ಕರಾವಳಿ

ಕದ್ರಿ ಫಲಪುಷ್ಪ ಪ್ರದರ್ಶನಕ್ಕೆ ಉತ್ತಮ ಸ್ಪಂದನೆ : 50ಸಾವಿರಕ್ಕೂ ಹೆಚ್ಚು ಮಂದಿಯಿಂದ ವೀಕ್ಷಣೆ

Pinterest LinkedIn Tumblr

ಮಂಗಳೂರು ಫೆಬ್ರವರಿ.7 : ತೋಟಗಾರಿಕೆ ಇಲಾಖೆ ವತಿಯಿಂದ ಫಲಪುಷ್ಪ ಪ್ರದರ್ಶನವನ್ನು ಜನವರಿ 26 ರಿಂದ ಕದ್ರಿ ಉದ್ಯಾನ ವನದಲ್ಲಿ ಆಯೋಜಿಸಲಾಗಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತ್ತಿರುತ್ತದೆ. ನಾಲ್ಕು ದಿನಗಳ ಫಲಪುಷ್ಪ ಪ್ರದರ್ಶನವನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ರವರಿಂದ ಉದ್ಘಾಟನೆಗೊಂಡಿರುತ್ತದೆ. ಸುಮಾರು 36 ಸಾವಿರ ವಯಸ್ಕರು ಹಾಗೂ 12 ಸಾವಿರ ಶಾಲಾ ಮಕ್ಕಳು ಸೇರಿದಂತೆ 50ಸಾವಿರಕ್ಕೂ ಹೆಚ್ಚು ಮಂದಿ ಈ ಫಲಪುಷ್ಪ ಪ್ರದರ್ಶನವನ್ನು ವೀಕ್ಷಣೆ ಮಾಡಿದ್ದಾರೆ.

ಫಲಪುಷ್ಪ ಪ್ರದರ್ಶನದಲ್ಲಿ ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ರೇಷ್ಮೆ ಇಲಾಖೆ, ವಾರ್ತಾ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ, ಆಯುಷ್ ಇಲಾಖೆ, ವಿವಿಧ ಯಂತ್ರೋಪಕರಣ ಕಂಪನಿಯ ಡೀಲರ್‍ಗಳು, ಹಾಗೂ ವಿವಿಧ ಸ್ತ್ರೀ ಶಕ್ತಿ ಸಂಘಟಣೆಯ ಮಳಿಗೆಗಳು ಮೆರಗು ನೀಡಿದವು. ಡಚ್ ಗುಲಾಬಿ, ಕಾರ್ನೇಷನ್ ಹಾಗೂ ಇತರೆ ವಿವಿಧ ಹೂವುಗಳಿಂದ ಅಲಂಕೃತವಾಗಿದ್ದ “ಮಂಗಳೂರು ಕ್ಲಾಕ್ ಟವರ್”ನ ಹೂವಿನ ಮಾದರಿ, ತಾರಸಿ ಹಾಗೂ ಕೈತೋಟ ಹಾಗೂ ವಿವಿಧ ಮಾದರಿಯ ಟೋಪಿಯಾರಿಗಳು ನೋಡುಗರ ಮನ ಸೆಳೆದು ಮೆಚ್ಚುಗೆ ಪಡೆಯಿತು.

ಫಲಪುಷ್ಪ ಪ್ರದರ್ಶನದಲ್ಲಿ ರೈತರು ಮತ್ತು ಖರೀದುದಾರರ ನಡುವೆ ವಿಚಾರ ವಿನಿಮಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ರೈತರ ಬೆಳೆಗಳಿಗೆ ಯೋಗ್ಯಬೆಲೆ ಸಿಗುವಂತಾಗಲು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು. ಚೇಂಬರ್ ಆಫ್ ಕಾಮರ್ಸ್‍ನ ಉಪಾಧ್ಯಕ್ಷರಾದ ಶ್ರೀ ಪಿ.ಬಿ. ಅಬ್ದುಲ್ ಹಮೀದ್ ರವರು ಸಂಪನ್ಮೂಲ ವ್ಯಕ್ತಿಗಳಾಗಿದ್ದರು.

ಫಲಪುಷ್ಪ ಪ್ರದರ್ಶನದ ಸಮಾರೋಪ ಸಮಾರಂಭವನ್ನು ಜನವರಿ 29 ರಂದು ಸಂಜೆ 6.30 ಕ್ಕೆ ಹಮ್ಮಿಕೊಳ್ಳಲಾಗಿತ್ತು. ಕಾರ್ಪೋರೇಟರ್, ಕದ್ರಿ ವಾರ್ಡ್, ಮಂಗಳೂರು, ರೂಪ ಡಿ ಬಂಗೇರ ಆಯುಕ್ತರು, ಮಂಗಳೂರು ಮಹಾನಗರ ಪಾಲಿಕೆ, ಮೊಹಮ್ಮದ್ ನಜೀರ್, ಡಾ. ಎಂ. ಆರ್. ರವಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ದ. ಕ.ಜಿಲ್ಲಾ ಪಂಚಾಯತ್, ಮಂಗಳೂರು ಹಾಗೂ ಅಧ್ಯಕ್ಷರು, ಸಿರಿ ತೋಟಗಾರಿಕೆ ಸಂಘ(ರಿ) ಹಾಗೂ ಸಿರಿ ತೋಟಗಾರಿಕೆ ಸಂಘದ ಉಪಾಧ್ಯಕ್ಷರು, ಖಜಾಂಚಿ, ಜೊತೆ ಕಾರ್ಯದರ್ಶಿ ಉಪಸ್ಥಿತರಿದ್ದರು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ . ಜಾನಕಿ ವಿ., ಸ್ವಾಗತಿಸಿದರು.

ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ತೋಟಗಾರಿಕೆಯಲ್ಲಿ ಉತ್ತಮ ಸಾಧನೆ ಮಾಡಿರುವ 5 ಪ್ರಗತಿಪರ ರೈತರನ್ನು ಗುರುತಿಸಿ ಸನ್ಮಾನಿಸಲಾಯಿತು.

ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಪಿ.ಬಿ. ಪ್ರಭಾಕರ ರೈ, ಸುಳ್ಯ ತಾಲೂಕಿನ ಉಬರಡ್ಕಮಿತ್ತೂರು ಗ್ರಾಮದ ವಸಂತಿ ಜನಾರ್ಧನ ಗೌಡ, ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಉದನೇಶ್ವರ ಭಟ್, ಬಂಟ್ವಾಳ ತಾಲೂಕಿನ ಇಟ್ಕಿದು ಗ್ರಾಮದ ಕೂಸಪ್ಪ ನಾಯ್ಕ, ಮಂಗಳೂರು ತಾಲೂಕಿನ ಕಿಲೆಂಜಾರು ಗ್ರಾಮದ ಮೋಂಟ ನಾಯ್ಕ ಇವರುಗಳಿಗೆ ಪ್ರಗತಿಪರ ರೈತರೆಂದು ಗುರುತಿಸಿಕೊಂಡಿರುತ್ತಾರೆ.

ಸನ್ಮಾನಿತರಿಗೆ ರೂ. 2000/- ನಗದು ಪುರಸ್ಕಾರ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು. ಫಲಪುಷ್ಪ ಪ್ರದರ್ಶನದಲ್ಲಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಂಡಿದ್ದು, ವಿಜೇತರಿಗೆ ಗಣ್ಯರಿಂದ ಬಹುಮಾನ ವಿತರಣೆ ಮಾಡಲಾಯಿತು.

ಸಭೆಯ ಅಧ್ಯಕ್ಷರಾದ ರೂಪ .ಡಿ. ಬಂಗೇರರವರು ಫಲಪುಷ್ಪ ಪ್ರದರ್ಶನದ ಯಶಸ್ವಿಗೆ ಕಾರಣರಾದ ಜಿಲ್ಲೆಯ ಜನತೆಗೆ ಕೃತಜ್ಞತೆ ಅರ್ಪಿಸಿದರು.

ಜೋ ಪ್ರದೀಪ್ ಡಿಸೋಜ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಿಲ್ಲಾ ಪಂಚಾಯತ್ ಮಂಗಳೂರು ರವರು ಧನ್ಯವಾದ ಸಮರ್ಪಿಸಿದರು. ಕೆ. ಪ್ರವೀಣ, ಸಹಾಯಕ ತೋಟಗಾರಿಕೆ ನಿರ್ದೇಶಕರು ಕಾರ್ಯಕ್ರಮವನ್ನು ನಿರೂಪಿಸಿದರು.

Comments are closed.