ಉಡುಪಿ: ನನ್ನ ಸಮಾಜಸೇವೆ ಸಾಕಸ್ಟು ನೊಂದವರಿಗೆ ತಲುಪಿದ ಬಗ್ಗೆ ನನಗೇ ತೃಪ್ತಿಯಾಗಿಲ್ಲದಿರುವಾಗ, ನಾನು ಯಾರಿಗಾಗಿ ಹೋರಾಟ ಮಾಡುತಿದ್ದೇನೋ ಅವರಲ್ಲಿ ಸಾಕಸ್ಟು ಮಂದಿಗೆ ಇನ್ನೂ ನ್ಯಾಯಸಿಗದಿರುವಾಗ, ದೌರ್ಜನ್ಯಕ್ಕೆ ಒಳಗಾದ ನೂರಾರು ಹಿರಿಯನಾಗರಿಕರು ನನ್ನ ಮುಂದೆ ಪ್ರತಿನಿತ್ಯ ಕಣ್ಣೀರಿಡುವಾಗ ಯಾವ ಪುರುಷಾರ್ಥಕ್ಕಾಗಿ ನಾನೀ ಪ್ರಶಸ್ತಿಯನ್ನು ಸ್ವೀಕರಿಸಲಿ ಎಂದು ಉಡುಪಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ. ರವೀಂದ್ರನಾಥ ಶಾನುಭಾಗ್ ಹೇಳಿದ್ದಾರೆ.
ಈ ಕುರಿತು ಹಿರಿಯ ಅಧಿಕಾರಿಗಳಿಗೆ ಹಾಗೂ ಮಂತ್ರಿಗಳಿಗೆ ಪತ್ರ ಬರೆದಲ್ಲಿ ಉತ್ತರಿಸುವ ಸೌಜನ್ಯವೂ ಅವರಿಗಿಲ್ಲ. ಇನ್ನೂ ಹಲವಾರು ಮಂದಿ ನ್ಯಾಯಾಲಯದ ಆದೇಶ ಹಿಡಿದುಕೊಂಡು ಇಲಾಖೆಯಿಂದ ಇಲಾಖೆಗೆ ಸುತ್ತಾಡುತಿದ್ದಾರೆ. ಎಂಟು ಜನ ಹಿರಿಯ ನಾಗರೀಕರು ನ್ಯಾಯ ಸಿಗುವ ಮೊದಲೇ ಸತ್ತು ಹೋಗಿದ್ದಾರೆ. ಪ್ರಶಸ್ತಿ ಸ್ವೀಕರಿಸಿದರೆ ನಾನು ಅವರ ಆತ್ಮಗಳಿಗೆ ಅವಮಾನ ಮಾಡಿದಂತಾಗುತ್ತದೆ ಎಂದಿದ್ದಾರೆ.
ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಎಂಬುದು ಲೇಖಕರಿಗೆ, ಕ್ರೀಡಾಳುಗಳಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾರ್ಥಕ ಸೇವೆಮಾಡಿರುವ ಸಾಧಕರನ್ನು ಗುರುತಿಸಿ ಸರಕಾರ ನೀಡುವ ಗೌರವ ಎಂದು ನಾನು ಅರ್ಥ ಮಾಡಿಕೊಂಡಿದ್ದೇನೆ. ಸಮಾಜಸೇವೆ ವಿಭಾಗದಲ್ಲಿ ಈ ಪ್ರಶತ್ತಿಗಾಗಿ ನನನ್ನು ಗುರುತಿಸಿರುವ ರಾಜ್ಯ ಸರಕಾರಕ್ಕೆ ನಾನು ಆಭಾರಿಯಾಗಿದ್ದೇನೆ.
ನಾನು ಎಷ್ಟು ಸಮಾಜಸೇವೆ ಮಾಡಿದ್ದೇನೆ ಎಂಬುದು ಮುಖ್ಯವಲ್ಲ. ಇದರಿಂದ ಎಷ್ಟು ಜನರಿಗೆ ನ್ಯಾಯ ಸಿಕ್ಕಿದೆ ಎಂಬುದೇ ಮುಖ್ಯ. ರಾಜ್ಯಾದ್ಯಂತದಿಂದ ಹಿರಿಯ ನಾಗರೀಕರು ನೂರಾರು ಸಂಖ್ಯೆಯಲ್ಲಿ ನನ್ನ ಬಳಿ ಬರುತ್ತಾ ಇದ್ದಾರೆ. ಕೈಹಿಡಿದು ಕಣ್ಣೀರಿಡುತ್ತಿದ್ದಾರೆ. ಸರ್ಕಾರ ಹಿರಿಯ ನಾಗರೀಕರ ಕಾನೂನನ್ನು ಪಾಲಿಸದೆ ಗಾಳಿಗೆ ತೂರಿದೆ ಯಾರಿಗಾಗಿ, ನಾನು ಕಾರ್ಯಚರಿಸಿರುವ ಬಗ್ಗೆ ನನಗೇ ತೃಪ್ತಿಯಾಗಿದ್ದಿರುವಾಗ ಏತಕ್ಕಾಗಿ ಈ ಪ್ರಶಸ್ತಿ ಸ್ವೀಕಾರ ಮಾಡಲಿ? ಎಂದು ಶಾನುಭಾಗ್ ಪ್ರಶ್ನಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ಹಾಗೂ ಬೀರೂರಿನ ಮುನ್ನೂರಕ್ಕೂ ಹೆಚ್ಚಿನ ಅಂಗನವಾಡಿ ಶಿಕ್ಷಕಿಯರು ತಮ್ಮ ಯಾವುದೇ ತಪ್ಪುಇಲ್ಲದೆ, ಎಲ್.ಐ.ಸಿ.ಯಿಂದ ಮೋಸಹೋಗಿ ಲಕ್ಷಾಂತರ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ ಇದೀಗ ಆತ್ಮ ಹತ್ಯ ಮಾಡಿಕೊಳ್ಳುವ ಹಂತ ತಲುಪಿದ್ದಾರೆ. ಪೋಲಿಸ್ ಹಾಗೂ ಉನ್ನತ ಸರಕಾರಿ ಅಧಿಕಾರಿಗಳಿಗೆ ಪತ್ರ ಬರೆದಿದ್ದರೂ ಯಾವ ಸ್ಪಂದನೆಯೂ ಇಲ್ಲವಾಗಿದೆ.
ಕರಾವಳಿಯ ಮೂರು ಜಿಲ್ಲೆಯಲ್ಲಿ ಸುಮಾರು ಎಂಟು ಸಾವಿರದಸ್ಟು ಸಂಖ್ಯೆಯಯಲ್ಲಿ ಎಂಡೋಸಲ್ಫಾನ್ ಪೀಡಿತರಲ್ಲಿ ಇನ್ನೂ ಹಲವಾರು ಸಂತ್ರತ್ತರು ನ್ಯಾಯವಾಗಿ ಪಡೆಯಬೇಕಾದ ನೆರವನ್ನು ಪಡೆಯುತ್ತಿಲ್ಲ. ಉಡುಪಿ ಜಿಲ್ಲಾ ಅರೋಗ್ಯ ಇಲಾಖೆಯಿಂದ ಕುಂದಾಪುರ ತಾಲೂಕಿನ ನೂರಾರು ಮಕ್ಕಳಿಗೆ ಮಾಶಸನ ಸಿಗುವುದು ಬಿಡಿ, ಇನ್ನೂ ಅವರ ನೋಂದಣಿ ಕೂಡಾ ಆಗಿಲ್ಲ. ಉಡುಪಿ ಜಿಲ್ಲೆಯಲ್ಲಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಡೇ ಕೇರ್ ಸೆಂಟರ್, ಶಾಶ್ವತ ವಸತಿನಿಲಯದ ನಿರ್ಮಾಣವಾಗಿಲ್ಲ. ಈ ಕುರಿತು ನೋವು ಸಂಕಸ್ಟ ತಡೆಯಲಾಗದೆ ಆತ್ಮ ಹತ್ಯೆ ಮಾಡಿಕೊಂಡ ಎಳೆಯ ಮಕ್ಕಳನ್ನು ನಾನು ಅಸಹಾಯಕನಾಗಿ ನೋಡಬೇಕಾಯಿತು. ಪ್ರತಿನಿತ್ಯ ಹೆಣ್ಣುಮಕ್ಕಳ ಮಾನವಕಳ್ಳಸಾಗಣೆ ನಡೆಯುತ್ತಿದೆ. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಡಾ. ಜಗದೀಶ್ ಎನ್ನುವವರಿಗೆ ಪತ್ರಗಳ ಸರಮಾಲೆ ಬರೆದು ವರ್ಷ ಕಳೆಯಿತು. ಉತ್ತರವೂ ಇಲ್ಲ, ವ್ಯಯುಕ್ತವಾಗಿ ಭೇಟಿಯಾಗಿ ವಿವರಿಸಿದಾಗ ವಿಚಾರವನ್ನು ತಿಳಿದುಕೊಳ್ಳುವ ಕನಿಷ್ಟ ಸೌಜನ್ಯವೂ ಈ ಅಧಿಕಾರಿಗಳಿಗಿಲ್ಲ. ಸಮಸ್ಯೆಯೂ ಪರಿಹಾರವಾಗಿಲ್ಲ. ಅನಾಧಿಕೃತ ಎಜಂಟ್ಗಳ ಕಾರ್ಯಾಚರಣೆ ಇನ್ನೂ ನಡೆಯುತಿದೆ ಹೆಣ್ಣುಮಕ್ಕಳ ಮಾನವಕಳ್ಳಸಾಗಣೆಯ ವ್ಯವಹಾರ ಅವ್ಯಾಹತವಾಗಿ ಇನ್ನೂ ನಡೆಯುತ್ತಿದೆ.
ನಾಗರಿಕರೊಂದಿಗೆ ಹೇಗೆ ಮಾತನಾಡಬೇಕು ಎಂದೂ ತಿಳಿಯದ ಇಂತಹ ಅಧಿಕಾರಿಗಳಿರುವಾಗ ನಮ್ಮಂತಹ ಸಾಮಾಜಿಕ ಕಾರ್ಯಕರ್ತರು ಹೇಗೆ ಕೆಲಸಮಾಡಬೇಕು ? ಯಾರಿಗಾಗಿ ಏಕೆ ಅವಮಾನಿಸಿಕೊಳ್ಳಬೇಕು ? ಎಂಡೋಸಲ್ಫಾನ್ ಪೀಡಿತರು ಬೀದಿಯಲ್ಲಿ ಭಿಕ್ಷೆ ಬೇಡುತ್ತಿರುವಾಗ ಹಾಗೂ ಹಿರಿಯ ನಾಗರೀಕರು ಪ್ರತಿನಿತ್ಯ ಕಣ್ಣೀರಿಡುತ್ತಿರುವಾಗ ನಾನು ಈ ಪ್ರಶಸ್ತಿ ಸ್ವೀಕರಿಸಿದರೆ ಸಂತ್ರಸ್ತರ ಮುಖದಲ್ಲಿ ನಗು ಕಾಣಲು ಸಾಧ್ಯವೇ ?
ಸಾಗರದಲ್ಲಿ ಒಂದೂವರೆ ಸಾವಿರ ಎಕ್ರೆ ಕಾಡನ್ನು ಕೃಷಿ ವಿಶ್ವವಿದ್ಯಾನಿಲಯಕ್ಕೆ ನಾಶ ಮಾಡುತ್ತಿದ್ದಾರೆ. ಶಾಲಾ ಕಾಲೇಜು ಮಕ್ಕಳಿಗಾಗಿ ಕಾಳಜಿ ಅಲ್ಲಿನ ಜನ ಪ್ರತಿನಿಧಿಗಳಿಗಿಲ್ಲ ಇಂತದ್ದೆಲ್ಲ ಘಟನೆ ಕಣ್ಣಮುಂದೆ ನಡೆಯುತ್ತಿರುವಾಗ ನಾನು ಪ್ರಶಸ್ತಿ ಸ್ವೀಕರಿಸುವುದರಲ್ಲಿ ಏನು ಅರ್ಥವಿದೆ ?
ಯಾವ ಪ್ರಶಸ್ತಿಯೂ ಇಲ್ಲದೆ ಸಂತ್ರಸ್ಥರ ಕಣ್ಣೀರೊರೆಸುವ ಕೆಲಸದಲ್ಲೇ ನಾನು ಪ್ರಶಸ್ತಿಯ ಖುಷಿಯನ್ನು ಪಡೆಯುತ್ತೇನೆ ಎಂದಿದ್ದಾರೆ.
ಪ್ರಚಾರದ ಅಗತ್ಯವಿಲ್ಲ: ನನಗೆ ಪ್ರಶಸ್ತಿ ತಿರಸ್ಕಾರ ಮಾಡುವ ಮೂಲಕ ಭಾರೀ ಪ್ರಚಾರ ಸಿಗುತ್ತದೆ ಎಂಬ ಉದ್ದೇಶವಂತೂ ಇಲ್ಲವೇ ಇಲ್ಲ. ಹೆಸರು ಮಾಡಬೇಕೆಂಬ ಅಗತ್ಯವೂ ನನಗಿಲ್ಲ. ಪ್ರಶಸ್ತಿಯ ಬಗ್ಗೆ ಅಥವಾ ಈ ವ್ಯವಸ್ತೆಯ ಬಗ್ಗೆ ನನಗೆ ಯಾವ ಅಸಮಧಾನವೂ ಇಲ್ಲ-ಅಗೌರವವೂ ಇಲ್ಲ. ನನ್ನ ಈ ಸಣ್ಣ ಕಾರ್ಯ ವಿಧಾನದಿಂದಾದರೂ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಜ್ಞಾನೋದಯ ಆದ್ರೆ ಆಗಲಿ. ಜಾಗೃತಿ ಮೂಡಿದ್ರೆ ಮೂಡಲಿ ಎನ್ನೋದು ನನ್ನ ಆಶಯ ಎಂದು ಅವರು ಹೇಳೀದ್ದಾರೆ.