ಸಾಂದರ್ಭಿಕ ಚಿತ್ರ
ಹೊಸದಿಲ್ಲಿ : ಮಂಗಳೂರು ಸಮುದ್ರ ಪಾಲಾಗಲಿದೆ ಎಂಬ ಮಾಹಿತಿ ಇಡೀ ನಾಡನ್ನು ತಲ್ಲಣಗೊಳಿಸಿದೆ. ಹೌದು ಜಾಗತಿಕ ತಾಪಮಾನ ಏರಿಕೆಯಿಂದ ಸಮುದ್ರದ ನೀರಿನ ಮಟ್ಟ ಏರಿಕೆ ಯಾದರೆ ಭಾರತದಲ್ಲಿ ಮೊದಲು ಮುಳುಗುವ ನಗರವೆಂದರೆ ಅದು ಮಂಗಳೂರು!
ತಾಪಮಾನ ಏರಿಕೆಯಿಂದ ಅಂಟಾರ್ಟಿಕಾ ಮತ್ತು ಗ್ರೀನ್ ಲ್ಯಾಂಡ್ ನಲ್ಲಿರುವ ನೀರ್ಗಲ್ಲು ಕರಗಲು ಶುರುವಾಗಿದ್ದು, ಇದು ಹೀಗೆಯೇ ಮುಂದುವರಿದರೆ ಇಡೀ ಭೂಮಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ನಾಸಾ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.
ಜಾಗತಿಕ ತಾಪಮಾನ ಏರಿಕೆಯ ಪರಿಣಾಮದಿಂದಾಗಿ ಮೊದಲು ಮುಳುಗುವ ನಗರಗಳನ್ನು ಪತ್ತೆಹಚ್ಚುವುದಕ್ಕಾಗಿಯೇ ನಾಸಾ ಗ್ರೇಡಿಯಂಟ್ ಫಿಂಗರ್ಪ್ರಿಂಟ್ ಮ್ಯಾಪಿಂಗ್ (ಜಿಎಫ್ಎಂ) ಎಂಬ ಸಾಧನ ರೂಪಿಸಿದೆ. ಇದರಲ್ಲಿ ಜಗತ್ತಿನ ಪ್ರತಿ ಯೊಬ್ಬರು ತಮ್ಮ ತಮ್ಮ ನಗರಗಳ ಮುಳುಗಡೆ ಸ್ಥಿತಿ ಬಗ್ಗೆ ತಿಳಿದುಕೊಳ್ಳ ಬಹುದಾಗಿದೆ. ಇದನ್ನು ಸಂಶೋಧಿಸಿದ ತಂಡದಲ್ಲಿ ಭಾರತದ ವಿಜ್ಞಾನಿ ಡಾ| ಸುರೇಂದ್ರ ಅಧಿಕಾರಿ ಅವರೂ ಇದ್ದು, ನಗರಗಳಿಗೆ ಇರುವ ಅಪಾಯದ ಬಗ್ಗೆ ಸ್ವತಃ ಅವರೇ ಎಚ್ಚರಿಕೆ ನೀಡಿದ್ದಾರೆ.
ಅಂಟಾರ್ಟಿಕಾ ಮತ್ತು ಗ್ರೀನ್ ಲ್ಯಾಂಡ್ನಲ್ಲಿ ಹಿಮ ಕರಗಿದೊಡನೆಯೇ ಇಡೀ ಭೂಮಿಯಲ್ಲಿರುವ ಎಲ್ಲ ಕರಾವಳಿ ನಗರಗಳು ಒಮ್ಮೆಗೇ ಮುಳುಗುವುದಿಲ್ಲ. ಇದಕ್ಕೆ ಸ್ಥಳೀಯ ಸಂಗತಿಗಳೂ ಕಾರಣವಾಗುತ್ತವೆ. ಭಾರತದ ಲೆಕ್ಕಾಚಾರದಲ್ಲಿ ಸ್ಥಳೀಯವಾಗಿ ಸಮುದ್ರದ ಮಟ್ಟ ಹೆಚ್ಚಿರುವುದು ಮಂಗಳೂರಿ ನಲ್ಲೇ. ಇಲ್ಲಿನ ಸಮುದ್ರ ಮಟ್ಟ 1.598 ಎಂ.ಎಂ. ಇದೆ. ಅದೇ ಮುಂಬಯಿಯಲ್ಲಿ ಸ್ಥಳೀಯವಾಗಿ ಸಮುದ್ರದ ಮಟ್ಟ 1.526 ಎಂ.ಎಂ. ಇದೆ. ಹೀಗಾಗಿ ಮುಂಬಯಿಗಿಂತ ಮೊದಲು ಮಂಗಳೂರು ನೀರು ಪಾಲಾಗುತ್ತದೆ ಎಂಬುದು ಈ ತಂಡದ ತಜ್ಞರ ಮಾತು.
ಜತೆಗೆ ಅಂಟಾರ್ಟಿಕಾ ಇರಲಿ ಅಥವಾ ಗ್ರೀನ್ ಲ್ಯಾಂಡ್ ಇರಲಿ, ಇಲ್ಲಿನ ಹಿಮ ಕರಗುವುದರಿಂದ ಮಂಗಳೂರಿಗೆ ಅಪಾಯ ಖಾತ್ರಿ. ಆದರೆ ಅಂಟಾರ್ಟಿಕಾದ ಪಶ್ಚಿಮ ಭಾಗ ಮತ್ತು ಗ್ರೀನ್ ಲ್ಯಾಂಡ್ನ ದಕ್ಷಿಣ ಭಾಗದ ಹಿಮ ಪದರಗಳು ಕರಗಿದರೆ ಮಾತ್ರ ಇನ್ನೂ ಹೆಚ್ಚಿನ ಅಪಾಯ ಕಾದಿದೆ ಎಂಬುದು ಈ ಸಂಶೋಧನೆಯ ಸಾರಾಂಶ.
ತಾಪಮಾನ ಏರಿಕೆಯಿಂದಾಗಿ ಹಿಮ ಕರಗಿ ಸಮುದ್ರದ ನೀರಿನ ಮಟ್ಟ ಹೆಚ್ಚಾಗುತ್ತದೆ ಎಂಬುದು ಈಗಾಗಲೇ ಗೊತ್ತಿರುವ ಸತ್ಯ. ಅಂದರೆ ಇಡೀ ಭೂಮಿಯ ಶೇ. 75 ರಷ್ಟು ಶುದ್ಧ ನೀರಿನ ಮಂಜುಗಡ್ಡೆ ಸಾಂದ್ರೀಕರಿಸಿರುವುದು ಗ್ರೀನ್ ಲ್ಯಾಂಡ್ ಮತ್ತು ಅಂಟಾರ್ಟಿಕಾದಲ್ಲೇ. ಈ ಹಿಮ ಈಗಾಗಲೇ ಕರಗಲು ಶುರುವಾಗಿದ್ದು ನಿಧಾನ ಗತಿಯಲ್ಲಿ ಸಮುದ್ರದ ನೀರೂ ಹೆಚ್ಚುತ್ತಿದೆ. ಆದರೆ ಗ್ರೀನ್ ಲ್ಯಾಂಡ್ ನಲ್ಲಿರುವ ಹಿಮ ಕರಗಿದರೆ ಯಾವ ಭಾಗ ಮುಳುಗುತ್ತದೆ ಅಥವಾ ಅಂಟಾರ್ಟಿಕಾ ದಲ್ಲಿರುವ ಹಿಮ ಕರಗಿದರೆ ಯಾವ ನಗರ ಗಳು ಮೊದಲು ಮುಳುಗುತ್ತವೆ ಎಂಬುದನ್ನು ಈ ಜಿಎಫ್ಎಂ ಸಾಧನ ತಿಳಿಸುತ್ತದೆ.
ವರದಿ ಕೃಪೆ : ಉದಯವಾಣಿ
Comments are closed.