ಕರಾವಳಿ

ಶ್ರೀಮಂತ ವ್ಯಕ್ತಿಗಳ ದರೋಡೆಗೆ ಯತ್ನ : 7 ಮಂದಿ ಆಕಾಶಭವನ ಶರಣ್ ಸಹಚರರ ಬಂಧನ

Pinterest LinkedIn Tumblr

ಮಂಗಳೂರು, ಅಕ್ಟೋಬರ್. 20: ನಗರದ ಶ್ರೀಮಂತ ವ್ಯಕ್ತಿಗಳನ್ನು ದರೋಡೆ ಮಾಡಲು ಯತ್ನಿಸುತ್ತಿದ್ದ 7 ಮಂದಿ ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಕಾವೂರು ಕಾಪಿಗುಡ್ಡೆ ಆಕಾಶಭವನದ ಪ್ರೀತಂ ಪೂಜಾರಿ(23), ದೇವಿನಗರ ಕುಂಜತ್ಬೈಲ್ನ ಶಾಲ್ ಕುಮಾರ್ (23), ಮೂಡುಶೆಡ್ಡೆ ಎದುರುಪದವಿನ ದಿವಾಕರ (29), ತೊಕ್ಕೊಟ್ಟು ಕೃಷ್ಣನಗರದ ಪ್ರವಣ್ (25), ಯೆಯ್ಯೊಡಿ ಗುಂಡಳಿಕೆ ಮನೆ ನಿವಾಸಿ ಕಾರ್ತಿಕ್ (25),ದೇರೇಬೈಲ್ ಕೊಂಚಾಡಿಯ ಗೌತಮ್ ದೇವಾಡಿಗ (23), ಮೂಡುಶೆಡ್ಡೆಯ ವಿನೋದ್ ರಾಜ್ (21) ಎಂದು ಗುರುತಿಸಲಾಗಿದೆ.

ಮಂಗಳೂರು ನಗರದ ಬಿಜೈ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಸಮೀಪವಿರುವ ಬಿಗ್ ಬಜಾರ್ ಮುಂಭಾಗದ ಶ್ರವಣ್ ಬಾರ್ ಎದುರು ಎದುರು 2-3 ಬೈಕ್ಗಳಲ್ಲಿ 6-7 ಮಂದಿ ಯುವಕರು ದರೋಡೆಗೆ ಯತ್ನಿಸುವ ಬಗ್ಗೆ ಮಂಗಳೂರು ಸಿಸಿಬಿ ಪೊಲೀಸರಿಗೆ ದೊರೆತ ಮಾಹಿತಿಯಂತೆ ದಾಳಿ ನಡೆಸಿ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಬಂಧಿತ ಆರೋಪಿಗಳು ಪ್ರಸ್ತುತ ಜೈಲ್ ನಲ್ಲಿ ವಿಚಾರಣಾ ಖೈದಿಯಾಗಿರುವ ಆಕಾಶಭವನ ಶರಣ್ ಎಂಬಾತನ ಸಹಚರರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳಿಂದ ಮಾರಕಾಯುಧಗಳನ್ನು, 3 ದ್ವಿಚಕ್ರ ವಾಹನಗಳನ್ನು ಹಾಗೂ 6 ಮೊಬೈಲ್ ಫೋನ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ಕಾರಾಗೃಹದಲ್ಲಿರುವ ವಿಚಾರಣಾಧೀನ ಖೈದಿ ಆಕಾಶಭವನ ಶರಣ್ ರೋಹಿದಾಸ್ ಎಂಬಾತನ ಸೂಚನೆಯಂತೆ ದರೋಡೆಗೆ ಸಂಚು ರೂಪಿಸಿದ್ದಾರೆಂದು ಹೇಳಲಾಗಿದೆ. ಆರೋಪಿಗಳ ಪೈಕಿ ಪ್ರೀತಂ ಎಂಬಾತನ ವಿರುದ್ಧ ಈ ಹಿಂದೆ ಮಂಗಳೂರು ಪೂರ್ವ, ಬರ್ಕೆ, ಕಾವೂರು ಪೊಲೀಸ್ ಠಾಣೆಗಳಲ್ಲಿ ದರೋಡೆಗೆ ಯತ್ನ, ಹಫ್ತಾ ಹಣಕ್ಕೆ ಬೆದರಿಕೆಗೆ ಸಂಬಂಧಪಟ್ಟಂತೆ 3 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಶಾಲ್ ಕುಮಾರ್ ಎಂಬಾತನ ವಿರುದ್ಧ ಕಾವೂರು, ಬರ್ಕೆ ಪೊಲೀಸ್ ಠಾಣೆಗಳಲ್ಲಿ ಒಟ್ಟು 2 ಪ್ರಕರಣಗಳು ದಾಖಲಾಗಿವೆ. ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ಸೊತ್ತನ್ನು ಮುಂದಿನ ಕ್ರಮಕ್ಕಾಗಿ ಮಂಗಳೂರು ಉರ್ವಾ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ಪೊಲೀಸ್ ಕಮೀಷನರ್ ಟಿ. ಆರ್.ಸುರೇಶ್ ಅವರ ಆದೇಶದಂತೆ ಡಿಸಿಪಿಗಳಾದ ಹನುಮಂತರಾಯ, ಉಮಾ ಪ್ರಶಾಂತ್ ಅವರ ಮಾರ್ಗದರ್ಶನದಲ್ಲಿ ಮಂಗಳೂರು ಸಿಸಿಬಿ ಘಟಕದ ಅಧಿಕಾರಿ ಹಾಗೂ ಸಿಬ್ಬಂದಿ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದಾರೆ.

Comments are closed.