ಕರಾವಳಿ

ಜಾಗೃತ ಸಮಾಜದಿಂದ ಭ್ರಷ್ಟಾಚಾರ ತಡೆ- ಜಿಲ್ಲಾ ಸತ್ರ ನ್ಯಾಯಾಧೀಶರು

Pinterest LinkedIn Tumblr

ಉಡುಪಿ: ಸಾರ್ವಜನಿಕರಿಗೆ ನ್ಯಾಯಬದ್ಧ ಸೇವೆ ದೊರೆಯಬೇಕಾದರೆ ಭ್ರಷ್ಟಾಚಾರದಂತಹ ಅನಿಷ್ಟವನ್ನು ಹೋಗಲಾಡಿಸಬೇಕು. ಸರ್ಕಾರಿ ನೌಕರರು ಹಾಗೂ ಸಾರ್ವಜನಿಕ ಅಧಿಕಾರಿಗಳು ಮಾಡುವ ಕೆಲಸಕ್ಕೆ ಮೀರಿ ವೇತನ ಬಯಸದೇ ಕರ್ತವ್ಯವನ್ನು ನಿರ್ವಹಿಸಬೇಕೆಂದು ಗೌರವಾನ್ವಿತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ವೆಂಕಟೇಶ್ ನಾಯ್ಕ .ಟಿ ಅವರು ಹೇಳಿದರು.
ಅವರಿಂದು ಎಂಜಿ‌ಎಂ ಕಾಲೇಜಿನ ರವೀಂದ್ರ ಮಂಟಪ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ(ರಿ), ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಭ್ರಷ್ಟಾಚಾರ ನಿಗ್ರಹ ದಳ, ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಭ್ರಷ್ಟಾಚಾರ ವಿರುದ್ಧ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಸಾರ್ವಜನಿಕ ಆಡಳಿತದ ಎಲ್ಲ ಕ್ಷೇತ್ರಗಳಲ್ಲಿ ಭ್ರಷ್ಟಾಚಾರವನ್ನು ತೊಲಗಿಸಿ ಉತ್ತಮ ಆಡಳಿತಕ್ಕಾಗಿ ಪಾರದರ್ಶಕ ನೀತಿಗಳನ್ನು ರೂಪಿಸಿ ಪರಿಣಾಮಕಾರಿಯಾಗಿ ಜಾರಿಗೊಳಿಸಲು 30-10-2017ರಿಂದ 4-11-2017ರವರೆಗೆ ಜಾಗೃತಿ ಅರಿವು ಸಪ್ತಾಹ ವನ್ನು ಕೇಂದ್ರ ವಿಚಕ್ಷಣಾ ಆಯೋಗ ಹಮ್ಮಿಕೊಂಡಿದೆ. ಈ ವರ್ಷದ ಜಾಗೃತಿ ಅರಿವು ಸಪ್ತಾಹದ ವಿಷಯ ಮೈ ವಿಷನ್- ಕರಪ್ಷನ್ ಫ್ರೀ ಇಂಡಿಯಾ ಆಗಿದೆ. ಭ್ರಷ್ಟಾಚಾರಕ್ಕೆ ಹಲವು ಮುಖಗಳಿದ್ದು, ಸರ್ಕಾರಿ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ನಿರ್ಮೂಲನೆಗೆ ಸಾಕಷ್ಟು ಕಾನೂನುಗಳನ್ನು ರೂಪಿಸಲಾಗಿದೆ. ಕಾನೂನು ಅನುಷ್ಠಾನಕ್ಕೆ ಎಲ್ಲರ ಸಹಕಾರ ಅಗತ್ಯವಿದ್ದು,ಕಠಿಣ ಶಿಕ್ಷೆ ಜೊತೆಗೆ ಜಾಗೃತಿಯೂ ಅತ್ಯಗತ್ಯ ಎಂದರು. ಈ ಸಂಬಂಧ ರೂಪಿಸಿರುವ ಕಾನೂನುಗಳ ಬಗ್ಗೆ ನ್ಯಾಯಾಧೀಶರು ಸವಿವರ ಮಾಹಿತಿಯನ್ನು ನೀಡಿದರು. ಇದೇ ಸಂದರ್ಭದಲ್ಲಿ ಪ್ರತಿಜ್ಞಾ ವಿಧಿ ಪ್ರಮಾಣವಚನವನ್ನು ನ್ಯಾಯಾಧೀಶರು ಬೋಧಿಸಿದರು.
ಸಾರ್ವಜನಿಕರ ಸೇವೆಗಾಗಿ ಮಾಡುವ ಕರ್ತವ್ಯದಲ್ಲಿ ಪ್ರತಿಫಲ ಬಯಸಿದರೆ ಅದು ಕಾನೂನು ವಿರುದ್ಧ್ಧ ಹಾಗೂ ಭ್ರಷ್ಟಾಚಾರ ಎನಿಸಿಕೊಳ್ಳುತ್ತದೆ. ಸಾರ್ವಜನಿಕ ಜಾಗೃತಿಯಿಂದ ಮಾತ್ರ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯ; ಲಂಚ ಕೇಳುವುದರ ಜೊತೆಗೆ ಕೊಡುವುದು ಅಪರಾಧ. ಜಾಗೃತ ನಾಗರೀಕರು ಮಾತ್ರ ವ್ಯವಸ್ಥೆಯನ್ನು ಬದಲಿಸಬಹುದು. ಸಕಾಲದಂತಹ ಉತ್ತಮ ಯೋಜನೆಗಳು, ಆನ್‌ಲೈನ್, ಡಿಜಿಟಲೈಸೇಷನ್‌ಗೆ ಒತ್ತು ನೀಡುವುದರಿಂದ ಕರ್ತವ್ಯ ವಿಳಂಬ, ಕಾರಣ ಹೇಳುವುದಕ್ಕೆ ಕಡಿವಾಣ ಬೀಳಲಿದೆ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರು ಹೇಳಿದರು.

ಭ್ರಷ್ಟಚಾರ ಹುಟ್ಟಿನಿಂದಲೇ ಬರುವುದಿಲ್ಲ; ಅದು ಅಭ್ಯಾಸ ಇದಕ್ಕೆ ಪೂರಕ, ಪ್ರೇರಕ ಕಾರಣಗಳು ಹಲವು. ಜನರು ನೆರವಾದರೆ ಮಾತ್ರ ಭ್ರಷ್ಟಾಚಾರ ಕಡಿಮೆಯಾಗಲು ಸಾಧ್ಯ ಎಂದರು. ಇಂತಹ ಸನ್ನಿವೇಶಗಳು ಕಂಡು ಬಂದರೆ ಪೊಲೀಸ್ ನಿಗ್ರಹ ದಳಕ್ಕೆ ದೂರು ಸಲ್ಲಿಸಬಹುದೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಎಂ. ಪಾಟೀಲ್ ಹೇಳಿದರು.

ವಿಷಯ ಜ್ಞಾನ ಇಲ್ಲದೇ ಹೋದರೆ ಪ್ರತಿಯೊಬ್ಬರು ಅನ್ಯಾಯಕ್ಕೆ ಒಳಗಾಗುತ್ತೇವೆ. ಭ್ರಷ್ಟಾಚಾರದ ಕುರಿತು ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ. ಭ್ರಷ್ಟಾಚಾರದಿಂದ ಸಮಾಜದಲ್ಲಿ ಅನ್ಯಾಯ, ಅಸಮಾನತೆ, ಸಂಪತ್ತಿನ ಸೋರುವಿಕೆ ಮುಂತಾದ ತೊಂದರೆಗಳು ಎದುರಾಗುತ್ತವೆ. ಬದಲಾಗಿ ಎಲ್ಲರಲ್ಲೂ ವ್ಯಕ್ತಿತ್ವಕ್ಕೆ ಬೆಲೆ ನೀಡುವಂತಹ ಮನಸ್ಥಿತಿ ಬೆಳೆಯಬೇಕಾಗಿದೆ ಎಂದು ಸಂಪನ್ಮೂಲ ವ್ಯಕ್ತಿಯಾದ ಸಾಮಾಜಿಕ ಕಾರ್ಯಕರ್ತೆ ಜಯಶ್ರೀ ಭಟ್ ಹೇಳಿದರು.

ಕಾರ್ಯಕ್ರಮದಲ್ಲಿ ಎಂಜಿ‌ಎಮ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಂಧ್ಯಾ.ಆರ್.ನಂಬಿಯಾರ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮಾಲತಿದೇವಿ, ಅಡಿಷನಲ್ ಎಸ್ ಪಿ ಕುಮಾರ್ ಚಂದ್ರ, ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಲತಾ, ವಕೀಲರ ಸಂಘದ ಅಧ್ಯಕ್ಷರಾದ ರತ್ನಾಕರ ಶೆಟ್ಟಿ, ಭ್ರಷ್ಟಾಚಾರ ನಿಗ್ರಹ ದಳದ ಅಧೀಕ್ಷಕರಾದ ಶುತಿ ಎನ್.ಎಸ್. ಉಪಸ್ಥಿತರಿದ್ದರು.

Comments are closed.