ಮಂಗಳೂರು, ಜನವರಿ 2 : ನಾಲ್ಕು ವರ್ಷಗಳ ಹಿಂದೆ 2012ರಲ್ಲಿ ನಡೆದ ಕೋಡಿಕೆರೆ ಶಿವರಾಜ್ ಕುಲಾಲ್ ಕೊಲೆ ಪ್ರಕರಣದ ಆರೋಪ ಸಾಬಿತಾಗಿದ್ದು, ಕೊಲೆ ಆರೋಪಿಗೆ ನಗರದ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಸೋಮವಾರ ತೀರ್ಪು ನೀಡಿದೆ.
ನ್ಯಾಯಾಲಯವು ಆರೋಪಿ ಕುಳಾಯಿ ನಿವಾಸಿ ದಿನೇಶ್ ಕುಲಾಲ್ (27)ಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.
ಶಿವರಾಜ್ ಕುಲಾಲ್ ಕೊಲೆ ಪ್ರಕರಣದಲ್ಲಿ ದಿನೇಶ್ ಹಾಗೂ ಪ್ರಕಾಶ್ ಎಂಬಿಬ್ಬರು ಪ್ರಮುಖ ಆರೋಪಿಗಳು.ಇವರಿಗೆ ಸೌದಿಯಲ್ಲಿರುವ ಅಶ್ರಫ್ ಎಂಬಾತ ಸುಪಾರಿ ನೀಡಿದ್ದ ಎನ್ನಲಾಗಿದೆ. ಆದರೆ ಶಿವರಾಜ್ ಕುಲಾಲ್ ಕೊಲೆ ಯ ಎರಡನೇ ಆರೋಪಿಯಾಗಿದ್ದ ಪ್ರಕಾಶ್ ಎಂಬಾತನನ್ನು 2014 ರಲ್ಲಿ ತಂಡವೊಂದು ಸುರತ್ಕಲ್ ಸಮೀಪದ ಎನ್ಐಟಿಕೆ ಬಸ್ ನಿಲ್ದಾಣದಲ್ಲಿ ಮಾರಕಾಸ್ತ್ರಗಳಿಂದ ಕಡಿದು ಹತ್ಯೆಗೈದಿತ್ತು.
ಇನ್ನೊರ್ವ ಆರೋಪಿ ದಿನೇಶ್ ಜೈಲಿನಲ್ಲಿದ್ದು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 5000 ರೂ.ದಂಡ ವಿಧಿಸಿ ತೀರ್ಪು ನೀಡಿದೆ. ದಂಡದ ಮೊತ್ತವನ್ನು ಶಿವರಾಜ್ ಮನೆಯವರಿಗೆ ನೀಡುವಂತೆ ಆದೇಶದಲ್ಲಿ ಹೇಳಲಾಗಿದೆ. ಸರಕಾರ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಹರಿಶ್ಚಂದ್ರ ಉದ್ಯಾವರ್ ವಾದ ಮಂಡಿಸಿದರು.
Comments are closed.