
ಮಂಗಳೂರು : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ನ ಮಂಗಳೂರು ಘಟಕದ ಉದ್ಘಾಟನಾ ಸಮಾರಂಭ ಮಾರ್ಚ್ 7ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಸೋಮವಾರ ನಗರದ ಬಲ್ಲಾಲ್ಬಾಗ್ನ ಪತ್ತುಮುಡಿ ಸೌಧದಲ್ಲಿ ನಡೆಯಿತು.
ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ನಾಟಕ, ಸಿನಿಮಾ ನಿರ್ದೇಶಕ ದೇವದಾಸ್ ಕಾಪಿಕಾಡ್ ಅವರು,ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿಯವರಿಂದ ಯುವ ಸಮುದಾಯ ಯಕ್ಷಗಾನದತ್ತ ಆಕರ್ಷಿತರಾಗುತ್ತಿದ್ದಾರೆ. ಯಕ್ಷಗಾನ ಅಂದ್ರೆ ರೋಮಾಂಚನ . ಅದರ ಮೇಲೆ ಯುವಕರಿಗೆ ಇರುವ ವ್ಯಾಮೋಹ- ಆಸಕ್ತಿಯಿಂದ ಯಕ್ಷಗಾನ ಇಂದು ಪುನಶ್ಚೇತನ ಪಡೆಯುತ್ತಿದೆ ಎಂದು ಹೇಳಿದರು.
ಮೌನವಾಗಿದ್ದ ಯಕ್ಷಗಾನ ಕಲೆಗೆ ಹೊಸ ಸ್ಪರ್ಶವನ್ನು ಪಟ್ಲ ನೀಡಿದ್ದಾರೆ. ಪಟ್ಲರ ಭಾಗವತಿಕೆ ಯುವ ಸಮುದಾಯದಲ್ಲಿ ಅಮಲೇರುವಂತೆ ಮಾಡಿದೆ. ಯಕ್ಷಗಾನ ಕ್ಷೇತ್ರಕ್ಕೆ ಬಹಳಷ್ಟು ಮಂದಿ ಕೊಡುಗೆ ನೀಡಿದ್ದಾರೆ. ಪಟ್ಲ ಸತೀಶ್ ಶೆಟ್ಟಿ ಭಾಗವತಿಕೆಯಲ್ಲಿ ಯಶಸ್ಸನ್ನು ಸಾಧಿಸುವುದರ ಜತೆಗೆ ಅವರು ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಿಸಿ ಕಲಾವಿದರ ಸಮಸ್ಯೆ, ಸಂಕಷ್ಟಗಳಿಗೆ ಸ್ಪಂದಿಸುವುದು ಶ್ಲಾಘನೀಯ. ಒಳ್ಳೆಯ ಕೆಲಸಗಳನ್ನು ಮಾಡಿದಾಗ ಜನರು ಕೈ ಜೋಡಿಸುತ್ತಾರೆ ಎಂಬುದಕ್ಕೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಉದಾಹರಣೆಯಾಗಿದೆ ಎಂದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮುಂಬೈಯ ಉದ್ಯಮಿ ಕೆ.ಎಂ. ಶೆಟ್ಟಿ ಮದ್ಯಗುತ್ತು ಭಾಗವಹಿಸಿ ಪಟ್ಲ ಫೌಂಡೇಶನ್ ಟ್ರಸ್ಟ್ ಕಲಾವಿದರ ಬದುಕಿಗೆ ಆಸರೆಯಾಗಿ ಕೆಲಸ ಮಾಡುತ್ತಿದೆ ಎಂದರು.
ಸಮಾರಂಭದಲ್ಲಿ ಮಂಗಳೂರು ಘಟಕದ ಪ್ರಧಾನ ಸಂಚಾಲಕರಾದ ನಿಟ್ಟೆಗುತ್ತು ರವಿರಾಜ ಶೆಟ್ಟಿ, ನಿತ್ಯಾನಂದ ಶೆಟ್ಟಿ, ಕೇಂದ್ರೀಯ ಘಟಕದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್, ಕೋಶಾಧಿಕಾರಿ ಸಿ ಎ ಸುದೇಶ್ ಕುಮಾರ್ ರೈ, ಉಪಾಧ್ಯಕ್ಷ ಡಾ. ಮನುರಾವ್ , ಸಂಘಟನಾ ಕಾರ್ಯದರ್ಶಿಗಳಾದ ನವನೀತ ಶೆಟ್ಟಿ ಕದ್ರಿ , ಜಗನ್ನಾಥ ಶೆಟ್ಟಿ ಬಾಳ, ಜಗದೀಶ್ ಶೆಟ್ಟಿ ಕಾರ್ಸ್ಟ್ರೀಟ್ ಉಪಸ್ಥಿತರಿದ್ದರು.
ಚಂದ್ರಶೇಖರ ಶೆಟ್ಟಿ ಸಭೆಯಲ್ಲಿ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಮಂಗಳೂರು ಘಟಕದ ಅಧ್ಯಕ್ಷ ಪ್ರದೀಪ್ ಆಳ್ವ ಕದ್ರಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಎ. ಕೃಷ್ಣ ಶೆಟ್ಟಿ ತಾರೇಮಾರು ವಂದಿಸಿದರು. ದಯಾನಂದ ಕಟೀಲು ಕಾರ್ಯಕ್ರಮ ನಿರ್ವಹಿಸಿದರು.
ಇದೇ ವೇಳೆ ಜಯಶೀಲ ಅಡ್ಯಂತಾಯ ಮತ್ತು ಸುರೇಂದ್ರ ಕಂಬಳ ಕೇಂದ್ರೀಯ ಘಟಕದ ನೂತನ ಟ್ರಸ್ಟಿಗಳಾಗಿ ಆಯ್ಕೆಗೊಂಡರು.
Comments are closed.