ಕರಾವಳಿ

ಕೊಲೆ ಬೆದರಿಕೆ ಹಾಕಿ ಆಟೋ ಡ್ರೈವರ್‌ನಿಂದ ಅತ್ಯಾಚಾರ: ಗರ್ಭಿಣಿಯಾದ ಯುವತಿಯಿಂದ ಪೊಲೀಸರಿಗೆ ದೂರು

Pinterest LinkedIn Tumblr

 

ಕುಂದಾಪುರ: ಯುವತಿಯೋರ್ವಳ ಮೇಲೆ ಕಳೆದ ಐದಾರು ತಿಂಗಳುಗಳಿಂದ ನಿರಂತರ ಅತ್ಯಾಚಾರ ನಡೆಸಿ ಜೀವ ಬೆದರಿಕೆ ಹಾಕಿದ ರಿಕ್ಷಾ ಚಾಲಕ ಈಗ ಆಕೆ ಗರ್ಭಿಣಿಯಾದ ಬಳಿಕ ತಲೆಮರೆಸಿಕೊಂಡಿದ್ದಾನೆ. ಗಣೇಶ ಕುಲಾಲ್ ಎಂಬಾತನ ವಿರುದ್ಧ ಈಗ ದೂರು ದಾಖಲಾಗಿದೆ.

ಮೊಳಹಳ್ಳಿ ಮೂಲದ 22 ವರ್ಷ ಪ್ರಾಯದ ಯುವತಿಯೋರ್ವಳು ಕಳೆದ ಆಗಸ್ಟ್ 28 ರಂದು ಅನಾರೋಗ್ಯಕ್ಕೆ ಔಷಧಿ ತರಲು ಸಾಬ್ರಕಟ್ಟೆಗೆ ಗಣೇಶ್ ಕುಲಾಲನ ಆಟೋ ರಿಕ್ಷಾದಲ್ಲಿ ಹೋಗುತ್ತಿದ್ದ ವೇಳೆ ಆಕೆಯೊಂದಿಗೆ ಮಾತಿಗಿಳಿದ ಗಣೇಶ, ಕೊಕ್ಕರ್ಣೆಯಲ್ಲಿ ಒಳ್ಳೆ ವೈದ್ಯರಿದ್ದು, ಅವರು ಔಷಧಿ ಕೊಡುತ್ತಾರೆ, ಅಲ್ಲಿಗೆ ಹೋಗುವ ಎಂದು ಪುಸಲಾಯಿಸಿ ಅತ್ತ ಕರೆದೊಯ್ದಿದ್ದ. ದಾರಿ ಮಧ್ಯೆ ವಂಡಾರು ಹೊಸಮಕ್ಕಿ ಎಂಬಲ್ಲಿ ಆಟೋ ನಿಲ್ಲಿಸಿದ ಆತ ಅಲ್ಲಿ ಮನೆಯೊಂದಕ್ಕೆ ಕರೆದೊಯ್ದು ಆಕೆಯ ಮೇಲೆ ಬಲವಂತವಾಗಿ ಅತ್ಯಾಚಾರ ನಡೆಸಿದ್ದ. ಬಳಿಕ ಈ ವಿಚಾರವನ್ನು ಯಾರಲ್ಲಿ ಹೇಳಿದರೂ ಕೊಲ್ಲುವ ಬೆದರಿಕೆಯನ್ನು ಒಡ್ಡಿದ್ದ. ಇದರಿಂದ ಬೆದರಿದ ಯುವತಿ ಈ ವಿಚಾರವನ್ನು ಗೌಪ್ಯವಾಗಿಟ್ಟಿದ್ದಳು. ಆ ಬಳಿಕವೂ ಆಕೆಯನ್ನು ಬೆದರಿಸಿ, ಒತ್ತಾಯಪೂರ್ವಕವಾಗಿ ಆಕೆಯನ್ನು ಅದೇ ಮನೆಗೆ ಕರೆದೊಯ್ದ ಗಣೇಶ ಆಕೆಯ ಮೇಲೆ ಅತ್ಯಾಚಾರ ನಡೆಸುತ್ತಿದ್ದ ಪರಿಣಾಮ ಆಕೆ ಗರ್ಭವತಿಯಾಗಿದ್ದಳು. ಇತ್ತೀಚೆಗೆ ಮನೆಯಲ್ಲಿ ಈ ವಿಚಾರ ಬೆಳಕಿಗೆ ಬಂದ ಹಿನ್ನೆಲೆ ಯುವತಿ ಬಳಿ ವಿಚಾರಿಸಿದ್ದು ಆಕೆ ಸತ್ಯಾಂಶವನ್ನು ಬಾಯ್ಬಿಟ್ಟಿದ್ದಾಳೆ.

ಬಳಿಕ ಸಂತ್ರಸ್ತ ಯುವತಿಯನ್ನು ಶಂಕರನಾರಾಯಣ ಪೊಲೀಸ್ ಠಾಣೆಗೆ ಕರೆದೊಯ್ದು ಪ್ರಕರಣ ದಾಖಲಿಸಿದ್ದಾರೆ. ಇತ್ತ ತನ್ನ ಬಗ್ಗೆ ದೂರು ದಾಖಲಾಗುತ್ತಲೇ ಆರೋಪಿ ಗಣೇಶ ಪರಾರಿಯಾಗಿದ್ದಾನೆ.

ಸದ್ಯ ಪ್ರಕರಣ ದಾಖಲು ಮಾಡಿಕೊಂಡಿರುವ ಶಂಕರನಾರಾಯಣ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

———————–

ವರದಿ- ಯೋಗೀಶ್ ಕುಂಭಾಸಿ

Comments are closed.