ಕರಾವಳಿ

ಬುದ್ಧಿಶಕ್ತಿ ಹೆಚ್ಚಿಸುವುದಾಗಿ ಅಮಾಯಕರಿಗೆ ವಂಚನೆ – “ಎಫಿಶಿಯೆಂಟ್ ಬ್ರೇನಿ” ಸಂಸ್ಥೆಯ ವಿರುದ್ಧ ಅ.30ರಿಂದ ಜನಜಾಗೃತಿ ಜಾಥಾ

Pinterest LinkedIn Tumblr

ಮಂಗಳೂರು, ಅಕ್ಟೋಬರ್.21: ಮಕ್ಕಳಿಗೆ ಬುದ್ಧಿಶಕ್ತಿ ಹೆಚ್ಚಿಸುವುದಾಗಿ ತರಬೇತಿ ನೀಡಿ ಅಮಾಯಕ ಮಕ್ಕಳು ಮತ್ತು ಹೆತ್ತವರನ್ನು ಬೆಳಗಾವಿ ಮೂಲದ ‘ಎಫಿಶಿಯೆಂಟ್ ಬ್ರೇನಿ’ ಎಂಬ ಸಂಸ್ಥೆಯು ವಂಚಿಸುತ್ತಿದೆ. ಈ ಮೋಸದ ಜಾಲದ ವಿರುದ್ಧ ಸಾರ್ವಜನಿಕರಲ್ಲಿ ಜನಜಾಗೃತಿ ಮೂಡಿಸುವ ಸಲುವಾಗಿ ಅ.30ರಿಂದ ಜಾಥಾ ಮಾಡುವುದಾಗಿ ರಾಷ್ಟ್ರೀಯ ವಿಚಾರವಾದಿಗಳ ಸಂಘಟನೆಯ ಅಧ್ಯಕ್ಷ ಪ್ರೊ.ನರೇಂದ್ರ ನಾಯಕ್ ಹೇಳಿದ್ದಾರೆ.

ಶನಿವಾರ ನಗರದ ಹೊಟೇಲೊಂದರಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಈ ಸಂಸ್ಥೆಯು ಸುಮಾರು 100 ಶಾಖೆಗಳನ್ನು ಹೊಂದಿದ್ದು, ಮಕ್ಕಳ ಬುದ್ಧಿಶಕ್ತಿ ಹೆಚ್ಚಿಸುವುದಾಗಿ ಪ್ರತಿಯೊಬ್ಬ ವಿದ್ಯಾರ್ಥಿಯಿಂದ 10ರಿಂದ 12 ಸಾವಿರ ರೂ. ವಸೂಲಿ ಮಾಡುತ್ತಿದೆ. ಹೆಚ್ಚಿನ ಪೋಷಕರಿಗೆ ಇದರ ಬಗ್ಗೆ ಅರಿವು ಇರುವುದಿಲ್ಲ. ಈ ಸಂಸ್ಥೆಯ ಬಗ್ಗೆ ಮಾಹಿತಿ ಬಂದ ತಕ್ಷಣ ನಾವು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದೇವೆ. ಅದರಂತೆ ಜಿಲ್ಲಾಧಿಕಾರಿ ಪುತ್ತೂರು ಶಿಕ್ಷಣಾಧಿಕಾರಿಗೆ ವರದಿ ಸಲ್ಲಿಸಲು ಆದೇಶಿಸಿದ್ದಾರೆ.

ಶಿಕ್ಷಣಾಧಿಕಾರಿ ಕೂಡ ಈ ಬಗ್ಗೆ ಸಮಿತಿ ರಚಿಸಿದ್ದು, ಸಮಿತಿ ನಡೆಸಿದ ಸತ್ಯಶೋಧನಾ ವರದಿಯಲ್ಲಿ ಇದೊಂದು ಬೋಗಸ್ ಸಂಸ್ಥೆ ಎಂದು ತಿಳಿಸಲಾಗಿದೆ. ಹಾಗಾಗಿ ಅ.30ರಿಂದ ‘ಮಾನವ ಬಂಧುತ್ವ ವೇದಿಕೆ’ ಮೂಲಕ ಮಂಗಳೂರು, ತರೀಕೆರೆ, ಶಿವಮೊಗ್ಗ, ಶಿಗ್ಗಾಂವ್, ಗೋಕಾಕ್, ಬೆಳಗಾವಿಗೆ ಜಾಥಾ ನಡೆಸಿ ಜಾಗೃತಿ ಮೂಡಿಸಲಾಗುವುದು ಎಂದರು.

‘ನಿಮ್ಮ ಮಗು ಇತರರಿಂದ ಭಿನ್ನ ಮತ್ತು ವಿಶಿಷ್ಟ ವ್ಯಕ್ತಿಯಾಗಬೇಕೇ’ ಎಂಬ ಒಕ್ಕಣೆಯೊಂದಿಗೆ ಮಕ್ಕಳನ್ನು ಶೋಷಣೆಗೊಳಿಸುವ ಈ ಜಾಲವು ರಾಜ್ಯದಲ್ಲಿ ಮತ್ತೆ ಸಕ್ರಿಯವಾಗಿದೆ. ಪುತ್ತೂರಿನಲ್ಲಿರುವ ಈ ಸಂಸ್ಥೆಯು ‘ಜಗತ್ತಿನ ಶ್ರೇಷ್ಠವ್ಯಕ್ತಿಗಳನ್ನಾಗಿ ನೋಡಬಯಸುತ್ತೀರಾ’ ಎಂಬ ಒಕ್ಕಣೆಯೊಂದಿಗೆ ‘ಮಕ್ಕಳು ಕಣ್ಣಿಗೆ ಪಟ್ಟಿ ಧರಿಸಿ ಏನನ್ನೂ ಮಾಡಬಲ್ಲರು’ ಎಂಬ ಕಾರ್ಯಕ್ರಮ ಆಯೋಜಿಸಿತ್ತು. ಇದು ಮೋಸದ ಜಾಲವಾಗಿದ್ದು, ಈ ಮೂಲಕ ಮಕ್ಕಳ ಶೋಷಣೆಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ ಜಾಹೀರಾತು ಸ್ಥಾಯಿ ಸಮಿತಿಗೆ ದೂರು ನೀಡಲಾಗಿದೆ. ಮಕ್ಕಳ ಕಲ್ಯಾಣ ಸಮಿತಿ, ಜಿಲ್ಲಾಧಿಕಾರಿ ಹಾಗೂ ಶಿಕ್ಷಣ ಇಲಾಖೆಗೂ ದೂರು ನೀಡಲಾಗಿದೆ’ ಎಂದು ಹೇಳಿದರು.

‘ಮಿಡ್ಬ್ರೇನ್ ಆಯಕ್ಟಿವೇಶನ್’ (ಮಧ್ಯ ಮೆದಳನ್ನು ಸಕ್ರಿಯಗೊಳಿಸುವುದು) ಎಂಬ ಹೆಸರಿನಲ್ಲಿ 2 ವರ್ಷಗಳ ಹಿಂದೆಯೇ ದೇಶಾದ್ಯಂತ ಮೋಸದ ಜಾಲವೊಂದು ಸಕ್ರಿಯವಾಗಿತ್ತು. ಮಕ್ಕಳು ಕಣ್ಣಿಗೆ ಬಟ್ಟೆ ಕಟ್ಟಿದರೂ ಪುಸ್ತಕವನ್ನು ಓದಬಲ್ಲರು ಎಂಬುದಾಗಿ ಪೋಷಕರನ್ನು ನಂಬಿಸಿ ಮಕ್ಕಳನ್ನು ತಮ್ಮ ಮೋಸದ ಪ್ರಯೋಗಕ್ಕೆ ಗುರಿಯಾಗಿಸಿ ಶೋಷಣೆಯಾಗಿಸುತ್ತಿದ್ದ ಜಾಲವನ್ನು ರಾಷ್ಟ್ರಮಟ್ಟದಲ್ಲಿ ನಮ್ಮ ಸಂಘಟನೆ ಬೇಧಿಸಿತ್ತು. ಆ ಬಳಿಕ ಕೆಲ ಸಮಯದಿಂದ ಕಣ್ಮರೆಯಾಗಿದ್ದ ಈ ಜಾಲ ಮತ್ತೆ ಸಕ್ರಿಯವಾಗಿದೆ.

ನಿಮ್ಮ ಮಕ್ಕಳಲ್ಲಿನ ನಿಷ್ಕ್ರಿಯವಾಗಿರುವ ಮಧ್ಯದ ಮೆದುಳನ್ನು ಜಾಗೃತಗೊಳಿಸಿ ಅತಿ ಕ್ರಿಯಾಶೀಲ ಹಾಗೂ ಅತೀಂದ್ರಿಯ ಶಕ್ತಿ ಹೊಂದುವವರನ್ನಾಗಿ ಮಾಡುತ್ತೇವೆ. ಇದರಿಂದ ಸ್ಮರಣ ಶಕ್ತಿ, ಏಕಾಗ್ರತೆ, ಆತ್ಮಸ್ಥೈರ್ಯ ಬೆಳೆಸಲಾಗುತ್ತದೆ. ಪರೀಕ್ಷಾ ಭಯ ಹೋಗಲಾಡಿಸಿ ಆತ್ಮವಿಶ್ವಾಸ ತುಂಬಲಾಗುತ್ತದೆ. ಸಂಕೋಚ, ಏಕಾಂಗಿತನ, ಅತಿಯಾದ ಭಾವುಕತೆ, ಮಾನಸಿಕ ಒತ್ತಡಗಳನ್ನು ಹೋಗಲಾಡಿಸುತ್ತದೆ ಎಂದು ಈ ಸಂಸ್ಥೆ ಪ್ರಚುರಪಡಿಸಿದೆ.

ಮನೋವಿಜ್ಞಾನ, ಮನೋವೈದ್ಯಶಾಸ್ತ್ರ ಹಾಗೂ ಶಿಕ್ಷಣ ತಜ್ಞರು ಬುದ್ಧಿಮತ್ತೆಯನ್ನು ಅಥವಾ ಸ್ಮರಣ ಶಕ್ತಿಯನ್ನು ಹೆಚ್ಚಿಸಲು ಯಾವುದೇ ವಿಧಾನಗಳಿಲ್ಲ ಎಂದು ಒಪ್ಪಿಕೊಂಡಿದ್ದರೂ, ಹಣ ಮಾಡುವ ಉದ್ದೇಶದೊಂದಿಗೆ ಹೊಸ ಹೊಸ ವಿಧಾನಗಳೊಂದಿಗೆ ಮೋಸದ ಜಾಲವು ಹೊಸ ರೂಪದಲ್ಲಿ ಹುಟ್ಟಿಕೊಂಡಿದೆ. ಈ ಬಗ್ಗೆ ಪೋಷಕರು ಹಾಗೂ ಜನಸಾಮಾನ್ಯರು ಗಮನ ಹರಿಸಬೇಕು’ ಎಂದು ಪ್ರೊ. ನರೇಂದ್ರ ನಾಯಕ್ ಮನವಿ ಮಾಡಿದ್ದಾರೆ.

ವರದಿ ತರಿಸಿಕೊಂಡ ಜಿಲ್ಲಾಧಿಕಾರಿ:

ಸಂಸ್ಥೆಯ ವಿರುದ್ಧ ಸಲ್ಲಿಸಿದ ದೂರಿನಂತೆ ಜಿಲ್ಲಾಧಿಕಾರಿ ಅವರು ಡಿಡಿಪಿಐಗೆ ವರದಿ ತಯಾರಿಸಲು ಆದೇಶಿಸಿದ್ದರು. ಡಿಡಿಪಿಐಯ ಸೂಚನೆ ಮೇರೆಗೆ ಪುತ್ತೂರು ಬಿಇಒ ನೇತೃತ್ವದಲ್ಲಿ ರಾಜ್ಯ ವಿಜ್ಞಾನ ಪರಿಷತ್ನ ಹಾಲಿ ಅಧ್ಯಕ್ಷ ಅಬೂಬಕರ್ ಆರ್ಲಪದವು, ಮಾಜಿ ಅಧ್ಯಕ್ಷ ಕಡಮಜಲು ಸುಭಾಷ್ ರೈ, ಜಿಲ್ಲಾ ಕಾರ್ಯದರ್ಶಿ ಕರುಣಾಕರ ಎಚ್.ಎಸ್., ರಾಜ್ಯ ಸಮಿತಿಯ ಸದಸ್ಯ ಸತೀಶ್ ಭಟ್, ಮನೋರೋಗ ತಜ್ಞ ಡಾ. ಗಣೇಶ್ ಪ್ರಸಾದ್ ಮುದ್ರಾಜೆ, ಮ್ಯೂಝಿಕ್ ತಜ್ಞ ಜೂನಿಯರ್ ಶಂಕರ್ ಗಿಲಿಗಿಲಿ, ಮಕ್ಕಳ ಸಹಾಯವಾಣಿಯ ದೀಕ್ಷಿತ್, ಸುದ್ದಿ ಬಿಡುಗಡೆಯ ಸಂತೋಷ್ ಕುಮಾರ್, ಉಮೇಶ್ ಮಿತ್ತಡ್ಕ ಅವರನ್ನೊಳಗೊಂಡ ಸಮಿತಿ ರಚಿಸಿತ್ತು. ಈ ಸಮಿತಿಯು ಪುತ್ತೂರಿನ ‘ಎಫಿಶಿಯೆಂಟ್ ಬ್ರೇನಿ’ಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.

ಪ್ರತೀ ಶನಿವಾರ ಮತ್ತು ರವಿವಾರ ತಲಾ 1 ಗಂಟೆಯಂತೆ 51 ಗಂಟೆಯ ತರಬೇತಿ ನೀಡಲಾಗುತ್ತದೆ. ಸದ್ಯ ಈ ಸಂಸ್ಥೆಯಲ್ಲಿ 120 ಮಕ್ಕಳಿದ್ದಾರೆ. ಆರಂಭದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯಿಂದ 10 ಸಾವಿರ ರೂ. ಶುಲ್ಕ ಪಡೆಯುತ್ತಿದ್ದ ಈ ಸಂಸ್ಥೆಯು ಈಗ 12 ಸಾವಿರ ರೂ. ವಸೂಲಿ ಮಾಡುತ್ತಿವೆ. ಮಕ್ಕಳು ಮತ್ತು ಪೋಷಕರು ಈ ಬಗ್ಗೆ ಪೂರಕ ಹೇಳಿಕೆ ನೀಡಿದ್ದರೂ ಕಣ್ಣಿಗೆ ಕಟ್ಟುವ ಬೆಲ್ಟನ್ನು ಬಿಇಒ ಅವರಿಗೆ ಕಟ್ಟಿದಾಗ ಏನೂ ಕಾಣುವುದಿಲ್ಲ ಎಂದು ದೃಢೀಕರಿಸಿದ್ದರು.

ಪತ್ರಿಕಾಗೋಷ್ಠಿಯಲ್ಲಿ ಪೋಷಕರೊಬ್ಬರ ಹೇಳಿಕೆ:

ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ವಿದ್ಯಾರ್ಥಿಯೊಬ್ಬರ ಪೋಷಕ ಕೇಶವಮೂರ್ತಿ ಅವರು ಮಾತನಾಡಿ, ತರಬೇತಿಯ ಅವಧಿಯಲ್ಲಿ ಜಂಕ್ಫುಡ್, ಟಿ.ವಿ., ಮೊಬೈಲ್ನಿಂದ ದೂರವಿರುವ ಮಕ್ಕಳು ಬಳಿಕ ಎಂದಿನಂತೆ ಅದನ್ನು ಬಳಸುತ್ತಾರೆ. ಇದೊಂದು ವಂಚನಾ ಜಾಲವಾಗಿದೆ. ಇದರ ವಿರುದ್ಧ ಧ್ವನಿ ಎತ್ತಿದ್ದಕ್ಕೆ ನನಗೆ ಬೆದರಿಕೆ ಕರೆಯೂ ಬಂದಿದೆ. ಕೆಲವರು ಮಕ್ಕಳ ಹಿತದೃಷ್ಟಿಯಿಂದ ಚಿನ್ನದ ಬಳೆ ಮಾರಿದ ಉದಾಹರಣೆಯೂ ಇದೆ. ಇವರು ನಡೆಸುವ ಯಾವ ವ್ಯವಹಾರಕ್ಕೂ ದಾಖಲೆ ಇಲ್ಲ, ಹಣ ಪಡೆದುದಕ್ಕೆ ರಶೀದಿ ಇಲ್ಲ. ಈ ಸಂಸ್ಥೆಯು ಅಧಿಕೃತವಾಗಿ ಎಲ್ಲಿಯೂ ನೋಂದಣಿ ಆಗಿಲ್ಲ. ಶಿಕ್ಷಣ ಇಲಾಖೆಯಿಂದ ಮಾನ್ಯತೆಯನ್ನೂ ಪಡೆದಿಲ್ಲ ಎಂದು ಹೇಳಿದ್ದಾರೆ.

ವರದಿ ಕೃಪೆ : ವಾಭಾ

Comments are closed.