ಮಂಗಳೂರು,ಜನವರಿ.4: ಇತ್ತೀಚಿಗೆ ನಡೆದ ಕಾರ್ತಿಕ್ ರಾಜ್ ರಾಜ್ ಕೊಲೆ ಪ್ರಕರಣದ ತನಿಖೆ ವಿಳಂಭವಾಗಲು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹಾಗೂ ಮಂಗಳೂರು (ಉಳ್ಳಾಲ) ಕ್ಷೇತ್ರದ ಶಾಸಕ ಯು.ಟಿ.ಖಾದರ್ ಕಾರಣ. ಇವರ ಒತ್ತಡದಿಂದಾಗಿ ಕಾರ್ತಿಕ್ ರಾಜ್ ಕೊಲೆ ಪ್ರಕರಣ ಬಯಲಿಗೆ ಬರುತ್ತಿಲ್ಲ. ಪೊಲೀಸ್ ಅಧಿಕಾರಿಗಳಿಗೆ ನಿಷ್ಪಕ್ಷಪಾತವಾಗಿ ತನಿಖೆ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಕಾರ್ತಿಕ್ ಕೊಲೆ ಸಹಿತ ಉಳ್ಳಾಲ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ಪ್ರಕರಣಗಳನ್ನು ಸಿಬಿಐ ತನಿಖೆಗೊಳಪಡಿಸಬೇಕು ಎಂದು ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು ಆಗ್ರಹಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೊಣಾಜೆಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಸಂಸದರು ಬಾಯಿತಪ್ಪಿನಿಂದಾಗಿ ಪದ ಬಳಕೆ ಮಾಡಿದ್ದಾರೆಯೇ ವಿನಃ ಉದ್ದೇಶಪೂರ್ವಕವಲ್ಲ ಎಂಬುದು ಅವರ ಭಾಷಣದ ಕ್ಲಿಪ್ಲಿಂಗ್ ನೋಡಿದಾಗ ಅರಿವಾಗುತ್ತದೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇದೇ ವಿಷವನ್ನಿಟ್ಟುಕೊಂಡು ಬೆಂಕಿ ಹರಡಿಸುವ ಮತ್ತು ಅದೇ ಬೆಂಕಿಯಲ್ಲಿ ಬೇಳೆ ಬೇಯಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರ ಹಣ ನೀಡಿದ್ದರೂ ಶಿರಾಡಿ ಘಾಟ್ ಅಭಿವೃದ್ಧಿ, ತುಂಬೆ ವೆಂಟೆಡ್ ಡ್ಯಾಂ ಕಾಮಗಾರಿಗಳನ್ನು ಸಂಪೂರ್ಣ ಮಾಡಲು ಸಾಧ್ಯವಾಗದ ಜಿಲ್ಲೆಯ ಇಬ್ಬರು ಸಚಿವರು ತಮ್ಮ ಕ್ಷೇತ್ರದ ಅಭಿವೃದ್ಧಿ ವಿಚಾರಗಳನ್ನು ಮತ್ತು ತಮ್ಮ ವೈಲ್ಯವನ್ನು ಮರೆಮಾಚಲು ಸಂಸದರ ಹೇಳಿಕೆಯನ್ನೇ ದೊಡ್ಡದು ಮಾಡುವ ಮೂಲಕ ವಿವಾದಗೊಳಪಡಿಸುತ್ತಿದ್ದಾರೆ ಎಂದು ಟೀಕಿಸಿದರು.
ಮಾಜಿ ಶಾಸಕ ಯೋಗೀಶ್ ಭಟ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕ್ಯಾ. ಬ್ರಿಜೇಶ್ ಚೌಟ, ಕಾರ್ಯದರ್ಶಿಗಳಾದ ಉಮಾನಾಥ ಕೋಟ್ಯಾನ್, ಸುದರ್ಶನ್, ಕಿಶೋರ್ ರೈ, ಉಪಾಧ್ಯಕ್ಷರಾದ ರವಿಶಂಕರ್ ಮಿಜಾರ್, ರಾಮಚಂದ್ರ ಬೈಕಂಪಾಡಿ, ಜಿಲ್ಲಾ ವಕ್ತಾರ ಜಿತೇಂದ್ರ ಕೊಟ್ಟಾರಿ, ಜಿಲ್ಲಾ ಕೋಶಾಧಿಕಾರಿ ಸಂಜಯ ಪ್ರಭು ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Comments are closed.