ಕರಾವಳಿ

ಅವಳಿಗೆ ಹೊಸಬಾಳಿನ ಕನಸು – ಇವನಿಗೆ ಬದುಕನ್ನೆ ಕೊನೆಗೊಳಿಸುವ ಮನಸು : ಅದದ್ದು ಮಾತ್ರ…

Pinterest LinkedIn Tumblr

bntwl_lover_-suicide_4

ಪ್ರೇಯಸಿಗೆ ಚೂರಿಯಿಂದ ಇರಿದು ಆತ್ಮಹತ್ಯೆಗೈದ ಪ್ರಿಯತಮ

ಬಂಟ್ವಾಳ: ಇಬ್ಬರೂ ಮೊದಲೇ ನಿರ್ಧರಿಸಿಕೊಂಡು ಗುಡ್ಡಕ್ಕೆ ಬಂದಿದ್ದರು. ಆದರೆ ಆಕೆ ಮದುವೆಗಾಗಿ ಕರಿಮಣಿ, ಕಾಲುಂಗುರ ಹಿಡಿದುಕೊಂಡು ಬಂದಿದ್ದರೆ, ಆತ ಕೊಲೆ ನಡೆಸಲು ಮತ್ತು ಆತ್ಮಹತ್ಯೆ ಮಾಡಿಕೊಳ್ಳಲು ತಯಾರಾಗಿ ಬಂದಿದ್ದ. ವಿಶೇಷ ಎಂದರೆ ಆಕೆ ಹಿಂದಿನ ದಿನವೇ ಹೊಸಬಾಳಿನ ನಿರೀಕ್ಷೆಯಲ್ಲಿ ಖರೀದಿ ನಡೆಸಿದ್ದರೆ, ಆತ ಬದುಕನ್ನೇ ಕೊನೆಗೊಳಿಸಲು ಖರೀದಿ ನಡೆಸಿದ್ದ

ಅವಿವಾಹಿತ ಯುವಕನೋರ್ವ ತನ್ನ ಪ್ರೇಯಸಿಯನ್ನು ಚೂರಿಯಿಂದ ಇರಿದು ಕೊಂದು ಬಳಿಕ ತಾನೂ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಕೊಯಿಲ ಗ್ರಾಮದ ಪಾಂಡವರಗುಡ್ಡದಲ್ಲಿ ಮಂಗಳವಾರ ನಡೆದಿದೆ.

ಯುವತಿಯನ್ನು ಕೊಲೆ ಮಾಡಿ ಆತ್ಮಹತ್ಯೆಗೈದ ಯುವಕನನ್ನು ರಾಯಿ ಗ್ರಾಮ ಕುದ್ಮಾನ್‌ ನಿವಾಸಿ ಮೋಹನ ಪೂಜಾರಿ ಅವರ ಪುತ್ರ, ಮಂಗಳೂರಿನಲ್ಲಿ ಬಾರ್‌ ಬೆಂಡಿಂಗ್‌ ವೃತ್ತಿಯ ಸುಜಿತ್‌ (28) ಎನ್ನಲಾಗಿದೆ.

ಕೊಲೆಯಾದ ಯ್ವತಿಯನ್ನು ಬಿ. ಕಸ್ಬಾ ಗ್ರಾಮ ಕಡವಳಿಕೆ ನಿವಾಸಿ ಕರಿಯಣ್ಣ ಪೂಜಾರಿ ಅವರ ಪುತ್ರಿ, ಮಂಗಳೂರಿನ ಖಾಸಗಿ ಸಂಸ್ಥೆಯೊಂದರ ಉದ್ಯೋಗಿ ದಿವ್ಯಾ (25) ಎನ್ನಲಾಗಿದೆ.

bntwl_lover_-suicide_1

ಮೃತನು ಕೊಯಿಲದಲ್ಲಿ ತನ್ನ ಅಜ್ಜಿ ಗಿರಿಜಾ ಅವರ ಮನೆಯಲ್ಲಿ ಸೋಮವಾರ ರಾತ್ರಿ ತಂಗಿದ್ದು ಬೆಳಗ್ಗೆ 7 ಗಂಟೆ ಸುಮಾರಿಗೆ ಬಂದ ಫೋನ್‌ ಕರೆಯಂತೆ ಮನೆಯಿಂದ ಹೊರ ನಡೆದಿದ್ದಾನೆ ಎಂದು ಮನೆಯವರು ತಿಳಿಸಿದ್ದಾರೆ.

ಸುಮಾರು ಅರ್ಧ ಗಂಟೆ ಬಳಿಕ ತನ್ನ ಸಂಬಂಧಿ ಕಿರಣ್‌ ಅವರಿಗೆ ಫೋನ್‌ ಮಾಡಿ ನಾನು ಇಲ್ಲಿನ ಟ್ಯಾಂಕ್‌ ಬಳಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದ. ಅದರಂತೆ ಮನೆಮಂದಿ ಮತ್ತು ಇತರರು ಗುಡ್ಡದಲ್ಲಿ ಬೆಳಗ್ಗಿನಿಂದಲೇ ಹುಡುಕಾಟ ಆರಂಭಿಸಿದ್ದರೂ ಪತ್ತೆ ಆಗಿರಲಿಲ್ಲ.

ಸಂಜೆ 6ರ ವೇಳೆಗೆ ಗಣೇಶ ಅವರಿಗೆ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸುಜಿತ್‌ನ ಶವ ಮತ್ತು ನೆಲದಲ್ಲಿ ಕೊಲೆಯಾಗಿ ಬಿದ್ದಿದ್ದ ರಕ್ತಸಿಕ್ತ ಯುವತಿಯ ಶವ ಕಂಡುಬಂತು. ತತ್‌ಕ್ಷಣ ಅವರು ಮೃತನ ಅಜ್ಜಿ ಮನೆಗೆ ಮಾಹಿತಿ ರವಾನಿಸಿದರು. ಯುವಕ – ಯುವತಿ ಇಬ್ಬರೂ ದೂರದ ಸಂಬಂಧಿಗಳಾಗಿದ್ದು ಕೆಲವು ವರ್ಷಗಳಿಂದ ಪರಸ್ಪರ ಸ್ನೇಹ ಸಂಬಂಧ ಹೊಂದಿದ್ದರೆಂದು ತಿಳಿದುಬಂದಿದೆ.

bntwl_lover_-suicide_2

ದಿವ್ಯಾ ಅವರ ಸ್ಕೂಟರ್‌ ಗುಡ್ಡದ ಮರವೊಂದರ ಮರೆಯಲ್ಲಿ ಅನಾಥವಾಗಿ ನಿಂತಿದ್ದು ಅಲ್ಲಿಂದ ಸುಮಾರು 400 ಮೀ. ದೂರದಲ್ಲಿ ಘಟನೆ ನಡೆದಿದೆ. ಅಲ್ಲಿಯೇ ತರುಣಿಯ ಬ್ಯಾಗ್‌ ಮತ್ತು ಎರಡು ಮೊಬೈಲ್‌, ಸ್ಕೂಟರ್‌ನ ಕೀ ಮೊದಲಾದ ಸಾಮಗ್ರಿಗಳು ಅಲ್ಲಿಯೇ ಹತ್ತಿರದ‌ಲ್ಲಿದ್ದವು. ದಿವ್ಯಾ ಅವರ ದೇಹದಲ್ಲಿ ಅಲ್ಲಲ್ಲಿ ಚೂರಿಯಿಂದ ಇರಿದ ಗಾಯಗಳು ಕಂಡುಬಂದಿವೆ. ಎದೆ ಮತ್ತು ಮುಖಕ್ಕೆ ಚೂರಿಯಿಂದ ಇರಿದ ಆಳ ಗಾಯದಿಂದ ಸಾವು ಸಂಭವಿಸಿರಬೇಕು ಎಂದು ಶಂಕಿಸಲಾಗಿದೆ.

ಯುವಕನು ಹತ್ತಿರದ ಕನಪಾಡಿ ಮರದ ಟೊಂಗೆಗೆ ನೇಣು ಬಿಗಿದುಕೊಂಡಿದ್ದಾನೆ. ಆತನ ಕಾಲಿನ ಕೆಳಗೆ ಮೊಬೈಲ್‌ ಬಿದ್ದಿತ್ತು.

ತರುಣಿಯ ಸಂಬಂಧಿಕರು ನೀಡಿದ ಮಾಹಿತಿಯಂತೆ ಸುಜಿತ್‌ನ ಗುಣ ನಡತೆ ಆಷ್ಟೊಂದು ಉತ್ತಮವಿರಲಿಲ್ಲ. ಒಂದು ವರ್ಷದ ಹಿಂದೆ ಅವನ ವಿರುದ್ಧ ಠಾಣೆಗೆ ದೂರು ನೀಡಿದ್ದು, ಅಲ್ಲಿ ಪರಸ್ಪರ ಸಂಪರ್ಕದಲ್ಲಿ ಇರದಂತೆ ಮುಚ್ಚಳಿಕೆ ಬರೆಸಿಕೊಳ್ಳಲಾಗಿತ್ತು. ಆದರೂ ಅವನನ್ನೇ ಮದುವೆ ಆಗುವುದಾಗಿ ದಿವ್ಯಾ ಸಂಬಂಧಿಕರಲ್ಲಿ ತಿಳಿಸಿದ್ದಳು.

ಈ ನಡುವೆ ಮತ್ತೆ ಆತ್ಮೀಯರಾಗಿ ಮಗದೊಮ್ಮೆ ಯಾವುದೋ ವಿಚಾರದಲ್ಲಿ ಪರಸ್ಪರ ವೈಮನಸ್ಸು ಉಂಟಾಗಿರುವ ಸಾಧ್ಯತೆ ಕಾಣಿಸುತ್ತಿದೆ. ಮೃತನ ಸಹೋದರನೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, ಯಾವುದೋ ವಿಷಯಕ್ಕೆ ಅವರೊಳಗಿನ ಬಂದಿರುವ ವೈಮನಸ್ಸು ಘಟನೆಗೆ ಕಾರಣವಾಗಿರಬಹುದು ಎಂದಿದ್ದಾರೆ.

bntwl_lover_-suicide_3

ದೂರದ ಸಂಬಂಧಿಯಾಗಿದ್ದ ಅವಳನ್ನು ಈ ಹಿಂದೆ ತನ್ನದೇ ದ್ವಿಚಕ್ರ ವಾಹನದಲ್ಲಿ ಮನೆಗೂ ಕರೆದುಕೊಂಡು ಬಂದಿದ್ದ, ಅವರೊಳಗಿನ ಪ್ರೇಮದ ವಿಚಾರ ಮನೆಮಂದಿಗೂ ತಿಳಿದಿತ್ತು ಎಂದಿದ್ದಾರೆ. ಸುಜಿತ್‌ ಇತ್ತೀಚೆಗೆ ತನ್ನ ಪ್ರೇಯಸಿಗೆ ಹೊಸ ಆ್ಯಕ್ಟೀವಾ ಹೋಂಡ ತೆಗೆಸಿಕೊಟ್ಟಿದ್ದು ಆಕೆ ಅದರಲ್ಲಿಯೇ ಓಡಾಡುತ್ತಿದ್ದಳು. ದಿವ್ಯಾಳ ಮನೆ ಮಂದಿ ತೀರಾ ಬಡವರಾಗಿದ್ದು, ಐವರು ಮಕ್ಕಳಲ್ಲಿ ಆಕೆಯೇ ಹಿರಿಯವಳು. ಆಕೆಯ ತಂದೆ ಕೆಲ ವರ್ಷಗಳ ಹಿಂದೆ ತೀರಿ ಹೋಗಿದ್ದು, ತಾಯಿ ಕೂಲಿ ಕೆಲಸ ಮಾಡಿಕೊಂಡಿದ್ದಾರೆ ದಿವ್ಯಾಳ ದುಡಿತವೇ ಮನೆಯ ಆದಾಯವಾಗಿತ್ತು.

ಇಬ್ಬರೂ ಮೊದಲೇ ನಿರ್ಧರಿಸಿಕೊಂಡು ಗುಡ್ಡಕ್ಕೆ ಬಂದಿದ್ದರು. ಆದರೆ ಆಕೆ ಮದುವೆಗಾಗಿ ಕರಿಮಣಿ, ಕಾಲುಂಗುರ ಹಿಡಿದುಕೊಂಡು ಬಂದಿದ್ದರೆ, ಆತ ಕೊಲೆ ನಡೆಸಲು ಮತ್ತು ಆತ್ಮಹತ್ಯೆ ಮಾಡಿಕೊಳ್ಳಲು ತಯಾರಾಗಿ ಬಂದಿದ್ದ. ವಿಶೇಷ ಎಂದರೆ ಆಕೆ ಹಿಂದಿನ ದಿನವೇ ಹೊಸಬಾಳಿನ ನಿರೀಕ್ಷೆಯಲ್ಲಿ ಖರೀದಿ ನಡೆಸಿದ್ದರೆ, ಆತ ಬದುಕನ್ನೇ ಕೊನೆಗೊಳಿಸಲು ಖರೀದಿ ನಡೆಸಿದ್ದ.

ದಿವ್ಯಾ ಕರಿಮಣಿ ಮತ್ತು ಕಾಲುಂಗುರವನ್ನು ಖರೀದಿಸಿ ಬ್ಯಾಗ್‌ನಲ್ಲಿರಿಸಿ ಗುಡ್ಡಕ್ಕೆ ಬಂದಿದ್ದರೆ, ಸುಜಿತ್‌ ಹೊಸ ಚೂರಿ ಮತ್ತು ಹಗ್ಗ ಖರೀದಿಸಿ ಪ್ಲಾಸ್ಟಿಕ್‌ ಬ್ಯಾಗ್‌ನಲ್ಲಿರಿಸಿ ಮುಂಜಾನೆ ಗುಡ್ಡ ಏರಿದ್ದ. ಸುಜಿತ್‌ ದಿವ್ಯಾಳಿಗೆ ತಾಳಿ ಕಟ್ಟಿದ ಬಳಿಕ ಕೊಲೆ ಮಾಡಿದಂತಿದೆ.

ಹತ್ಯೆಗೆ ಬಳಸಿದ ಹೊಸದಾಗಿ ಖರೀದಿಸಿದ ಚೂರಿ ಯುವತಿಯ ಮೃತ ದೇಹದಿಂದ 2 ಅಡಿ ದೂರದಲ್ಲಿತ್ತು. ಅಲ್ಲದೆ ಕರಿಮಣಿ ಸರ ತುಂಡಾಗಿ ನೇತಾಡುತ್ತಿದ್ದು, ಕಾಲುಂಗುರ ಹತ್ತಿರದಲ್ಲಿ ಬಿದ್ದಿತ್ತು. ಸ್ಥಳದಲ್ಲಿ ಹುಲ್ಲು ಹುಡಿಯಾಗಿದ್ದು ಇಬ್ಬರ ನಡುವೆ ಕೊಸರಾಟ ನಡೆದಿರುವುದಕ್ಕೆ ಸಾಕ್ಷಿಯಾಗಿದೆ.

ವರದಿ ಕೃಪೆ ;ಉದಯವಾಣಿ

Comments are closed.