ಕರಾವಳಿ

ಟಾರ್ಗೆಟ್ ಗ್ರೂಪ್ ಮುಖಂಡ ಇಲ್ಯಾಸ್ ಹತ್ಯೆ ಪ್ರಕರಣ :ಇಬ್ಬರು ಆರೋಪಿಗಳ ಬಂಧನ

Pinterest LinkedIn Tumblr

ಟಾರ್ಗೆಟ್ ಗ್ರೂಪ್ ಮುಖಂಡ ಇಲ್ಯಾಸ್

ಮಂಗಳೂರು, ಫಬ್ರವರಿ.9: ನಗರದ ಜಪ್ಪು ಕುಡ್ಪಾಡಿಯಲ್ಲಿ ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಟಾರ್ಗೆಟ್ ಗ್ರೂಪ್ ಮುಖಂಡ ಇಲ್ಯಾಸ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪಾಂಡೇಶ್ವರ ಠಾಣಾ ಹಾಗೂ ಮಂಗಳೂರು ಸಿಸಿಬಿ ಘಟಕದ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಉಳ್ಳಾಲ ಅಬ್ಬಕ್ಕ ವೃತ್ತದ ಬಳಿಯ ನಿವಾಸಿ ಮುಹಮ್ಮದ್ ಸಮೀರ್ ಯಾನೆ ಸಮೀರ್ ಯಾನೆ ರೋಬರ್ಟ್ (27) ಹಾಗೂ ಕಾಸರಗೋಡು ಜೆಲ್ಲೆಯ ಗೇರುಕಟ್ಟೆ ನಿವಾಸಿ ನಮೀರ್ ಹಂಝ (34) ಎಂದು ಗುರುತಿಸಲಾಗಿದೆ.

ಬಂಧಿತ ಸಮೀರ್ ಟಾರ್ಗಟ್ ಗ್ರೂಪ್ನ ಸುರ್ಮಾ ಇಮ್ರಾನ್ ಎಂಬಾತನ ಮೇಲೆ ಹಲ್ಲೆ ನಡೆಸಿದ ಪ್ರಕರಣ ಮತ್ತು ಟಾರ್ಗಟ್ ಗ್ರೂಪ್ನ ಹಂಝ ಎಂಬಾತನ ಮನೆಗೆ ಹಾನಿ ಮಾಡಿ, ಮನೆ ಮಂದಿಗೆ ಹಲ್ಲೆ ನಡೆಸಿರುವ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅದೇ ರೀತಿ ನಮೀರ್ ಹಂಝನ ಮೇಲೆ ಕೊಣಾಜೆ ಠಾಣೆಯಲ್ಲಿ ಒಂದು ಕೊಲೆ ಯತ್ನ, ಸುರತ್ಕಲ್ ಠಾಣೆಯಲ್ಲಿ ಒಂದು ದರೋಡೆ ಪ್ರಕರಣ, ಮಂಗಳೂರು ಉತ್ತರ ಠಾಣೆಯಲ್ಲಿ ದರೋಡೆ ಯತ್ನ ಪ್ರಕರಣ, ಉಳ್ಳಾಲ ಠಾಣೆಯಲ್ಲಿ ಕಿಡ್ಯಾಪ್ ಪ್ರಕರಣ ದಾಖಲಾಗಿದೆ.

ಜ.13ರಂದು ಬೆಳಗ್ಗೆ ಟಾರ್ಗೆಟ್ ಗ್ರೂಪ್ ಮುಖಂಡ ಇಲ್ಯಾಸ್ ಮನೆಯಾದ ಮಂಗಳೂರು ನಗರದ ಜಪ್ಪು ಕುಡ್ಪಾಡಿ ಜುಮಾ ಮಸೀದಿಯ ಹತ್ತಿರವಿರುವ ಮಿಫ್ತಾ ಅಪಾರ್ಟಮೆಂಟ್ ನೊಳಗೆ ನುಗ್ಗಿ ದುಷ್ಕರ್ಮಿಗಳು ಚೂರಿಯಿಂದ ಇರಿದು ಕೊಲೆಗೈದಿದ್ದರು. ಈ ಬಗ್ಗೆ ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Comments are closed.