್ಪೊರೇಟರ್ಗಳಿರಬೇಕಿತ್ತು. ಆದರೆ ಈಗ ಇರುವುದು ಕೇವಲ 9 ಮಂದಿ ಮಾತ್ರ. ಅದರಲ್ಲಿ ಕಾಂಗ್ರೆಸ್ಸಿಗರು 6 ಮಂದಿ. ಮೂವರು ತಲಾ ಎರಡೆರಡು ಬಾರಿ ಆಯ್ಕೆಯಾದ ಕಾರ್ಪೊರೇಟರ್ಗಳಿದ್ದಾರೆ. ಈ 6 ಮಂದಿಯ ಪೈಕಿ ಯಾರಿಗಾದರು ಒಬ್ಬರಿಗೆ ಮೇಯರ್ ಸ್ಥಾನ ಕೊಡಲೇಬೇಕು. ಮೊದಲ ಅವಧಿಯಲ್ಲಿ ಬಂಟರಿಗೆ, 2ನೆ ಅವಧಿಯಲ್ಲಿ ಕ್ರೈಸ್ತರಿಗೆ, ಮೂರನೆ ಅವಧಿಯಲ್ಲಿ ಹಿಂದುಳಿದ ವರ್ಗ, ನಾಲ್ಕನೆ ಅವಧಿಯಲ್ಲಿ ಬಿಲ್ಲವರಿಗೆ ಕೊಡಲಾಗಿದೆ. ಇನ್ನಿರುವುದು ಒಂದೇ ಅವಧಿ. ಈ ಅವಧಿಯಲ್ಲಿ ಮುಸ್ಲಿಮರಿಗೆ ಕೊಡಲೇಬೇಕು. ಒಂದು ವೇಳೆ ಮುಸ್ಲಿಮರಿಗೆ ಕೊಡದಿದ್ದರೆ ಈ ಪರಂಪರೆ ಮುಂದುವರಿಯಲಿದೆ. ಇದರಿಂದ ಭವಿಷ್ಯದಲ್ಲಿ ನಮ್ಮ ಧ್ವನಿ ಅಡಗಲಿದೆ. ಮುಂದೆ ನಮಗೆ ಕಾಂಗ್ರೆಸ್ ಪಕ್ಷವು ಕಾರ್ಪೊರೇಟರ್ ಸ್ಥಾನಕ್ಕೆ ಸ್ಪರ್ಧಿಸಲು ಟಿಕೆಟ್ ಕೊಡಲೂ ಹಿಂಜರಿದೀತು ಎಂಬ ಮಾತುಗಳು ಕೇಳಿ ಬಂದವು.

ಕಾಂಗ್ರೆಸ್ ಪಕ್ಷದ ಹಿರಿಯ ಮುಸ್ಲಿಮ್ ನಾಯಕರು ಮೌನಕ್ಕೆ ಶರಣಾಗುತ್ತಿದ್ದರು. ಅನ್ಯಾಯದ ವಿರುದ್ಧ ಪಕ್ಷದ ಆಂತರಿಕ ಸಭೆಯಲ್ಲೂ ಧ್ವನಿ ಎತ್ತುತ್ತಿರಲಿಲ್ಲ. ಆದರೆ ಇನ್ನು ಹಾಗಾಗದು. ಮುಸ್ಲಿಮ್ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ನೊಂದಿಗಿದ್ದು, ಮುಸ್ಲಿಮರ ಭಾವನೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಅರ್ಥ ಮಾಡಿಕೊಳ್ಳಬೇಕು. ಚುನಾವಣೆ ಸಂದರ್ಭ ಮುಸ್ಲಿಮರಿಗೆ ಮೇಯರ್ ಸ್ಥಾನ ನೀಡಿದರೆ ಬಿಜೆಪಿಗರು ಅದನ್ನು ಚುನಾವಣಾ ಅಸ್ತ್ರವಾಗಿ ಬಳಸಬಹುದು ಎಂದು ಮಾತು ಪಕ್ಷದ ಹಿರಿಯ ನಾಯಕರಿಂದ ಬರಬಾರದು ಎಂಬ ಅಭಿಪ್ರಾಯ ಕೇಳಿ ಬಂತು.

ಮುಸ್ಲಿಮರು ಕಾಂಗ್ರೆಸ್ಸಿನ ಬೆನ್ನೆಲುಬು. ಆದರೆ ಸ್ಥಾನಮಾನ ಕೊಡುವಾಗ ಪ್ರತೀ ಸಾರಿಯೂ ಮುಸ್ಲಿಮರಿಗೆ ಅನ್ಯಾಯವಾಗುತ್ತಿದೆ. ಜಿಪಂ, ತಾಪಂ ಚುನಾವಣೆ ಯಲ್ಲಿ ಸ್ಪರ್ಧಿಸಲು ಟಿಕೆಟ್ ಪಡೆಯಲು ಕೂಡ ಹೋರಾಟ ಮಾಡುವ ಅನಿವಾರ್ಯತೆ ಉಂಟಾಗಿದೆ. ಹೋರಾಟದ ಬದಲು ಅರ್ಹವಾಗಿ ಟಿಕೆಟ್ ಅಥವಾ ಸ್ಥಾನ ಕೊಡಬೇಕು. ಮಂಗಳೂರು ಮಹಾನಗರ ಪಾಲಿಕೆಯ ಇತಿಹಾಸದಲ್ಲಿ ಕೇವಲ ನಾಲ್ಕು ಮಂದಿ ಮುಸ್ಲಿಮರಿಗೆ ಮಾತ್ರ ಮೇಯರ್ ಆಗಲು ಈವರೆಗೆ ಅವಕಾಶ ಸಿಕ್ಕಿದೆ. ಅದರಲ್ಲಿ ಗುಲ್ಝಾರ್ ಬಾನುಗೆ ಬಿಜೆಪಿ ಅವಧಿಯಲ್ಲಿ ಮೇಯರ್ ಸ್ಥಾನ ಸಿಕ್ಕಿದೆ. ಈ ಬಾರಿ ಮುಸ್ಲಿಮರಿಗೆ ಮೇಯರ್ ಸ್ಥಾನ ಕೊಡದಿದ್ದರೆ ಮುಂದಿನ ದಿನಗಳಲ್ಲಿ ಈ ಸ್ಥಾನ ಪಡೆಯಲು ಕಷ್ಟವಿದೆ. ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರು ನೀಡಿದ ಭರವಸೆಯನ್ನು ಈ ಬಾರಿ ಈಡೇರಿಸಬೇಕು ಎಂದು ಕಾರ್ಯಕರ್ತರು ಅಭಿಪ್ರಾಯಪಟ್ಟರು.

ಈ ಬಾರಿ ಮುಸ್ಲಿಮರಿಗೆ ಮೇಯರ್ ಸ್ಥಾನ ಸಿಗದಿದ್ದರೆ ಎಲ್ಲರೂ ಪಕ್ಷದ ಹುದ್ದೆಗಳಿಗೆ ಸಾಮೂಹಿಕ ರಾಜೀನಾಮೆ ಸಲ್ಲಿಸಲು, ಮುಸ್ಲಿಮ್ ನಾಯಕರ ನಿಯೋಗವೊಂದು ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಉಸ್ತುವಾರಿ ಸಚಿವ ರಮಾನಾಥ ರೈ, ಶಾಸಕರಾದ ಮೊಯ್ದಿನ್ ಬಾವ, ಜೆ.ಆರ್.ಲೋಬೊ ಅವರ ಬಳಿ ತೆರಳಿ ಹಕ್ಕು ಮಂಡಿಸಲು, ಸಚಿವ ಯು.ಟಿ. ಖಾದರ್ ಮೂಲಕ ಒತ್ತಡ ಹೇರಲು, ಮಾ. 5ರಂದು ಮತ್ತೊಂದು ಸಭೆ ಸೇರಲು, ಮೇಯರ್ ಸ್ಥಾನ ನೀಡದಿದ್ದರೆ ಚುನಾವಣೆ ಪೂರ್ವದಲ್ಲಿ ನಡೆಯುವ ಕಾರ್ಪೊರೇಟರ್ಗಳ ಸಭೆಗೆ ಮುತ್ತಿಗೆ ಹಾಕಲು ಸಭೆ ನಿರ್ಧರಿಸಿತು.

ಸಭೆಯಲ್ಲಿ ದ.ಕ. ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್, ದ.ಕ. ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಎನ್.ಎಸ್.ಕರೀಂ, ಕಾರ್ಪೊರೇಟರ್ ಅಬ್ದುರ್ರವೂಫ್, ಮಾಜಿ ಮೇಯರ್ಗಳಾದ ಗುಲ್ಝಾರ್ ಬಾನು, ಅಬ್ದುಲ್ ಅಝೀಝ್, ಮಾಜಿ ಉಪಮೇಯರ್ ಬಶೀರ್ ಬೈಕಂಪಾಡಿ, ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಲುಕ್ಮಾನ್ ಬಂಟ್ವಾಳ, ಪಕ್ಷದ ಮುಖಂಡರಾದ ಸುಹೈಲ್ ಕಂದಕ್, ಅಲ್ತಾಫ್, ಯು.ಕೆ. ಮೊಯ್ದಿನ್ ಮೋನು, ಅಬ್ದುಲ್ ಸತ್ತಾರ್ ಅಡ್ಯಾರ್, ಡಿ.ಎಂ.ಅಸ್ಲಂ, ಶರೀಫ್, ಹುಸೈನ್ ಕಾಟಿಪಳ್ಳ, ಅಬ್ದುಲ್ ಜಲೀಲ್ ಬದ್ರಿಯಾ ಮತ್ತಿತರರು ಉಪಸ್ಥಿತರಿದ್ದರು.

ಕೃಪೆ : ವಾಭಾ

Comments are closed.