ಕರಾವಳಿ

ಬಿ.ಎಂ.ಫಾರೂಕ್‌ರಿಂದ ‘ಬ್ಯಾರಿ ವಾರ್ತೆ’ ಮಾಸಿಕ ಬಿಡುಗಡೆ

Pinterest LinkedIn Tumblr

ಮಂಗಳೂರು, ಜನವರಿ.27: ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘ ಹೊರತಂದ ‘ಬ್ಯಾರಿ ವಾರ್ತೆ’ ಮಾಸಿಕದ ಬಿಡುಗಡೆ ಕಾರ್ಯಕ್ರಮವು ನಗರದ ಟಿಆರ್‌ಎಫ್ ಸಭಾಂಗಣದಲ್ಲಿ ಗುರುವಾರ ನಡೆಯಿತು. ಬೆಂಗಳೂರಿನ ದಿ ಬ್ಯಾರೀಸ್ ವೆಲ್ಫೇರ್ ಎಸೋಸಿಯೇಶನ್ನ ಅಧ್ಯಕ್ಷ ಬಿ.ಎಂ.ಫಾರೂಕ್ ಅವರು ‘ಬ್ಯಾರಿ ವಾರ್ತೆ’ಯನ್ನು ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಅವರು, ಸುಮಾರು 30 ವರ್ಷದ ಹಿಂದೆ ಬ್ಯಾರಿ ಹಿರಿಯ ನೇತಾರರು ಬೆಂಗಳೂರಿನಲ್ಲಿ ಹುಟ್ಟಿ ಹಾಕಿದ ಚಳವಳಿಯು ಇಂದು ತಾವು ಬ್ಯಾರಿಗಳು ಎಂದು ಹೆಮ್ಮೆಯಿಂದ ಹೇಳುವಂತಹ ವಾತಾವರಣವನ್ನು ಸೃಷ್ಟಿಸಿದೆ. ಒಂದು ಕಾಲದಲ್ಲಿ ಬ್ಯಾರಿ ಸಮುದಾಯ ಶಿಕ್ಷಣ, ರಾಜಕೀಯ, ಸಾಮಾಜಿಕ ರಂಗದಲ್ಲಿ ತೀರಾ ಹಿಂದುಳಿತ್ತು. ಇಂದು ಈ ಎಲ್ಲ ವಲಯಗಳಲ್ಲಿ ಬ್ಯಾರಿ ಸಮುದಾಯ ಮುನ್ನಡೆಯುತ್ತಿದೆ. ಆದರೆ, ಮಾಧ್ಯಮ ರಂಗದಲ್ಲಿ ಬ್ಯಾರಿ ಸಮುದಾಯದ ಪಾತ್ರ ಅಷ್ಟೇನೂ ಇಲ್ಲ.್ಬ್ಯಾರಿಗಳು ಪತ್ರಿಕೆ, ಆಕಾಶವಾಣಿ, ಟಿವಿ ಚಾನೆಲ್ಗಳನ್ನು ಹೊರತರುವ ಅಗತ್ಯವಿದೆ. ಅದು ಸಮುದಾಯದ ಧ್ವನಿಯಾಗಿ ಹೊರಹೊಮ್ಮಬೇಕಾಗಿದೆ. ಈ ನಿಟ್ಟಿನಲ್ಲಿ ‘ಬ್ಯಾರಿ ವಾರ್ತೆ’ ನಾಂದಿ ಹಾಡಲಿ ಎಂದರು.

ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಅಧ್ಯಕ್ಷ ಅಬ್ದುರ್ರವೂಫ್ ಪುತ್ತಿಗೆ ಮೊದಲ ಪ್ರತಿ ಸ್ವೀಕರಿಸಿದರು.ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್, ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಎಂ.ಅಸ್ಲಮ್, ಅಖಿಲ ಭಾರತ ಬ್ಯಾರಿ ಪರಿಷತ್ ಅಧ್ಯಕ್ಷ ಅಬ್ದುಲ್ ಅಝೀಝ್ ಬೈಕಂಪಾಡಿ, ದೇರಳಕಟ್ಟೆಯ ‘ಮೇಲ್ತೆನೆ’ ಸಂಘಟನೆಯ ಅಧ್ಯಕ್ಷ ಆಲಿಕುಂಞಿ ಪಾರೆ ಶುಭ ಹಾರೈಸಿದರು.

ಬ್ಯಾಸಾಸಂ ಅಧ್ಯಕ್ಷ ಹಾಗು ಬ್ಯಾರಿ ವಾರ್ತೆಯ ಸಂಪಾದಕ ಬಶೀರ್ ಬೈಕಂಪಾಡಿ ಅಧ್ಯಕ್ಷತೆ ವಹಿಸಿದ್ದರು.ಸಂಘದ ಕಾರ್ಯದರ್ಶಿ ಮುಹಮ್ಮದ್ ಶರೀಫ್ ನಿರ್ಮುಂಜೆ ಪ್ರಾರ್ಥನೆ ಗೀತೆ ಹಾಡಿದರು.ಪ್ರಧಾನ ಕಾರ್ಯದರ್ಶಿ ಉಮರ್ ಯು.ಎಚ್. ಸ್ವಾಗತಿಸಿ, ಪ್ರಾಸ್ತಾವಿಸಿದರು.ಸಂಚಾಲಕ ಹುಸೈನ್ ಕಾಟಿಪಳ್ಳ ವಂದಿಸಿದರು.ಕೋಶಾಧಿಕಾರಿ ಬಿ.ಎ.ಮುಹಮ್ಮದ್ ಅಲಿ ಕಾರ್ಯಕ್ರಮ ನಿರೂಪಿಸಿದರು.

ಓದುಗರು ತಮ್ಮ ಕೈಯಿಂದಾದಷ್ಟು ಹಣ ನೀಡಿ ಪತ್ರಿಕೆಯನ್ನು ಖರೀದಿಸಿ ಓದುವಂತೆ ಸಂಘಟಕರು ಸಭೆಯಲ್ಲಿ ಭಿನ್ನವಿಸಿದರು. ಅದರಂತೆ 10 ರೂ. ಮುಖ ಬೆಲೆಯ ಪತ್ರಿಕೆಗೆ 1,2,5, 10, 20, 50, 100, 500, 2,000 ಹೀಗೆ ಓದುಗರು ನೀಡಿ ಪ್ರೋತ್ಸಾಹಿಸಿದರು. ಒಟ್ಟಾರೆ ಕಾರ್ಯಕ್ರಮದಲ್ಲಿ 11,258 ರೂ.ವನ್ನು ಓದುಗರು ನೀಡುವ ಮೂಲಕ ಪ್ರೋತ್ಸಾಹಿಸಿದರು.

ಮಂಗಳೂರು ವಿವಿಯಲ್ಲಿ ಬ್ಯಾರಿ ಅಧ್ಯಯನ ಪೀಠ

ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರಿಗೆ ಭೇಟಿ ನೀಡಿದ ಸಂದರ್ಭ ಮಂಗಳೂರು ವಿವಿಯಲ್ಲಿ ಬ್ಯಾರಿ ಅಧ್ಯಯನ ಪೀಠ ಸ್ಥಾಪಿಸುವ ಬಗ್ಗೆ ತಾನು ಪ್ರಸ್ತಾಪಿಸಿದ್ದು, ಅದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಬ್ಯಾರಿ ಸಂಘಟನೆಗಳು ಈ ನಿಟ್ಟಿನಲ್ಲಿ ಸೂಕ್ತ ದಾಖಲೆಯೊಂದಿಗೆ ಮನವಿ ಸಲ್ಲಿಸಿದರೆ ಅಧ್ಯಯನ ಪೀಠ ಸ್ಥಾಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಬಿ.ಎ.ಮೊಯ್ದಿನ್ ಬಾವಾ ಹೇಳಿದರು.
__ವಾಭಾ

Comments are closed.